ಈಡೆನ್ ಗಾರ್ಡೆನ್ ಅಂದರೆ ಹಾಗೆ ಪ್ರತಿಯೊಂದು ಪಂದ್ಯಕ್ಕೂ ಅಲ್ಲಿ ಒಂದು ಲಕ್ಷ ಪ್ರೇಕ್ಷಕರು ತುಂಬಿ ತುಳುಕುತ್ತಿರುತ್ತಾರೆ. ಆದರೆ ತೀರಾ ವಿಪರ್ಯಾಸ ಎಂಬಂತೆ ಭಾರತ ಮತ್ತು ವೆಸ್ಟ್ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯ ಸಂದರ್ಭದಲ್ಲಿ ಸ್ಟೇಡಿಯಂ ಬಿಕೋ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಟೆಸ್ಟ್ ಕ್ರಿಕೆಟ್ಗೆ ಇಷ್ಟೊಂದು ಕಡಿಮೆ ಪ್ರೇಕ್ಷಕರ ಹಾಜರಾತಿಯು ಕ್ರಿಕೆಟ್ ಪ್ರೇಮಿಗಳ ಕಳವಳಕ್ಕೆ ಕಾರಣವಾಗಿದೆ. ಇದನ್ನೇ ಪ್ರಮುಖವಾಗಿ ಉಲ್ಲೇಖಿಸಿರುವ ಭಾರತದ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ, ಕ್ರಿಕೆಟ್ ಅಭಿಮಾನಿಗಳನ್ನು ಸ್ಟೇಡಿಯಂನತ್ತ ಸೆಳೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೊಲ್ಕತಾದಂತಹ ಐತಿಹಾಸಿಕ ಈಡೆನ್ ಗಾರ್ಡೆನ್ ಮೈದಾನದಲ್ಲಿ ಸೋಮವಾರ ನಡೆದ ಮೊದಲ ದಿನದಾಟದಲ್ಲಿ ಪಂದ್ಯ ವೀಕ್ಷಿಸಲು ಕೇವಲ ಸಾವಿರದಷ್ಟು ಜನರು ಮಾತ್ರ ಜಮಾಯಿಸಿದ್ದರು. ಕಳೆದ ಏಕದಿನ ಸರಣಿಯು ಇದರಿಂದ ಭಿನ್ನವಾಗಿರಲಿಲ್ಲ. ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ಬೇಸರಕ್ಕೆ ಕಾರಣವಾಗಿದೆ ಎಂದು ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಆಡುತ್ತಿರುವ ಗಂಗೂಲಿ ತಿಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ 100ನೇ ಶತಕದ ಹೊಸ್ತಿಲಲ್ಲಿರುವ ಹೊರತಾಗಿಯೂ ಪ್ರೇಕ್ಷಕರ ಅಭಾವವು ಆತಂಕಕ್ಕೆ ಕಾರಣವಾಗಿತ್ತು. ವಾರದ ಮೊದಲ ದಿನದಲ್ಲೇ ಟೆಸ್ಟ್ ಪಂದ್ಯ ಆರಂಭವಾಗಿರುವುದು ಹಾಗೂ ಅತಿಯಾದ ಕ್ರಿಕೆಟ್ನಿಂದ ಅಭಿಮಾನಿಗಳ ಹುಮ್ಮಸ್ಸು ಕಡಿಮೆಯಾಗಿರುವುದು ಸಹ ಇದಕ್ಕೆ ಕಾರಣವಾಗಿರಬಹುದು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.
ಅಭಿಮಾನಿಗಳ ಕಳಪೆ ಪ್ರತಿಕ್ರಿಯೆಯಿಂದಾಗಿ ನನಗಂತೂ ತೀವ್ರ ಆಘಾತವಾಗಿದೆ ಎಂದು ಇಂಗ್ಲೆಂಡ್ ವೀಕ್ಷಣಾ ವಿವರಣೆಗಾರ ಟೊನಿ ಗ್ರೇಗ್ ತಿಳಿಸಿದ್ದಾರೆ. ಇಷ್ಟಕ್ಕೂ ನಿಲ್ಲಿಸದ ಗ್ರೇಗ್ ಅವರು ಈಡೆನ್ ಗಾರ್ಡೆನ್ ಮೈದಾನವನ್ನು ಶವಾಗಾರಕ್ಕೆ ಹೋಲಿಸಿದ್ದರು.