ಸಂಗೀತ ನಾಟಕದ ಕೃಷ್ಣನಂತೆ (ಅಥವಾ ರವಿವರ್ಮನ ಚಿತ್ರದಂತೆ) ಶ್ಯಾಮಲಕಾಯನಾಗಿ, ಪೀತಾಂಬರಧಾರಿಯಾಗಿ, ವೇಣುವಾದಕನಾಗಿ ಕಾಣಿಸಿಕೊಳ್ಳಬೇಕೆ?
ಸ್ವಲ್ಪ ಹೊತ್ತು ಆ ರೀತಿಯ ಜಿಜ್ಞಾಸೆ ನಡೆಯಿತು.
ಕೊನೆಗೆ- ಕುಣಿತ ಹೇಗಾದರೂ ಇಲ್ಲ. ಕುಣಿತಕ್ಕೇ ಹೆಚ್ಚು ಅನುಕೂಲ ತೋರುವ, ನನಗೆ ಅಪರಿಚಿತವೇ ಆಗಿರುವ, ಆಟದ ವೇಷವೇಕೆ ? ನನ್ನ ಭಾವ ಪ್ರದರ್ಶನಕ್ಕೆ ಅವಕಾಶವೀಯುವ, ನೋಡಲೂ ಅಂದವಾಗಿ ಕಾಣುವ ನಾಟಕದ ವೇಷವೇ ಆಗಲಿ ಎಂದುಕೊಂಡೆ. ಒಂದು ವೇಳೆ ವ್ಯವಸ್ಥಾಪಕರು ಆ ವೇಷವನ್ನು ಒಪ್ಪದಿದ್ದರೂ ಅಂದಿನ ದಿನ ಕಳೆದ ತರುವಾಯ ತಾನೆ ಆ ಮಾತು! ಎಂಬ ಹುಸಿ ಧೈರ್ಯವೂ ಬಂದಿತು.
ನಾಟಕದ ಕೃಷ್ಣನಾಗಿಯೇ ರಂಗಸ್ಥಳಕ್ಕೆಕಾಲಿಟ್ಟೆ.
' ಇದು ಯಾವ ಹೊಸ ಮುಖ?' ಎಂಬ ಕುತೂಹಲದಿಂದ ಪ್ರೇಕ್ಷಕರು ನನ್ನನ್ನೇ ಹೆಚ್ಚಾಗಿ ಗಮನಿಸತೊಡಗಿದರು.
ಹಿಂದೆ ಎಷ್ಟೋ ಬಾರಿ 'ಸಾವಿರ ಕಣ್ಣುಗಳ ನೋಟ'ಗಳನ್ನು ಎದುರಿಸಿದ್ದರಿಂದ, ಮನಸ್ಸಿನಲ್ಲಿ ಇದ್ದ ಅಳುಕನ್ನು ಹೊರಗೆ ತೋರಿಸದೆ ಇರಲು ಸಾಧ್ಯವಾಯಿತು. ಆದರೆ ನನ್ನ ಬಂಡವಾಳ ಉಳಿದವರಿಗೆ ಗೊತ್ತಿಲ್ಲವೆ!
ಮೇಳದಲ್ಲಿ ಪ್ರಸಿದ್ಧ ವೇಷಧಾರಿಗಳಾದ ಸರ್ವಶ್ರೀ ಅಳಿಕೆ ಮೋನಪ್ಪ ರೈ ಅವರ ಮಗ ರಾಮಯ ರೈ, (ಬಣ್ಣದ) ಕುಟ್ಯಪ್ಪನವರು, (ಸ್ತ್ರೀ ವೇಷದ) ಪುರುಷೋತ್ತಮ ಭಟ್ಟರು ಇವರೆಲ್ಲಾ ಇದ್ದರು. ಅವರೆದುರಲ್ಲೇ ಆ ಕಲಾಸಾಗರದಲ್ಲಿ ಈಜುವುದಾದರೂ ಹೇಗೆ?
ಅವರಲ್ಲಿ ಯಾರೂ ಟೀಕಿಸುವವರಲ್ಲ, ನಿಜ. ಆದರೆ, ನನ್ನ ಕೊರತೆಯನ್ನು ನನಗೇ ಕಂಡುಕೊಳ್ಳಲು ಸಾಧ್ಯವಿರುವಾಗ ಟೀಕಾಕಾರರಾದೂ ಏತಕ್ಕೆ?
ಶ್ರೀ ಕಾರಂತರು ಕೊಟ್ಟಿದ್ದ ತರಬೇತಿಯಿಂದಾಗಿ, ಅಂಗಾಭಿನಯ ನನಗೆ ಅಷ್ಟೊಂದು ಕಷ್ಟಕರವಾಗಿ ಕಾಣಲಿಲ್ಲ. ಕಣ್ಣು, ಮೂಗು, ಹುಬ್ಬು ಇತ್ಯಾದಿ ಪ್ರತಿಯೊಂದು ಅಂಗಗಳೂ (ಸಾಧ್ಯವಾದಲ್ಲೆಲ್ಲ ತಾಳಬದ್ಧವಾಗಿ) ಬಾವಪ್ರದರ್ಶನಕ್ಕೆ ಸಹಕರಿಸಿದುವು.
ಭಾಗವತರು ಪದ್ಯವನ್ನು ಹೇಳಿ 'ಬಿಡಿತ'ಕ್ಕೆ ಜಾಗಟೆ ಎತ್ತಿದಾಗ, ಸಂವಾದದ ಸನ್ನಿವೇಶಗಳು ಬಂದಾಗ, ನಾಟ್ಯಶಾಸ್ತ್ರಿಯಲ್ಲದ ನನ್ನ ಕೊರತೆ ನನಗೇ ಸರಿಯಾಗಿ ಕಾಣಿಸಿಕೊಂಡಿತು. ಪದ್ಯದ ಮುಕ್ತಾಯದಲ್ಲೂ ಮೂರು ಹೆಜ್ಜೆ ಹಾಕಲಾರದ ನಾನು ''ವೇಷಧಾರಿ'' ಎಂದು ಕರೆಸಿಕೊಳ್ಳಲಾರೆ ಎನಿಸಿತು.
ಅಂದು, ಆ ರಂಗಸ್ಥಳದಲ್ಲೇ, ದಶಾವತಾರ ಆಟಕ್ಕೆ ನಾಟ್ಯವಿಲ್ಲದ ವೇಷವೆಂದರೆ ''ಎಲ್ಲ ರುಚಿ ಸೇರಿದ್ದರೂ ಉಪ್ಪು ಇಲ್ಲದ ಅಡುಗೆ'' ಎಂಬ ಅಭಿಪ್ರಾಯಕ್ಕೆ ಬಂದೆ. (ಆ ಅಭಿಪ್ರಾಯ ಇಂದಿಗೂ ಉಳಿದಿದೆ.)
ಕುಣಿತವೂ ಇದ್ದಿದ್ದರೆ... ಅಂದಿನ ಆಟದಲ್ಲಿ ಮಯೂರಧ್ವಜನನ್ನು ಕೃಷ್ಣ ಗರಗಸದಿಂದ ಕೊಯಿಸಿದ್ದ. ಕೊಯಿಸಿದಾಗಲೂ ''ಕಣ್ಣೀರೇಕೆ?'' ಎಂದು ಕೆಣಕಿದ್ದ. ಕೃಷ್ಣನ ವೇಷ ಹಾಕಿದ್ದವನು ತನ್ನನ್ನು ತಾನೇ ಅತೃಪ್ತಿಯ ಗರಗಸದಿಂದ ಕೊಯಿಸಿಕೊಳ್ಳತೊಡಗಿದ. ಸೀಳಿದರೂ ಕಣ್ಣೀರು ಸುರಿಸುವಂತಿಲ್ಲ ಎಂದು ತಿಳಿದುಕೊಂಡ.
ಆಟ ಮುಗಿದ ತರುವಾಯ, ಪ್ರೇಕ್ಷಕರು ಕೆಲವರ ಪ್ರತಿಕ್ರಿಯೆಯನ್ನು ನಾನೂ ಸಂಗ್ರಹಿಸಿದೆ. ನನ್ನಷ್ಟೇ ಕುತೂಹಲವಿದ್ದ ವ್ಯವಸ್ಥಾಪಕರೂ ಸಂಗ್ರಹಿಸಿದ್ದರು.
ಮಾತನಾಡಿದವರೆಲ್ಲರ ಕೈಯಲ್ಲೂ ಕೇಳಲಾಗುತ್ತಿದ್ದ ಒಂದು ಮುಖ್ಯ ಪ್ರಶ್ನೆ- ಕುಣಿತದ ಅಭಾವಕ್ಕೆ ಸಂಬಂಧಿಸಿದುದು ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ.
'' ಕುಣಿತ ನಿಮಗೆ ಗೊತ್ತಿಲ್ಲವೆಂದು ನಾವು ಯಾರೂ ಹೇಳುವಂತಿರಲಿಲ್ಲ'' ಎಂದವರು ಒಬ್ಬಿಬ್ಬರು.
ಅವರಂತೆ, ''ನಿಮ್ಮ ಕಾಲುಗಳ ಕಡೆಗೆ ನಮ್ಮ ಗಮನ ಹೋಗಲೇ ಇಲ್ಲ. ನೀವು ಕುಣಿಯುತ್ತಿದ್ದೀರೆಂದೇ- ನಿಮ್ಮ ದೇಹ ಚಲನೆಯನ್ನು ನೋಡಿ ನಾವು ಭಾವಿಸಿದ್ದೆವು'' ಎಂದವರು ಕೆಲವರು. [ಮುಂದಿನ ವಾರಕ್ಕ ೆ]
ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ (
ಪ.ಗೋ. 1928 -1997)