Select Your Language

Notifications

webdunia
webdunia
webdunia
webdunia

ಮಾನವ ಬದುಕಿನ ಮೇಲೆ ಗುರುವಿನ ನೆರಳು

ಮಾನವ ಬದುಕಿನ ಮೇಲೆ ಗುರುವಿನ ನೆರಳು

ಕೆ.ಅಯ್ಯನಾಥನ್

WD
ನಂಬಿಕೆ-ಅಪನಂಬಿಕೆಗಳ ನಮ್ಮ ಪಯಣದಲ್ಲಿ ಈ ಬಾರಿ ನಾವು ಸಾಗಿದ್ದು, ಪ್ರಾಚೀನ ಶಾಸ್ತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಜ್ಯೋತಿಷ್ಯ ಶಾಸ್ತ್ರದತ್ತ. ವಿಜ್ಞಾನ ಮತ್ತು ಆಧ್ಯಾತ್ಮಗಳ ನಡುವಿನ ಕೊಂಡಿಯೇ ಜ್ಯೋತಿಷ್ಯ ಶಾಸ್ತ್ರ ಎಂಬ ವಾದವಿಂದು ಪ್ರಬಲವಾಗುತ್ತಿದೆ.

ಪ್ರಕೃತಿ ಪುರುಷನ ಪ್ರತಿನಿಧಿಗಳಂತೇ ಇರುವ ನವ ಗ್ರಹಗಳು ಸಾಮಾನ್ಯ ಮನುಷ್ಯನ ಬದುಕಿನ ಜೀವನದ ಮೇಲೆ ನಿತ್ಯ ನಿರಂತರವಾಗಿ ತಮ್ಮ ಪ್ರಭಾವ ಬೀರುತ್ತವೆಯೇ ಎನ್ನುವುದಕ್ಕೆ ವಿಜ್ಞಾನವಿನ್ನೂ ಸ್ಪಷ್ಟ ಉತ್ತರ ಕಂಡುಕೊಂಡಿಲ್ಲ. ಆದರೂ ಭಾರತೀಯ ಸಂಸ್ಕೃತಿಯಲ್ಲಿ ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿದೆ. ಹುಟ್ಟಿನಿಂದ ಸಾಯುವವರೆಗೆ ಜ್ಯೋತಿಷ್ಯ ವ್ಯಕ್ತಿಯ ಬೆನ್ನು ಬಿಡುವುದಿಲ್ಲವೋ ಅಥವಾ ವ್ಯಕ್ತಿಯೇ ಬಿಡುವುದಿಲ್ಲವೋ ಅರಿಯದು.

ಕಳೆದ ನವೆಂಬರ್ 16, ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ವದ ದಿನವಾಗಿತ್ತು. ಅಂದು ನವಗ್ರಹಗಳಲ್ಲೊಂದಾದ ಗುರುವು ವೃಶ್ಚಿಕ ರಾಶಿಯಿಂದ ಧನು ರಾಶಿಯತ್ತ ಸಾಗಿದ ದಿನ. ಈ ರೀತಿಯ ಗ್ರಹ ಸ್ಥಾನ ಪಲ್ಲಟಗಳು ಮಾನವನ ಬದುಕಿನ ಮೇಲೆ ಪರಿಣಾಮ ಬೀರುತ್ತವೆ ಎಂದೂ ಮತ್ತು ವ್ಯಕ್ತಿಯ ಜೀವನದಲ್ಲಿ ಬದಲಾವಣೆಗಳು ಸಂಭವಿಸಲು ಗ್ರಹಗಳ ಸ್ಥಾನ ಪಲ್ಲಟ ಕಾರಣವೇ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಲೇ ಬಂದಿದೆ.

webdunia
WD
ತಮಿಳುನಾಡಿನ ಅಲಂಗುಡಿಯಲ್ಲಿ ಇರುವ ಗುರುಭಗವಾನ್ ಮಂದಿರದಲ್ಲಿ ನವೆಂಬರ್ 16 ರಂದು ದೈವಭಕ್ತರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದ್ದು ಇದೇ ಗುರು ಸ್ಥಾನ ಪಲ್ಲಟ. ತಂಜಾವೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಲಂಗುಡಿಯಲ್ಲಿ ಶಿವನ ಕುರಿತು ಗುರು ಭಗವಾನ್ ತಪಸ್ಸು ಮಾಡಿದನೆಂಬ ಪ್ರತೀತಿ ಇದೆ. ಶಿವನನ್ನು ಪೂಜಿಸಿದ ಗುರುವಿನ ಪೂಜೆಗಾಗಿ ಅಲ್ಲಿಗೆ ಸಾವಿರಾರು ಜನರು ಆಗಮಿಸುತ್ತಾರೆ.

ತಮಿಳು ನಾಡಿನಲ್ಲಿ ಇರುವ ಶಿವನ ದೇವಸ್ಥಾನಗಳ ವಿಶೇಷತೆ ಎಂದರೆ ಈ ಮಂದಿರಗಳಲ್ಲಿ ಗುರು ಭಗವಾನ್ ಮೂರ್ತಿ ಇದ್ದು, ಎಂದಿನಂತೆ ಪೂಜಾ ಕೈಂಕರ್ಯ ನಡೆಯುತ್ತಿರುತ್ತದೆ. ಸ್ಥಾನ ಪಲ್ಲಟದ ದಿನ ಶಿವನ ದೇವಸ್ಥಾನಗಳಲ್ಲಿ ಇರುವ ಗುರು ಭಗವಾನ್ ದರ್ಶನಕ್ಕೆ ಜನರು ಮುಗಿ ಬೀಳುವುದು ವಾಡಿಕೆ.

webdunia
WD
ಈ ಗ್ರಹ ಸ್ಥಾನ ಪಲ್ಲಟಕ್ಕೆ ಏಕಿಷ್ಟು ಮಹತ್ವ ? ರಾಶಿ ಚಕ್ರದಲ್ಲಿ ನಾಲ್ಕು ಗ್ರಹಗಳ ಚಲನೆ ಮುಖ್ಯವಾದುದು. ಶನಿ, ಗುರು, ರಾಹು ಮತ್ತು ಕೇತು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪಯಣ ಬೆಳೆಸಿದ ನಂತರ ಜನ್ಮ ನಕ್ಷತ್ರದ ಅನುಗುಣವಾಗಿ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ಸಂಭವಿಸುತ್ತದೆ.

ಈ ನಾಲ್ಕು ಗ್ರಹಗಳಲ್ಲಿ ಗುರು ಗ್ರಹ ಹೊರತು ಪಡಿಸಿ ಉಳಿದ ಮೂರು ಗ್ರಹಗಳು ಋಣಾತ್ಮಕ ಪ್ರಭಾವವನ್ನು ವ್ಯಕ್ತಿಯ ಮೇಲೆ ಬೀರುತ್ತವೆ. ಗುರುಗ್ರಹ ಶುಭಕಾರಕವಾಗಿರುವುದರಿಂದ ವ್ಯಕ್ತಿಯ ಜೀವನದಲ್ಲಿನ ಪ್ರಮುಖ ಹಂತಗಳಾದ ವಿವಾಹ, ವ್ಯವಹಾರ, ಬಡ್ತಿ ಮುಂತಾದವುಗಳ ಮೇಲೆ ನೇರ ಪರಿಣಾಮ ಬೀರಿ ವ್ಯಕ್ತಿಯ ಉತ್ಕರ್ಷಕ್ಕೂ ಮತ್ತು ಅಧಃಪತನಕ್ಕೂ ಹೇತುವಾಗುತ್ತದೆ ಎಂಬುದು ಜ್ಯೋತಿಷಿ ಕೆ.ಪಿ. ವಿದ್ಯಾಧರನ್ ಅಭಿಪ್ರಾಯ.

webdunia
WD
ಬಹುಶಃ ಅಂದು, ಇಂದು ಎಂದೆಂದೂ... ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಹಿಂದೂಗಳ ಜೀವನದ ಅವಿಭಾಜ್ಯ ಅಂಗವಾಗಿ ಉಳಿಯಲಿದೆ. ವೇದಕಾಲದಲ್ಲಿ ಸೂರ್ಯಮಂಡಲ, ನಕ್ಷತ್ರಗಳು ಮತ್ತು ಗ್ರಹಗಳ ಚಲನೆಯನ್ನು ಕರಾರುವಾಕ್ ಆಗಿ ನಮ್ಮ ಪ್ರಾಚೀನ ಋಷಿಗಳು ಗುರುತಿಸಿದ್ದರು. ಅಲ್ಲದೇ ಗ್ರಹಗಳಿಗೆ ಇಟ್ಟಿರುವ ಹೆಸರುಗಳು ಕೂಡ ಅವುಗಳ ಸ್ವಭಾವ ಭೌತಿಕ ಜಗತ್ತಿನ ಮೇಲೆ ಬೀರುವ ಪರಿಣಾಮವನ್ನು ಸೂಚಿಸುತ್ತಿದ್ದು, ಇವುಗಳನ್ನು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಿರುವುದು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿದೆ.

webdunia
WD
ಭಾರತೀಯ ವೇದ ವಿಜ್ಞಾನವನ್ನು ಎಲ್ಲರೂ ನಂಬುತ್ತಾರೆ ಎಂದು ತಿಳಿಯಬೇಕಿಲ್ಲ. ಜ್ಯೋತಿಷ್ಯ ವಿಜ್ಞಾನವನ್ನು ತೆಗಳುವವರು ಇದ್ದಾರೆ. ಇದೆಲ್ಲ ಬೊಗಳೆ ರಾಮಾಯಣ ಎಂದು ಹೇಳುವವರು ಇದ್ದಾರೆ. ವ್ಯಕ್ತಿಯ ವಿಚಾರ ಅವನ ಮಾನಸಿಕ ಸಾಮರ್ಥ್ಯ ತಲುಪುವ ಗುರಿಯನ್ನು ನಿರ್ಧರಿಸುತ್ತದೆ ವಿನಃ ಗ್ರಹಗಳಲ್ಲ. "ಬದುಕಿನಲ್ಲಿ ಬರುವ ಸವಾಲನ್ನು ಧೈರ್ಯವಾಗಿ ಎದುರಿಸಿ. ಗಳಿಸಿದ ಅನುಭವದ ಮೇಲೆ ಮುನ್ನಡೆಯಿರಿ" ಎಂಬ ಮಾತನ್ನೂ ಕೇಳುತ್ತೇವೆ.

ಪರ, ವಿರೋಧ ವಾದಗಳು ಏನೇ ಇರಲಿ, ನಂಬಿಕೆಯನ್ನು ಅಷ್ಟು ಸುಲಭವಾಗಿ ಅಲುಗಾಡಿಸುವುದು ಸಾಧ್ಯವಾಗದ ಮಾತು. ಲೇಖನ ಓದಿದ ನಂತರ ನಿಮ್ಮ ಪರ, ವಿರೋಧ ನಿಲುವಿಗೆ ಸ್ವಾಗತ ಇದೆ.

Share this Story:

Follow Webdunia kannada