ಮುಂಬರುವ ಫೆಬ್ರವರಿ 10ರೊಳಗೆ ಹೈಕಮಾಂಡ್ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪಕ್ಷಕ್ಕೆ ಗುಡ್ಬೈ ಹೇಳುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಮಂಡಲದ ಅಧಿವೇಶನದ ಬಳಿಕ ಬಜೆಟ್ ಅದಿವೇಶನಕ್ಕೆ ಮುನ್ನ ತಮ್ಮನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು. ಇಲ್ಲದಿದ್ದಲ್ಲಿ ಪಕ್ಷವನ್ನು ತೊರೆಯುತ್ತೇನೆ ಎಂದು ಹೈಕಮಾಂಡ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಪಕ್ಷ ತೊರೆಯುವ ಯಡ್ಡಿ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸದಾನಂದ ಗೌಡರು, ಸರಕಾರಕ್ಕೆ ಅಪಾಯವಾದಲ್ಲಿ ಸರಕಾರವನ್ನು ಯಾವ ರೀತಿ ರಕ್ಷಿಸಿಕೊಳ್ಳಬೇಕು ಎನ್ನುವ ಬಗ್ಗೆ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧಿವೇಶನದಲ್ಲಿ ತಾವು ಪಕ್ಷ ತೊರೆಯುವ ಬಗ್ಗೆ ಚರ್ಚೆಯಾದಲ್ಲಿ ಸರಕಾರಕ್ಕೆ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ಬರುವುದರಿಂದ, ಅಧಿವೇಶನದ ಮುಕ್ತಾಯದ ನಂತರ ಸ್ಪಷ್ಟ ನಿರ್ಧಾರವನ್ನು ಬಹಿರಂಗಪಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.