ಜಟಾವಲ್ಕಲಧಾರಿಗಳಾಗಿ ರಾಮಲಕ್ಷ್ಮಣರು ಕಾಡಿಗೆ ಹೊರಟರು ಎಂದು ಕವಿ ನುಡಿದಾಗ, ರಾಮ-ಲಕ್ಷ್ಮಣ ಇವರಿಬ್ಬರೂ ರಾಜಯೋಗ್ಯವಾದ ಉಡುಗೆ-ತೊಡುಗೆಗಳಿಂದಲೇ ಮೆರೆಯುತ್ತಿದ್ದರು. ಇಬ್ಬರ ತಲೆಯಲ್ಲೂ ಕಿರೀಟಗಳು ಇರುತ್ತಿದ್ದವು.
ಅಂತಹ ಪ್ರಸಂಗಗಳಲ್ಲಿ ರಾಮಲಕ್ಷ್ಮಣರು ವನವಾಸ ಮಾಡುವವರಂತೆಯೇ ಇರಬೇಕು ಎಂದೆ.
ಯಜಮಾನರು 'ಅಸ್ತು' ಎಂದರು. ಉಳಿದವರು ತಲೆ ಬಾಗಿದರು.
ಆಂಜನೇಯನ ವೇಷ, ಅವನಿಗಾಗಿಯೇ ಇರುವ ಒಂದು ವಿಶಿಷ್ಟ ಕಿರೀಟದಿಂದ ಮಾತ್ರವೇ ಗುರುತಿಸುವಂತೆ ಇರುತ್ತಿತ್ತು. ಉಳಿದ ವೇಷ-ಭೂಷಣಗಳೆಲ್ಲ, ರಾಕ್ಷಸ ಪಾತ್ರಗಳವು. ಆ ಕಿರೀಟದಿಂದಲೂ, ಆ ಕಪಿಚೇಷ್ಟೆಗಳಿಂದಲೂ (ಕೆಲವೊಮ್ಮೆ ಮಾತಿನಿಂದಲೂ) ಅವನು ಹನುಮಂತ ಎಂದು ತಿಳಿಯುವ ಪರಿಸ್ಥಿತಿ ಇತ್ತು.
ಅದನ್ನೂ ಬದಲಾಯಿಸಬೇಕು. ಹನುಮಂತ ವಾನರ ವೀರನೆಂದಾದರೆ, ಅವನ ವೇಷವೂ ಅಂತೆಯೇ ಇರಬೇಕು ಎಂದು ಬಯಸಿದೆ.
" ನೀನೇ ಮಾಡಿ ತೋರಿಸು" ಎಂದರು ಶ್ರೀ ಶೆಟ್ಟರು.
ಹೊಸ ಮಾರುತಿ ಮಾರುತಿಯ ಮೈಯನ್ನೇ ಹೋಲುವ ಕೃತಕ ರೋಮಗಳಿಂದ ಅಂಗಿಯೊಂದನ್ನು ತಯಾರಿಸಿದೆ. ಅಂಗಿಯ ಬಣ್ಣವನ್ನೇ ಹೋಲುವಂತೆ ಮುಖದ ಬಣ್ಣವನ್ನೂ ಬದಲಾಯಿಸಬೇಕು ಎಂದುಕೊಂಡೆ. ಚಿತ್ರಣವಂತೂ ಮನಸ್ಸಿನಲ್ಲಿ ಸ್ಪಷ್ಟವಾಗಿತ್ತು.
ಇರಾ ಎಂಬ ಊರಿನಲ್ಲಿ ನಿಶ್ಚಯಿಸಿದ ಆಟಕ್ಕೆ (ಹನುಮಂತನ ಪ್ರಥಮ ಪ್ರಯೋಗಕ್ಕಾಗಿಯೇ ಎಂದರೂ ಹೆಚ್ಚಲ್ಲ) "ಚೂಡಾಮಣಿ" ಪ್ರಸಂಗವನ್ನು ಆಯ್ದುಕೊಂಡೆವು.
ಹನುಮಂತನ ಪಾತ್ರಕ್ಕಾಗಿಯೇ ಸಿದ್ಧಪಡಿಸಿಕೊಂಡಿದ್ದ ನಾಟ್ಯದ ಹೆಜ್ಜೆಗಳೊಂದಿಗೆ ರಂಗಸ್ಥಳವನ್ನು ಪ್ರವೇಶಿಸಿದಾಗ ಜನ ಸಮೂಹದ ಕೈ ಚಪ್ಪಾಳೆಯೇ ನನ್ನನ್ನು ಸ್ವಾಗತಿಸಿತು.
ಅಷ್ಟೊಂದು ಹುರುಪು ಬಾರದೆ, ಜನರು ಪ್ರಥಮ ಪ್ರವೇಶದಲ್ಲಿಯೇ ಯಾರನ್ನೂ ಮೆಚ್ಚಲಾರರು. ಪ್ರಯೋಗ ಫಲಕಾರಿಯಾಗಬಹುದು ಎಂಬ ಧೈರ್ಯ ಬಂದಿತು.
ಅಂದು ಅಶೋಕವನದ ಸೀತೆಯಿಂದ ಹನುಮ ಚೂಡಾಮಣಿಯನ್ನು ಪಡೆದು ರಾಮನ ಬಳಿಗೊಯ್ದಾಗ, ಯಕ್ಷಗಾನ ಕಲಾಮಾತೆಯಿಂದ ಸುಧಾರಣೆಯ ಆಶೀರ್ವಾದದ ಮಣಿಯನ್ನು ಪಡೆದು ರಸಿಕ ರಾಮರೆಡೆಗೆ ಒಯ್ಯುತ್ತಲಿದ್ದೇನೆ ಎಂದೇ ನನ್ನ ಭಾವನೆಯಾಗಿತ್ತು.
ಹಿಂದೆ, ರಂಗಸ್ಥಳಕ್ಕೆ ಬೀಳುತ್ತಲಿದ್ದ ದೀವಟಿಗೆಯ ಬೆಳಕಿನಲ್ಲಿ ಸುಸ್ಪಷ್ಟವಾಗಿ ಕಾಣುವ ರೀತಿಯ ಬಣ್ಣಗಾರಿಕೆ ಇದ್ದಿತು. ಅನಂತರ ಪೆಟ್ರೋಮ್ಯಾಕ್ಸ್ ದಿನಗಳು ಕಾಲಿಟ್ಟಾಗ, ಆ ಬಿಳಿಯ ಬೆಳಕಿಗೂ, ಬಳಿವ ಬಣ್ಣಕ್ಕೂ ಹೊಂದಿಕೆಯಾಗುವುದೆ? ಎಂದು ಯಾರೂ ಪರಿಶೀಲಿಸಿ ನೋಡುವ ತಾಳ್ಮೆ ತೆಗೆದುಕೊಂಡಿರಲಿಲ್ಲ.
ಮುಖವರ್ಣಿಕೆ- ವೇಷಭೂಷಣಗಳು- ಹತ್ತಿರಕ್ಕೂ, ದೂರಕ್ಕೂ ಒಂದೇ ಬಗೆಯಾಗಿ ಕಾಣುವಂತಹ ವೇಷ ವೈವಿಧ್ಯಗಳ ಕುರಿತು ಯೋಚಿಸಿದ್ದೆ. ಅವುಗಳನ್ನೆಲ್ಲ ಒಂದೊಂದಾಗಿ ಮಾಡಿ ನೋಡುವ ಅವಕಾಶ ಒದಗುತ್ತಾ ಬಂದಿತು.
ಇಂದಿಗೆ, ಹನುಮಂತನ ವೇಷಕ್ಕೆ ಬಣ್ಣಗಾರಿಕೆ ಹೇಗೆ? ವೇಷಭೂಷಣಗಳು ಯಾವುವು? ಎಂದು ಯಾರಾದರೂ ಪ್ರಶ್ನಿಸಿದರೆ 'ಚೂಡಾಮಣಿ'ಯಲ್ಲಿ ಕಂಡುಬರುವ ಹನುಮಂತನ ವರ್ಣನೆಯನ್ನೇ ಮಾಡುವವರು ಹೆಚ್ಚು.
ಹಿಂದೆ ಇದ್ದ ಹನುಮಂತನ ವೇಷ ಹಿಂದಿನ ಆಟಗಳನ್ನು ನೋಡಿದ್ದೇವೆ-ಎನ್ನುವವರಿಗೂ, ಬಹಳ ಹಿಂದಿನಿಂದಲೇ ಪಾತ್ರ ವಹಿಸುತ್ತಲಿದ್ದವರಿಗೂ ನೆನಪಿರಬಹುದು.
ಅವರಲ್ಲೂ ಕೆಲವರು "ಅದು ಹೇಗಿತ್ತು ಎಂದು ನನಗೆ ಸರಿಯಾಗಿ ನೆನಪಿಲ್ಲ" ಎಂದರೂ ಆಶ್ಚರ್ಯಪಡಬೇಕಾಗಿಲ್ಲ.
ನಾನು ಮಾಡಿದುದು ತಪ್ಪಾಯಿತೆ? ಪರಂಪರೆಯನ್ನು ಹಾಗೆ ಬದಲಾಯಿಸಬಹುದಿತ್ತೆ? ಎಂದು ನನ್ನನ್ನು ನಾನೇ ಕೇಳಿಕೊಳ್ಳುವ ಕಾಲ ಆಗ ಬಂದಿರಲಿಲ್ಲ.
ನಿರೂಪಣೆ:
ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)