' ನಾನು ಯಾವುದೇ ಸಮಾಜವನ್ನು ಒಡೆಯುವ ಕೆಲಸ ಮಾಡಿಲ್ಲ. ಅಷ್ಟೇ ಅಲ್ಲ ನಾನು ಆ ಕೆಲಸ ಮಾಡಿದ್ದೇನೆ ಅಂತ ಯಡಿಯೂರಪ್ಪನವರು ನನ್ನ ಹೆಸರು ಹೇಳಿಲ್ಲ. ಹಾಗಿದ್ದ ಮೇಲೆ ನೀವು (ಪತ್ರಕರ್ತರು) ಯಾಕೆ ಅನಾವಶ್ಯಕವಾಗಿ' ಈ ಪ್ರಶ್ನೆ ಹುಟ್ಟು ಹಾಕುತ್ತೀರಿ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಮಾಧ್ಯಮದವರ ಮೇಲೆ ಗೂಬೆ ಕೂರಿಸಿದರು.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವೀರಶೈವ ಸಮಾಜವನ್ನು ಒಡೆಯುವ ಬಗ್ಗೆ ನನ್ನ ಮೇಲೆ ನೇರ ಆರೋಪ ಮಾಡಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದರು.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಾವಯವ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಯೇ ಈ ವಿಚಾರದ ಬಗ್ಗೆ ಅವರ ಜೊತೆ ಮಾತನಾಡವುದಾಗಿ ತಿಳಿಸಿದರು. ಯಡಿಯೂರಪ್ಪ ಜತೆ ತಮಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಮಜಾಯಿಷಿ ನೀಡಿದರು.