Select Your Language

Notifications

webdunia
webdunia
webdunia
webdunia

ಸೆಮಿಗೂ ಮೊದಲು ಲಯ ಕಂಡುಕೊಳ್ಳುವ ಭರವಸೆಯಲ್ಲಿ ಸೆಹ್ವಾಗ್

ಸೆಮಿಗೂ ಮೊದಲು ಲಯ ಕಂಡುಕೊಳ್ಳುವ ಭರವಸೆಯಲ್ಲಿ ಸೆಹ್ವಾಗ್
ಬ್ಲೋಮ್‌ಫಾಂಟೈನ್ , ಸೋಮವಾರ, 18 ಮೇ 2009 (14:52 IST)
ಇಂಡಿಯನ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯಲ್ಲಿ ತನ್ನ ಬ್ಯಾಟಿಂಗ್ ಛಾಪನ್ನೊತ್ತಲು ವಿಫಲರಾಗಿರುವ ವೀರೇಂದ್ರ ಸೆಹ್ವಾಗ್, ತಂಡವು ಸೆಮಿಫೈನಲ್ ಪ್ರವೇಶಿಸುವ ಮೊದಲು ಬ್ಯಾಟಿಂಗ್ ಲಯ ಕಂಡುಕೊಳ್ಳುವ ಭರವಸೆಯಿಂದಿದ್ದೇನೆ ಎಂದು ತಿಳಿಸಿದ್ದಾರೆ.

ಈಗಾಗಲೇ ಡೆಲ್ಲಿ ಡೇರ್‌ಡೆವಿಲ್ಸ್ ಐಪಿಎಲ್ ಸೆಮಿಫೈನಲ್ ಪ್ರವೇಶಿಸಿದೆಯಾದರೂ ಇದರಲ್ಲಿ ನಾಯಕ ಸೆಹ್ವಾಗ್ ಕೊಡುಗೆ ತೀರಾ ಕಡಿಮೆ. ಅವರ ಆರಂಭಿಕ ಜತೆಗಾರ ಗೌತಮ್ ಗಂಭೀರ್‌ರದ್ದು ಕೂಡ ಇದೇ ಕಥೆ. ಇವರಿಬ್ಬರೂ ತಮ್ಮ ಬ್ಯಾಟ್‌ನಿಂದ ತಂಡಕ್ಕೆ ನಿರೀಕ್ಷಿತ ಸಹಾಯಕರಾಗಿಲ್ಲ.

ಆದರೆ ಸೆಹ್ವಾಗ್ ಪ್ರಕಾರ ಇದೊಂದು ಅವಧಿಗೆ ಸೀಮಿತವಾದದ್ದು. ತಾವಿಬ್ಬರೂ ಮರಳಿ ಲಯ ಕಂಡುಕೊಳ್ಳಲು ಸಾಧ್ಯವಾದರೆ ಅದು ತಂಡಕ್ಕೆ ವಿಶೇಷವಾದುದಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ನಮ್ಮ ತಂಡದ ಆರಂಭಿಕ ಆಟಗಾರರಾದ ನಾವು ವಿಫಲರಾಗಿದ್ದೇವೆ. ಆದರೆ ಅಬ್ರಹಾಮ್ ಡೇ ವಿಲ್ಲರ್ಸ್ ಮತ್ತು ತಿಲಕರತ್ನೆ ದಿಲ್‌ಶಾನ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಸಂದರ್ಭವನ್ನರಿತುಕೊಂಡು ಲೆಕ್ಕಾಚಾರದಂತೆ 150 ರನ್ ಗಳಿಸಲು ಸಫಲರಾಗಿದ್ದಾರೆ" ಎಂದು ರಾಜಸ್ತಾನ ರಾಯಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ 14 ರನ್ನುಗಳ ಅಂತರದಿಂದ ಜಯ ಸಾಧಿಸಿದ ತಂಡದ ನಾಯಕ ಸೆಹ್ವಾಗ್ ತಿಳಿಸಿದರು.

ಸೆಹ್ವಾಗ್ ಐಪಿಎಲ್ 2009ರಲ್ಲಿ ಆಡಿರುವ 8 ಪಂದ್ಯಗಳಿಂದ 15.57ರ ಸರಾಸರಿಯಲ್ಲಿ 109 ಹಾಗೂ ಗಂಭೀರ್ 12 ಪಂದ್ಯಗಳಿಂದ 21.20ರ ಸರಾಸರಿಯಲ್ಲಿ 212 ರನ್ ಗಳಿಸಿದ್ದಾರೆ.

"ಸೆಮಿಫೈನಲ್‌ಗೂ ಮೊದಲು ನಡೆಯಲಿರುವ ಮುಂದಿನ ಪಂದ್ಯಗಳಲ್ಲಿ ನಾನು ಒಂದಷ್ಟು ರನ್ ಗಳಿಸುವ ವಿಶ್ವಾಸದಿಂದ್ದೇನೆ. ಹಾಗೊಂದು ವೇಳೆ ನಾನು ಮತ್ತು ಗಂಭೀರ್ ಲಯ ಕಂಡುಕೊಳ್ಳಲು ಸಾಧ್ಯವಾದರೆ ಅದು ತಂಡಕ್ಕೆ ಬೋನಸ್ ಆಗಿ ಪರಿಣಮಿಸಲಿದೆ" ಎಂದು ಅವರು ತನ್ನ ಆತ್ಮವಿಶ್ವಾಸವನ್ನು ಹೊರಗೆಡವಿದರು.

ರಾಜಸ್ತಾನವನ್ನು 136/9ಕ್ಕೆ ಕಟ್ಟಿ ಹಾಕಿದ ತನ್ನ ಬೌಲರುಗಳನ್ನು ಕೂಡ ಪ್ರಶಂಸಿಸಿದ ಅವರು, "ವಿಲ್ಲರ್ಸ್, ದಿಲ್‌ಶಾನ್ ಮತ್ತು ಕಾರ್ತಿಕ್‌ ಶ್ರಮವಹಿಸಿ ತಂಡವನ್ನು ಒಂದು ಹಂತಕ್ಕೆ ತಲುಪಿಸಿದ ನಂತರ ಅಮಿತ್ ಮಿಶ್ರಾ, ಆಶಿಶ್ ನೆಹ್ರಾ ಮತ್ತು ಇತರರು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಈ ಪಂದ್ಯವನ್ನು ಗೆದ್ದಿರುವುದರಿಂದ ನಾನು ಸಂತೋಷಗೊಂಡಿದ್ದೇನೆ. ಸೆಮಿಫೈನಲ್‌ಗೂ ಮೊದಲು ನಮಗೆ ವಿಜಯದ ವಾತಾವರಣದ ಅಗತ್ಯವಿತ್ತು" ಎಂದು ತಿಳಿಸಿದ್ದಾರೆ.

Share this Story:

Follow Webdunia kannada