ಇಂದಿನಂತೆ, ಭಿತ್ತಿಪತ್ರಗಳ ಪ್ರದರ್ಶನ ನಡೆಸಬೇಕು ಎಂದಿರಲಿಲ್ಲ. ಕರಪತ್ರಗಳನ್ನು ಕಡ್ಡಾಯವಾಗಿ ಗಾಳಿಗೆ ತೂರಬೇಕಾಗಿರಲಿಲ್ಲ. ಕಾರುಗಳಲ್ಲಿ ಧ್ವನಿವರ್ಧಕಗಳನ್ನು ಇರಿಸಿಕೊಂಡು “ಬನ್ನಿರಿ, ನೋಡಿರಿ! ಆನಂದ ಪಡೆಯಿರಿ!” ಇತ್ಯಾದಿಗಳ ಕಂಠಶೋಷಣೆ ಮಾಡಬೇಕಾಗಿರಲಿಲ್ಲ.
ಆಟವಾಡಿಸುವ ವೀಳಯವನ್ನು ಊರ ಪ್ರಮುಖರಿಂದ ಪಡೆದುಕೊಂಡರೆ-ಯಜಮಾನನ ಕೆಲಸ ಮುಗಿಯಿತು.
ಊರವರೇ ಮಾಡಿಕೊಡುವ ರಂಗಸ್ಥಳದ ಬಳಿ “ಚೌಕಿ” (ಬಣ್ಣ ಹಾಕಿಕೊಳ್ಳುವ ಸ್ಥಳ)ಯ ಸಮೀಪದಿಂದ ಸಾಯಂಕಾಲದ ಒಂದು ಘಳಿಗೆಯ ಕಾಲ ಚೆಂಡೆಯ “ಕೇಳಿ” ಬಾರಿಸಿದರೆ- ಅದೇ ಪ್ರಚಾರ ಸಾರುತ್ತಿತ್ತು. “ಇಂದೆಲ್ಲಿ ಆಟವಿದೆ?” ಎಂದು ಜನರು ಕುತೂಹಲ ತಳೆಯುತ್ತಿದ್ದರು.
ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಐದಾರು ಮೈಲಿಗಳ ದೂರ ಕೇಳಿಸುವ ಚೆಂಡೆಯ ಸದ್ದಿನಿಂದಲೇ ಆಟವಾಗುವ ಸ್ಥಳದ ದಿಕ್ಕು- ದೆಸೆಗಳನ್ನು ತಿಳಿದುಕೊಳ್ಳುತ್ತಿದ್ದರು. ವಿಚಾರಿಸಿ ಅರಿತು, ಬಯಲಾಟಕ್ಕೆ ಭೇಟಿ ಕೊಡುವ ಸಿದ್ಧತೆ ನಡೆಸುತ್ತಿದ್ದರು.
ಸಂಜೆಗತ್ತಲಿನಲ್ಲೇ ಹೊರಟು ಆಟದ ಸ್ಥಳಕ್ಕೆ ಬಂದು ಸೇರಿದರೆಂದರೆ ಮುಂಜಾವಿನ ಮುಂಬೆಳಕಿನವರೆಗೂ ಅಲ್ಲೇ ಉಳಿಯುತ್ತಿದ್ದರು. ಆಟ ನೋಡಲು ಬಂದು, ಅಲ್ಲಿ ತೂಕಡಿಸುವುದೆಂದರೆ ಅಂದಿನ ಹಿರಿಯರ ದೃಷ್ಟಿಯಲ್ಲಿ ಮಹಾಪಾಪ.
ತೂಕಡಿಕೆ ಕೂಡಾ ಬಾರದೆ ರಾತ್ರಿಯಿಡೀ ಆಟ ನೋಡಿದೆ ಎಂದು ಹೇಳಿಕೊಳ್ಳಲು ಹುಡುಗರಿಗೆಲ್ಲಾ ಹೆಗ್ಗಳಿಕೆ. ವೇಷಗಳ ವಿವಿಧ ರೀತಿಯ ಕುಣಿತಗಳನ್ನು ಕಾಣಬೇಕು- ಅವರ ಆರ್ಭಟ- ಅಟ್ಟಹಾಸಗಳನ್ನು ಕೇಳಿದಾಗ ನಡುಗಬೇಕು- ಪಾತ್ರಗಳ ಪರಸ್ಪರ ವಿಮರ್ಶೆ ನಡೆಸಬೇಕು. ಇವೆಲ್ಲವೂ ರಂಗಸ್ಥಳಕ್ಕೆ ಸಾಧ್ಯವಾದಷ್ಟು ಸಮೀಪವಾಗಿ ಕುಳಿತಿದ್ದ ಹುಡುಗರು ನಡೆಸುವ ಕೆಲಸಗಳು.
ನಾನೂ ಅಂತಹ ಕೆಲಸ ನಡೆಸುತ್ತಿದ್ದೆ. ಇತರರಿಗಿಂತ ಹೆಚ್ಚು ಉತ್ಸಾಹ ತೋರುತ್ತಿದ್ದೆನಾದರೆ ಅದು ಸ್ವಾಭಾವಿಕ. ಬಯಲಾಟದ ಬಗ್ಗೆ ಹೆಚ್ಚಿನ ಉತ್ಸಾಹ ಬರಲು ವಿಶೇಷವಾದ ಕಾರಣ ಬಯಲಾಟ ಎಂದರೆ ಬೇಕಾದಾಗ ಸಿಗುವ ಮನರಂಜನೆ ಅಲ್ಲದಿದ್ದುದೇ ಆಗಿತ್ತು.
ಪ್ರತಿ ವರ್ಷದ ಮಾರ್ಗಶಿರ ಮಾಸದಲ್ಲಿ ಪ್ರಾರಂಭವಾದ ಬಯಲಾಟದ ಮೇಳಗಳ ತಿರುಗಾಟ ವೈಶಾಖ ಮಾಸದ ದಶಮಿಯಂದು ಅಂತ್ಯಗೊಳ್ಳುವ ಪರಂಪರೆ. ಅಂದಿಗೆ ಸಂಪ್ರದಾಯ ಪ್ರಕಾರ ತಿರುಗಾಟ ಮುಗಿಸಿ, ಮೇಳದ ಲೆಕ್ಕಾಚಾರವನ್ನು ಒಪ್ಪಿಸುವ ಕ್ರಮವೂ ಇದೆ.