Select Your Language

Notifications

webdunia
webdunia
webdunia
webdunia

ತಂಡದ ಯಶಸ್ಸು ಕರ್ಸ್ಟನ್‌ರಿಗೆ ಸಲ್ಲುತ್ತದೆ: ಸಚಿನ್

ತಂಡದ ಯಶಸ್ಸು ಕರ್ಸ್ಟನ್‌ರಿಗೆ ಸಲ್ಲುತ್ತದೆ: ಸಚಿನ್
ಚೆನ್ನೈ , ಶನಿವಾರ, 11 ಏಪ್ರಿಲ್ 2009 (13:10 IST)
ವಿಶ್ವ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಬೃಹತ್ ಶಕ್ತಿಯಾಗಿ ಮೂಡಿ ಬರಲು ಗ್ಯಾರಿ ಕರ್ಸ್ಟನ್ ಕಾರಣ ಎಂದು ಯಶಸ್ಸಿನ ಕೀರ್ತಿಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತರಬೇತುದಾರನಿಗೆ ನೀಡಿದ್ದಾರೆ.

ಆಟಗಾರರು ತಮ್ಮ ನೈಜ ಆಟವಾಡುತ್ತಿರುವುದೇ ಈಗ ಭಾರತ ಗಳಿಸಿರುವ ಯಶಸ್ಸಿಗೆ ಪ್ರಮುಖ ಕಾರಣ. ಇದು ಸಾಧ್ಯವಾಗಬೇಕಾದರೆ ಉತ್ತಮ ವಾತಾವರಣ ತಂಡದೊಳಗಿರಬೇಕು. ಎಂತಹುದೇ ಒತ್ತಡದ ಪರಿಸ್ಥಿತಿಯಲ್ಲೂ ಮನಸ್ಸು ಶಾಂತಸಾಗರವಾಗಿರಬೇಕು ಎಂದು ಮುಂಬೈಯ ಪತ್ರಿಕೆಯೊಂದರ ಜತೆ ಮಾತನಾಡುತ್ತಾ ಸಚಿನ್ ತನ್ನ ಅನಿಸಿಕೆ ವ್ಯಕ್ತಪಡಿಸಿದರು.

ಹೀಗೆ ಪ್ರತಿಯೊಬ್ಬ ಆಟಗಾರರಿಗೆ ಅವರದೇ ಆದ ಸ್ವಂತ ಆಟವನ್ನಾಡಲು ಅವಕಾಶ ನೀಡಿದ ತರಬೇತುದಾರ ಗ್ಯಾರಿ ಕರ್ಸ್ಟನ್ ಈ ಯಶಸ್ಸಿನ ಕೀರ್ತಿಗೆ ಪಾತ್ರರಾಗಬೇಕು. ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ಅವರದ್ದೇ. ಜತೆಗೆ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್, ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್, ಫಿಸಿಯೋ ನಿತಿನ್ ಪಟೇಲ್, ಮಾನಸಿಕ ತರಬೇತುದಾರ ಪಾಡ್ಡಿ ಅಪ್ಟೋನ್ ಎಲ್ಲರೂ ಯಶಸ್ಸಿನಲ್ಲಿ ಪಾಲು ತೆಗೆದುಕೊಳ್ಳುತ್ತಾರೆ ಎಂದು ಸಚಿನ್ ವಿವರಿಸಿದ್ದಾರೆ.

ಹಾಗಂತ ಈ ಹಿಂದಿನ ತಂಡಗಳು ಗೆಲುವಿಗೆ ಯತ್ನಿಸಿಲ್ಲ ಎಂಬುದು ನನ್ನ ಹೇಳಿಕೆಯ ಅರ್ಥವಲ್ಲ ಎಂದಿರುವ ಮಾಸ್ಟರ್ ಬ್ಲಾಸ್ಟರ್, ಪ್ರತಿಯೊಬ್ಬರೂ ಗೆಲ್ಲಲೆಂದೇ ಹೊರಟಿರುತ್ತಾರೆ. ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಟೀಮ್ ಇಂಡಿಯಾ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವುದರಿಂದ ಯಶಸ್ಸು ಸಾಧ್ಯವಾಗಿದೆ. ಹಾಗಿರದೇ ಇದ್ದಿದ್ದರೆ ಈಗ ನಾವು ಹೀಗಿರಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಹುಡುಗರು ದೊಡ್ಡ ಮೊತ್ತ ಕಲೆ ಹಾಕುತ್ತಾರೆ. ಜತೆಗೆ ಬೌಲರುಗಳು ಕೂಡ ಅದ್ಭುತವಾಗಿ ಎದುರಾಳಿಗಳನ್ನು ಹೊಡೆದುರುಳಿಸುತ್ತಾರೆ ಎಂದರು.

2001ರ ಪ್ರವಾಸದಲ್ಲಿ ಭಾರತದ ಯಾವೊಬ್ಬ ದಾಂಡಿಗನೂ ಶತಕ ದಾಖಲಿಸಿರಲಿಲ್ಲ ಅಥವಾ ಯಾವೊಬ್ಬ ಬೌಲರ್ ಕೂಡ ಐದು ವಿಕೆಟ್‌ಗಳ ಗೊಂಚಲು ಪಡೆದಿರಲಿಲ್ಲ. ತಂಡದ ಯಶಸ್ಸಿನ ಸೂಚನೆ ಇದರಿಂದಲೇ ಸಿಗುತ್ತದೆ. ನಾವು ಸರಣಿಯುದ್ದಕ್ಕೂ ಹಿಡಿತ ಸಾಧಿಸಿದ್ದೆವು. ಇದು ನಮಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡಿದೆ. ವಿದೇಶಗಳಲ್ಲೂ ಟೆಸ್ಟ್ ಗೆಲ್ಲುವುದು ಹೇಗೆ ಎಂದೀಗ ನಮಗೆ ಮನವರಿಕೆಯಾಗಿದೆ. ಟೆಸ್ಟ್ ಗೆಲ್ಲುವುದು ಹೇಗೆಂದು ಒಂದು ಬಾರಿ ನಿಮಗೆ ತಿಳಿದುಹೋದರೆ ಅದರ ಅನುಭವವೇ ಅದ್ಭುತವಾಗಿರುತ್ತದೆ ಎಂದು ಮುಂಬೈಕಾರ್ ಅನುಭವವನ್ನು ಹಂಚಿಕೊಂಡಿದ್ದಾರೆ.

Share this Story:

Follow Webdunia kannada