Webdunia - Bharat's app for daily news and videos

Install App

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 2: ಮಗು ಅರ್ಥ ಹೇಳುತ್ತಾನೆ !

Webdunia
[ ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಪ್ರಕಟವಾಗುತ್ತಿದೆ. ಇದು ಭಾಗ -2. - ಸಂ ]
WD
ತೀರ್ಥರೂಪರ ಕವಿತೆಗಳಲ್ಲಿ 'ಕುಕ್ಕುಟಾಪುರ'ವೆನಿಸಿ ಮೆರೆದ ಕೋಳ್ಯೂರು ನಮ್ಮ ಬಯಲಿನಂತಹ ಹತ್ತಾರು ಬಯಲುಗಳಿಗೆ ದೈವ ಕೇಂದ್ರ. ಅಲ್ಲಿನ 'ಮಂಡಲಪೂಜೆ' ಎಂದರೆ ಸುತ್ತಿನ ಹತ್ತು ಗ್ರಾಮಗಳಲ್ಲೂ ಪ್ರಸಿದ್ಧವಾಗಿತ್ತು. ಕೆಲವರು ಆಸಕ್ತರಿಂದಾಗಿ ಜಾತ್ರೆಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ (ಆ ಹೆಸರಿನಿಂದಲ್ಲವಾದರೂ) ಅಲ್ಲಿ ನಡೆಯುವುದಿತ್ತು. ನಮ್ಮತ್ತ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಪುರಾಣವಾಚನ, ಹರಿಕಥೆ, ತಾಳಮದ್ದಳೆಗಳಿಗೆ ಮಾತ್ರ ಮುಕ್ತಾಯಗೊಳ್ಳುತ್ತಿದ್ದವು. ಆಗಿನ ಕಾಲದಲ್ಲಿ ಹತ್ತು ಸಮಸ್ತರು ಭಾಗವಹಿಸಿದ ಚಟುವಟಿಕೆಗಳೆಲ್ಲ ಅಲ್ಲೇ ನಡೆಯಬೇಕು.

ಚಟುವಟಿಕೆಯ ಕಾರ್ಯಕ್ರಮಗಳು ಏನಿದ್ದರೂ, ತಂದೆಯವರು ಪ್ರಮುಖ ಕಾರ್ಯಕರ್ತರಲ್ಲೊಬ್ಬರಾಗಿರುವಾಗ, ನಮಗೆ ಸುದ್ದಿ ಸಿಗದಿರುತ್ತದೆಯೆ? ನನ್ನ ಜೊತೆಯವರೊಂದಿಗೆ ನಾನೂ ಅಲ್ಲಿ ಹಾಜರಾಗುತ್ತಿದ್ದೆ. ಮನೆಯಿಂದ ಕೋಳ್ಯೂರಿಗೆ ಇರುವ ನಾಲ್ಕು ಮೈಲು ದೂರವೇನು ಮಹಾ? ಬಯಲಿನ ತುದಿಗೆ ಬಂದು, ಇನ್ನೊಂದು ಬಯಲು ಕಳೆದ ಮೇಲೆ, ಹೊಳೆಯನ್ನು ದಾಟಿ, ಒಂದು ಗುಡ್ಡವನ್ನು ಏರಿ, ನಡುವೆ ಇದ್ದ ತಟ್ಟಿನಲ್ಲಿ ಅಷ್ಟು ದೂರ ನಡೆದು ಗುಡ್ಡ ಇಳಿದರೆ ಆಯಿತು. ಕೋಳ್ಯೂರ ದೇವಸ್ಥಾನ ಕಾಣಿಸುತ್ತದೆ.

ಅಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಒಂದು ಕೂಟ ನಡೆಯಲಿತ್ತು. ಬರಲಿರುವವರ ಹೆಸರುಗಳನ್ನು ಕೇಳಿದ ತರುವಾಯ ಎಂತಹ ರಸದೌತಣ ನಮಗಾಗಬಹುದು ಎಂದು ನಾನೂ ಯೋಚಿಸಿದ್ದೆ.

ಹಾಡುಗಾರಿಕೆ ಶ್ರೀ ಬಲಿಪ ನಾರಾಯಣ ಭಾಗವತರು (ಅವರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ). ಅವರಿಗೆ ಸರಿಸಮರಾದ ಶ್ರೀ ಕೆಮ್ಮಣ್ಣು ನಾರ್ಣಪ್ಪಯ್ಯನವರ ಮೃದಂಗ-ಚೆಂಡೆಗಳು. ಅರ್ಥದಾರಿಗಳೂ ಅವರಂತೆ ಪ್ರಸಿದ್ಧರೇ. ಶ್ರೀ ಬಳ್ಳಮಜಲು ರಂಗಪ್ಪಯ್ಯ, ಕವಿ ಶ್ರೀಬಡಕಮೈಲು ಪರಮೇಶ್ವರಯ್ಯ, ಶ್ರೀ ಹೊಸಹಿತ್ಲು ಗಣಪತಿ ಭಟ್ಟರು, ಶ್ರೀ ಕುಂಜಾರು ರಾಮಕೃಷ್ಣಯ್ಯ, ದಿ. ಮಂಕುಡೆ ಬಳ್ಳುಕ್ರಾಯರು. ಇವರ ಅರ್ಥಗಳನ್ನು ಕೇಳಲೆಂದು ಸಾರಿಗೆ ಸಂಪರ್ಕ ಅಷ್ಟು ಸುಲಭವಲ್ಲದ ಆ ಕಾಲದಲ್ಲೂ ಎಷ್ಟೋ ದೂರದಿಂದ ಜನರು ಬರುತ್ತಿದ್ದರು.

ಕೂಟದ ದಿನ ಬಂದಿತು. ಪ್ರಸಂಗ: ನಂದಳಿಕೆ ಲಕ್ಷ್ಮೀ ನಾರ್ಣಪ್ಪಯ್ಯ ಅವರು (ಮಹಾಕವಿ ಮುದ್ದಣ್ಣ) ರಚಿಸಿದ "ಕುಮಾರ ವಿಜಯ". ಭಾಗವಹಿಸುವವರ ಹೆಸರು ಮತ್ತು ಅವರ ಪಾತ್ರಗಳ ವಿವರಗಳನ್ನು ಸಾರಲಾಯಿತು. ಸಣ್ಣಪುಟ್ಟ ಪಾತ್ರಗಳು ಸ್ಥಳೀಯ ಕಲಾಸಕ್ತರಿಗೇ ದೊರೆಯುವುದು ರೂಢಿ.

ಸಂತೋಷ - ಅಳುಕು
WD
ಭಾನುಗೋಪನ ತಾಯಿ ಪದ್ಮಕೋಮಲೆಯ ಪಾತ್ರ ನನಗೆ ಎಂದಾಗ, ಸಂತೋಷವೂ ಆಯಿತು; ಜೊತೆಯಲ್ಲೇ ಅಳುಕೂ ಮೂಡಿತು. ಕುಟುಂಬದವರಲ್ಲಿ ಹಿರಿಯರೆಲ್ಲ ನನ್ನನ್ನು 'ಮಗು' ಎಂಬ ಅಡ್ಡ ಹೆಸರಿನಿಂದ ಸಂಬೋಧಿಸುವುದು ರೂಢಿ. 'ಮಗು ಅರ್ಥ ಹೇಳುತ್ತಾನೆ ಅಂತೆ' ಎಂಬ ಮಾತು ಸುತ್ತಲಿನ ಬೈಲುಗಳಿಗೆ ಹಬ್ಬಿತ್ತು.ಆದುದರಿಂದಲೇ ಅಂದು ಸ್ಥಳೀಯ ಕಲಾವಿದರಲ್ಲಿ ನಾನೂ ಒಬ್ಬನೆಂದು ಪರಿಗಣಿಸಲ್ಪಟ್ಟೆ. ಸರಿ, ಭಾಗವಹಿಸಲು ನನಗೂ ಅವಕಾಶ ಸಿಕ್ಕಿತೆಂಬುದಕ್ಕೆ ಸಂತೋಷ.

ಆದರೆ 15 ವರ್ಷ ಪ್ರಾಯದ 'ಮಗು' ನಾನು. ಹಳೆಯ ಹುಲಿಗಳೆನಿಸಿದವರ- ಜಿಲ್ಲೆಯಾದ್ಯಂತ ಹೆಸರು ಪಡೆದವರ- ಎದುರು ಮಾತನಾಡುವುದೆಂದರೆ? ಏನಾದರೂ ಹೆಚ್ಚು ಕಡಿಮೆಯಾದರೆ? ಅದಕ್ಕಾಗಿ ಅಳುಕು.

ತಾಳಮದ್ದಳೆ ಪ್ರಾರಂಭವಾಗಿ ನನ್ನ ಪಾತ್ರದ ಪದ್ಯ ಬರುವವರೆಗೂ ನಾನು ಮೈಯೆಲ್ಲ ಕಿವಿಯಾಗಿ ಕುಳಿತಿದ್ದೆ. ಸಾಸಿವೆ ಬಿದ್ದರೂ ಸದ್ದು ಕೇಳುವಂತಹ ವಾತಾವರಣವನ್ನು ಶ್ರಾವಕರು ನಿರ್ಮಿಸಿದ್ದರು. ತುಂಬಿದ ಸಭೆಯಲ್ಲಿ ಕಲಾವಿದರ ಹೊರತು ಇತರ ಯಾರ ಧ್ವನಿಯೂ ಇರಲಿಲ್ಲ. ಪದ್ಮ ಕೋಮಲೆಯ ಮೊದಲನೇ ಪದ್ಯವನ್ನು ಭಾಗವತರು ಹಾಡತೊಡಗಿದೊಡನೆ, ನನ್ನ ಮೈ ಬೆವರತೊಡಗಿತು.ಏನೇನೋ ಎಣಿಸಿಕೊಂಡು ಮೈ ನಡುಕ ಬರಿಸಿಕೊಂಡೆ. ನನ್ನನ್ನೇ ಗಮನಿಸುತ್ತಿದ್ದು, ನನ್ನ ಕಡೆ ನೋಡಿದ ಭಾಗವತರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು.

ಪರವಾಗಿಲ್ಲ ಹುಡುಗ
ಒಂದು ಬಾರಿ ಗಂಟಲು ಸರಿ ಮಾಡಿಕೊಂಡು, ಕೆಮ್ಮಿ, ನನ್ನ ಗಮನವನ್ನು ಅವರೆಡೆಗೆ ಸೆಳೆದರು. ಕಣ್ಸನ್ನೆಯಿಂದ ಧೈರ್ಯ ಇತ್ತರು.
ಪದ್ಮ ಕೋಮಲೆಯ ಪ್ರವೇಶದ ಪದ್ಯಕ್ಕೆ ಇದ್ದ ಅರ್ಥವನ್ನು ಹೇಗಾದರೂ ಹೇಳಿ ಮುಗಿಸಿದೆ. ಸಭೆ ಮೊತ್ತ ಮೊದಲನೆಯ ಬಾರಿ ಕೇಳಿಸಿದ ಮಾತುಗಳಿಗೆ ಪ್ರೋತ್ಸಾಹದ ಪ್ರತಿಕ್ರಿಯೆಯನ್ನೇ ತೋರಿತು. ಮುಂದಿನ ಪದ್ಯಗಳಿಗೆ ಅರ್ಥ ಹೇಳಲು ಅಷ್ಟೊಂದು ತೊಡಕಾಗಲಿಲ್ಲ.
ಅಂತೂ ಅಂದು ಬಂದಿದ್ದ ಮಹನೀಯರ ಬಾಯಿಂದ 'ಪರವಾಗಿಲ್ಲ ಹುಡುಗ' ಎನ್ನಿಸಿಕೊಂಡೆ. ನನ್ನ ಹೊಸ ಹುಚ್ಚನ್ನು ತಂದೆಯವರೂ ಗಮನಿಸಿದರು.

ಇದೊಂದು ಹುಚ್ಚು ಎಂದು ನುಡಿದರಾದರೂ, ಹುಚ್ಚಿನ ಆ ಬಳ್ಳಿಗೆ ಕಿಚ್ಚು ಹಚ್ಚಲಿಲ್ಲ. ನೀರನ್ನೆರೆದು ಪ್ರೋತ್ಸಾಹಿಸಿದರು. ಅದೊಂದು ದೃಷ್ಟಿಯಲ್ಲಂತೂ ನಾನು ಪುಣ್ಯವಂತ.

ಸಾಮಾನ್ಯವಾಗಿ ನಮ್ಮೂರಲ್ಲಿ ಯಕ್ಷಗಾನಕ್ಕೆ ಧಾರಾಳ ಪ್ರೋತ್ಸಾಹವಿದ್ದರೂ, ಅದು ದೂರದಿಂದ ನೋಡಿ ಆನಂದಿಸಬಹುದಾದ ಬೆಟ್ಟವೆಂದೇ ಭಾವನೆ ಬೆಳೆದಿತ್ತು. ಬಳಿಗೆ ಹೋಗಬಾರದು- ಒಳಗೆ ಸೇರಿ ಅಲ್ಲಿ ಬೆಳೆಯಬಾರದು ಎನ್ನುವವರೇ ಹೆಚ್ಚಾಗಿದ್ದರು.

ಯಕ್ಷಗಾನ (ತಾಳಮದ್ದಳೆ) ಕೂಟಗಳಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ಭಾಗವಹಿಸಿ ಮನೆಗೆ ನಿದ್ದೆ ಕಳೆಯಲು ಬಂದರೂ, ಪ್ರಸಂಗ- ಅರ್ಥ- ಪಾತ್ರಗಳ ಗುಂಗಿನಲ್ಲೇ ಇರುವುದು, ಒಂದಷ್ಟು ಮಾತು ಬಲ್ಲವನ ಮಟ್ಟಕ್ಕೆ ಏರಿದ ತರುವಾಯ ಎದುರಾಳಿ ಆಗುವವನ ಮುಖಭಂಗ ಮಾಡುವುದು ಹೇಗೆ ಎಂಬ ಯೋಚನೆಯ ಸುಳಿಯಲ್ಲೇ ಸುತ್ತಿ ಸಲ್ಲದ ಸಾಹಿತ್ಯದ ಸಂಗ್ರಹಕ್ಕೆ ಹೊರಡುವುದು, ಯಾರಿಗೂ ಅರ್ಥವಾಗದ ಕ್ಲಿಷ್ಟ ಪದಗಳನ್ನೇ ಸಂಗ್ರಹಿಸಿ ಹೇಳುವುದು, ಇವೆಲ್ಲ ಸಾಮಾನ್ಯ ಅಭ್ಯಾಸಗಳೆಂದೇ ಜನರಲ್ಲಿ ಬೆಳೆದಿದ್ದ ಭಾವನೆ.

ಅಂದಿನ ವೇಷಧಾರಿಗಳ ಸ್ಥಿತಿ
WD
ಇನ್ನು ಬಯಲಾಟಗಳಲ್ಲಿ ವೇಷಧಾರಿಯಾಗಿ ಮುಂದುವರಿಯಲೆಂದು ಹೊರಟವನ ಬಗ್ಗೆ ಮತ್ತೂ ಹೆಚ್ಚಿನ ಕಳವಳ ಇರುತ್ತಿತ್ತು. ತಾಳಮದ್ದಳೆಯಲ್ಲಾದರೆ, ಕೂಟ ಮುಗಿದು ಮನೆಗೆ ಬರುವ ಹವ್ಯಾಸವಾದರೂ ಇರುತ್ತದೆ. ಅದೊಂದು ಸಂಭಾವನೆ ತಾರದ ಹವ್ಯಾಸ ಎಂದಾದ ಕಾರಣ ಜೀವನೋಪಾಯಕ್ಕೆ ಬೇರೆಯೇ ಒಂದು ವೃತ್ತಿಯನ್ನು ಅವಲಂಬಿಸಿರಬೇಕಾಗುತ್ತದೆ. ಆಟದಲ್ಲಾದರೆ ಹಾಗಲ್ಲ. ಇಂದು ಒಂದು ಊರಿನಲ್ಲಿ ಇದ್ದರೆ ನಾಳೆ ಇನ್ನೊಂದು ಗ್ರಾಮಕ್ಕೆ ಪಯಣ. ಮನೆ ಬಿಟ್ಟ ಮಗ ತಿರುಗಿ ಬರಬೇಕಾದರೆ ಆರು ತಿಂಗಳುಗಳು ಕಳೆದೇ ಸರಿ. ಅಲ್ಪವಾದರೂ, ಕಾಸು ಕೈಯಲ್ಲಿ ತಿರುಗುವ ಕಾರಣ, ಕುಟುಂಬದ ನಿಯಂತ್ರಣಕ್ಕೆ ಯಾವುದೇ ರೀತಿಯ ಅವಕಾಶ ಅಲ್ಲಿ ಇಲ್ಲ- ಇತ್ಯಾದಿ ಕಾರಣಗಳು, ಕಲಾವಿದನಾಗ ಬಯಸುವವನಿಗೆ ಹಿರಿಯರು ಅಡ್ಡಿ ತಂದೊಡ್ಡುವ ಹಿನ್ನೆಲೆಗಳಾಗಿದ್ದುವು.

ಅಂದಿನ ಕಾಲದ ಯಕ್ಷಗಾನ ಮೇಳಗಳ ಮತ್ತು ವೇಷಧಾರಿಗಳ ಸ್ಥಾನ ಶೋಚನೀಯವಾಗಿತ್ತು. ಕಲಾವಿದರು ಎಲ್ಲರ ಪರಿಸ್ಥಿತಿಯೂ ಹಾಗೆಯೇ.
ರಾತ್ರೆಯ ಹೊತ್ತು ರಾಜಾಧಿರಾಜರಾಗಿ ಮೆರೆದ ಕಲಾವಿದರು, 'ಸ್ವರ್ಗ ವೈಭವದ ಭೋಗವನ್ನುಣ್ಣುವುದಾಗಿ' ಸಾರಿದ್ದ ದೇವೇಂದ್ರರು, ಹಗಲಿನಲ್ಲಿ ಒಂದು ಹೊತ್ತಿನ ಗ್ರಾಸಕ್ಕಾಗಿ ಪರದಾಡಬೇಕಾಗುತ್ತಿತ್ತು.

ಮರದಡಿಯಲ್ಲಿ ಮೇಳಗಳ ಬಿಡಾರ ಇರುವುದು ದೈನಂದಿನ ಸಾಮಾನ್ಯ ಘಟನೆ. ನಾಲ್ಕು ಬಿದಿರ ತುಂಡುಗಳನ್ನು ಊರಿ, ಅವುಗಳಿಗೆ ಮಾವಿನ ಎಲೆಗಳ ಅಲಂಕಾರ ಮಾಡಿದ 'ರಂಗಮಂಟಪ'ದಲ್ಲಿ ಬಯಲಾಟ ನಡೆಯುವುದು ಎಂದಿನ ಅನುಭವ.

ಆರು ತಿಂಗಳ ಅಲೆದಾಟದಲ್ಲಿ ದೊರೆತು ಉಳಿದ ದುಡಿಮೆಯ ಹಣ, ನಿರುದ್ಯೋಗದ ಆರು ದಿನಗಳಿಗೂ ಸಾಕಾಗುತ್ತಿರಲಿಲ್ಲ. ದೂರದಿಂದ ವೇಷಗಳನ್ನು ನೋಡಿ ಆನಂದಿಸುವ ಊರವರಿಗೂ, ಮೇಳದವರು ಎಂದರೆ ತಿರಸ್ಕಾರ. ಅವರಿಗೆ ಸಮಾಜ ಕೊಡುವ ಗೌರವ- ನಕಾರ. ಮರ್ಯಾದಸ್ಥರು ಮರೆಯಬೇಕಾದ ಪ್ರಪಂಚವೇ ಅದಾಗಿತ್ತು.

ಆದರೆ ತೀರ್ಥರೂಪರು ಆ ಪ್ರಪಂಚಕ್ಕೆ ಧೈರ್ಯವಾಗಿ ಕಾಲಿರಿಸಿದ್ದಲ್ಲದೆ ಅದರ ಸುಧಾರಣೆಯಲ್ಲಿ ಆಸಕ್ತರಾಗಿದ್ದರು. ತಮ್ಮ ಮಿತ್ರವರ್ಗದವರೂ ಆಸಕ್ತಿ ವಹಿಸುವಂತೆ ಮಾಡಿದ್ದರು. ಸಣ್ಣ ಪುಟ್ಟ ಪರಿಮಾಣದಲ್ಲಾದರೂ ನಮ್ಮ ಮನೆಯಲ್ಲೇ ಯಕ್ಷಗಾನ (ತಾಳಮದ್ದಳೆ) ಕೂಟಗಳು ನಡೆಯುವಂತೆ ಮಾಡಿದ್ದರು.

ಮಾರ್ಗದರ್ಶನ
ನಾನು ಕೋಳ್ಯೂರಿನ ಕೂಟದಲ್ಲಿ ಭಾಗವಹಿಸಿದ ನಂತರ, ನನ್ನ ಆಸೆ, ಅವರ ಪ್ರೋತ್ಸಾಹದಿಂದಾಗಿ ಬೆಳೆಯಿತು. ಸರಿಯಾದ ಪ್ರೋತ್ಸಾಹವಿತ್ತು. ಆಗತ್ಯದ ವಿಮರ್ಶೆಗಳನ್ನೂ ಒದಗಿಸಿ ನನ್ನ ಅಭಿರುಚಿ ವಿಕಾಸಗೊಳ್ಳುವಂತೆ ಮಾಡಿದವರು ಅವರೇ.

ಯಕ್ಷಗಾನದಲ್ಲಿ ಅರ್ಥದ ಮಾತಿಗೆ ತೂಕವಿರಬೇಕು. ಯಾವ ರೀತಿಯ ಏರಿಳಿತವೂ ಇಲ್ಲದೆ, ಮೈಲುದ್ದದ ಮಾತುಗಳ ಮಾಲೆಯನ್ನು ಕಟ್ಟುವುದಕ್ಕೆ ಕಲಾವಿದನ ಪಾಂಡಿತ್ಯ ಸೀಮಿತಗೊಳ್ಳಬಾರದು. ರಸಪೋಷಣೆ- ಭಾವ ಪ್ರೇರಣೆಗಳು ಬೇಕಾದಲ್ಲಿ ಪಾತ್ರಗಳ ಪರಸ್ಪರ ಸಂಭಾಷಣೆಗೆ ಅವಕಾಶ ಇರಬೇಕು. ಎದುರಾಗಿ ಅರ್ಥಹೇಳುವವನು ಚಿಕ್ಕವನಾದರೂ, ಅವನಿಗೇ ಪ್ರೋತ್ಸಾಹ ದೊರಕಬೇಕು. ಕಥೆಯ ಸನ್ನಿವೇಶ ಕೇಳುವವರ ಕಣ್ಣೆದುರು ಮೈವೆತ್ತು ನಿಲ್ಲಬೇಕು ಎಂಬಿತ್ಯಾದಿ ಅಂಶಗಳನ್ನು ನಿದರ್ಶನಗಳೊಂದಿಗೆ ನನ್ನ ತಲೆಗೆ ತುರುಕಿದವರು ಅವರೇ.

WD

ರೇಡಿಯೋ ನಾಟಕಗಳನ್ನು ನಾನು (ಈಚೀಚೆಗೆ) ಕೇಳಿದಾಗಲೆಲ್ಲ, ಅವರ ಉಪದೇಶಗಳ ನೆನಪು ಬರುತ್ತದೆ. ದಶಕಗಳ ಹಿಂದೆ ಅವರು ಹೇಳಿದ್ದ ಮಾತುಗಳು ಮರುಕಳಿಸುತ್ತವೆ. (ಮುಂದಿನ ವಾರಕ್ಕೆ)

ನಿರೂಪಣೆ: ಮಂಗಳೂರಿನ ಖ್ಯಾತ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments