ವಿಶ್ವಕಪ್ ಗೆಲುವನ್ನು ತನ್ನ ಜೀವನದ ಅತಿ ಶ್ರೇಷ್ಠ ಕ್ಷಣ ಎಂದು ಬಿಂಬಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕ್ರಿಕೆಟನ್ನು ತಮ್ಮ ಧರ್ಮವಾಗಿ ಪರಿಗಣಿಸಿರುವ ಇಡೀ ದೇಶದ ಜನತೆಗೆ ಗೆಲುವನ್ನು ಸಮರ್ಪಿಸಿದ್ದಾರೆ.
ಸಚಿನ್ ಈ ಐತಿಹಾಸಿಕ ಕ್ಷಣಕ್ಕಾಗಿ ಕಳೆದ 21 ವರ್ಷಗಳಿಂದ ಕಾಯುತ್ತಿದ್ದರು. ಕೊನೆಗೂ ಸಚಿನ್ಗಾಗಿ ವಿಶ್ವಕಪ್ ಗೆಲ್ಲಿಸಿಕೊಡಲಿದ್ದೇವೆಂಬ ಸಹ ಆಟಗಾರರ ವಾಗ್ದಾನವು ನಿಜವೆನಿಸಿತು.
ವಿಶ್ವಕಪ್ ಗೆಲುವನ್ನು ವರ್ಣಿಸಲು ಮಾತುಗಳೇ ಸಿಗುತ್ತಿಲ್ಲ. ಕಳೆದ 21 ವರ್ಷಗಳಿಂದ ನಾನು ಈ ಸ್ಮರಣೀಯ ನಿಮಿಷಕ್ಕಾಗಿ ಕಾಯುತ್ತಿದ್ದೆ. ನಿಜಕ್ಕೂ ಇದು ವಿಶೇಷವಾದದ್ದು ಎಂದು ಸಚಿನ್ ಸೇರಿಸಿದರು.
ಇದು ಕೇವಲ 15 ಮಂದಿಯ ತಂಡದ ಸದಸ್ಯರಿಗೆ ಸೇರಿದ್ದಲ್ಲ. ಇಡೀ ದೇಶಕ್ಕೆ ಈ ಪ್ರಶಸ್ತಿಯ ಗರಿ ಸೇರಿದ್ದಾಗಿದೆ. ಹಾಗಾಗಿ ಈ ಗೆಲುವಿನ ಸಿಹಿ ಎಲ್ಲರೂ ಅನುಭವಿಸುವ ಭರವಸೆ ನನ್ನಲ್ಲಿದೆ ಎಂದರು.
ವಿಶ್ವಕಪ್ ಗೆಲುವು ನನ್ನ ಅತಿ ದೊಡ್ಡ ಕನಸಾಗಿತ್ತು. ಹೀಗಾಗಿ ನನ್ನ ಕನಸನ್ನು ಹಿಂಬಾಲಿಸುತ್ತಾ ಇಲ್ಲಿಯ ವರೆಗೆ ಬಂದಿದ್ದೇನೆ. ದೇಶಕ್ಕಾಗಿ ಈ ವಿಶ್ವಕಪ್ ಗೆಲ್ಲಲು ತಂಡಕ್ಕೆ ಸಾಧ್ಯವಾಗಿದೆ ಎಂದರು.
ಇದೀಗ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿರಬಹುದೆಂಬುದನ್ನು ಅರಿಯಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಅವರ ಸಮೀಪ ತೆರಳಿಯೇ ಇದನ್ನು ಅನುಭವಿಸಬೇಕು. ಯಾಕೆಂದರೆ ಅವರ ಪ್ರಾರ್ಥನೆಯಿಂದಲೇ ಈ ಕಪ್ ಗೆಲ್ಲಲು ಸಾಧ್ಯವಾಗಿದೆ ಎಂದರು.
ಮಾತು ಮುಂದುವರಿಸಿದ್ದ ಮುಂಬೈಕರ್, ಕ್ರಿಕೆಟನ್ನು ಆನಂದಿಸಿ ಆಡಲು ಸಾಧ್ಯವಾಗುವಷ್ಟು ಸಮಯ ಕ್ರಿಕೆಟ್ನಲ್ಲಿ ಮುಂದುವರಿಯುವುದಾಗಿ ತಿಳಿಸಿದರು.