Publish Date: Sat, 16 Mar 2024 (09:04 IST)
Updated Date: Sat, 16 Mar 2024 (09:13 IST)
ಬೆಂಗಳೂರು: ನಮ್ಮ ವೇದ, ಪುರಾಣಗಳಲ್ಲಿ ಹಸುವಿಗೆ ದೇವರ ಸ್ಥಾನಮಾನವಿದೆ. ಗೋವಿನಲ್ಲಿ ಮುಕ್ಕೋಟಿ ದೇವರು ನೆಲೆಸಿದ್ದಾರೆಂಬುದು ಹಿಂದೂಗಳ ನಂಬಿಕೆಯಾಗಿದೆ. ಗೋ ದಾನವೂ ಅಷ್ಟೇ ಶ್ರೇಷ್ಠವಾಗಿದೆ.
ನಮ್ಮ ಅನೇಕ ಪಾಪ ಪರಿಹಾರ ಮಾಡಲು ಗೋ ದಾನ ಮಾಡಿದರೆ ಶ್ರೇಯಸ್ಕರವಾಗಬಹುದು ಎಂದು ಜ್ಯೋತಿಷ್ಯವೇ ಹೇಳುತ್ತದೆ. ಗೋವು ನಾವು ಮಾಡಿದ ಪಾಪ ಕಳೆಯುವುದಲ್ಲದೆ, ನಮ್ಮ ಜಾತಕದಲ್ಲಿರುವ ದೋಷಗಳನ್ನೂ ಪರಿಹಾರ ಮಾಡುತ್ತದೆ. ಯಾವುದೇ ದೋಷ ಪರಿಹಾರ್ಥ ಪೂಜೆ ಸಂಪೂರ್ಣ ಯಶಸ್ವಿಯಾಗಬೇಕಾದರೆ ಗೋದಾನ ಮಾಡಿದರೆ ಶ್ರೇಯಸ್ಕರ.
ಕೆಲವೊಮ್ಮೆ ನಾವು ಉದ್ದೇಶಪೂರ್ವಕವಾಗಿಯೋ, ಉದ್ದೇಶಪೂರ್ವಕವಲ್ಲದೆಯೋ ಕೆಲವು ತಪ್ಪು ಅಥವಾ ಅಪರಾಧಗಳನ್ನು ಮಾಡುತ್ತೇವೆ. ಈ ಪಾಪ ಕರ್ಮಗಳನ್ನು ತೊಡೆದು ಹಾಕಲು ವಿಪ್ರರಿಗೆ ಗೋದಾನ ಮಾಡಿದರೆ ಒಳಿತಾಗುತ್ತದೆ. ಅದಲ್ಲದೆ ಪಿತೃ ಧೋಷಗಳು ನಿವಾರಣೆಯಾಗಬೇಕಾದರೆ, ಜಾತಕದಲ್ಲಿರುವ ಗ್ರಹ ಗತಿಗಳ ದೋಷ ಪರಿಹಾರಕ್ಕೆ ಗೋದಾನ ಮಾಡಿದರೆ ಶ್ರೇಷ್ಠ.
ಕೇವಲ ದಾನ ಮಾತ್ರವಲ್ಲ, ಗೋವುಗಳಿಗೆ ಆಹಾರ ಅಥವಾ ಗೋಗ್ರಾಸ ನೀಡುವುದೂ ಅನೇಕ ದೋಷ ಪರಿಹಾರಕ್ಕೆ ಉತ್ತಮ ಮಾರ್ಗವಾಗಿದೆ. ಚಿಕ್ಕಮಗುವಿನ ಜಾತಕ ದೋಷಕ್ಕಾಗಿ ಗೋ ಪೂಜೆ ಅಥವಾ ಗೋವಿನ ಅಡಿಯಲ್ಲಿ ಮಗುವನ್ನು ಮಲಗಿಸಿದಾಗ ಆ ದೋಷಗಳನ್ನು ಗೋವು ನಮ್ಮಿಂದ ಕಳೆದು ತಾನು ನುಂಗಿ ಹಾಕುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಗೋವುಗಳಿಗೆ ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ವಿಶಿಷ್ಟವಾದ ಸ್ಥಾನಮಾನವಿದೆ.