ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸವಿಲ್ಲ, ಒಂದು ಪಕ್ಷಕ್ಕೆ ಒಬ್ಬನೇ ಮುಖಂಡನಿರಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ದಿಢೀರ್ ಉಲ್ಟಾ ಹೊಡೆಯುವ ಮೂಲಕ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪನವರೇ ನಮ್ಮ ನಾಯಕರು ಎಂದು ಸಮಜಾಯಿಷಿ ನೀಡಿದ್ದಾರೆ.
ಈಶ್ವರಪ್ಪ ಹೇಳಿಕೆಗೆಲ್ಲ ನಾನು ಕ್ಯಾರೆ ಮಾಡಲ್ಲ. ಯಡಿಯೂರಪ್ಪ ಅಂದ್ರೆ ಬಿಜೆಪಿ. ನನ್ನ ನಾಯಕತ್ವ ಬೇಡದವರು ಬೇರೆ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಶನಿವಾರ ಗುಡುಗಿದ್ದರು.
ಏತನ್ಮಧ್ಯೆ ಭಾನುವಾರ ರಾಗ ಬದಲಿಸಿದ ಯಡಿಯೂರಪ್ಪ, ರಾಜ್ಯದಲ್ಲಿ ನಾಯಕತ್ವ ಎಂಬ ಪ್ರಶ್ನೆ ಬಂದಾಗ ನನ್ನ ಹೆಸರು ಹೇಳಿ ಅಪಾರ್ಥ ಕಲ್ಪಿಸಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ನಾಯಕತ್ವ ವಿಚಾರದಲ್ಲಿ ತಲೆದೋರಿರುವ ಭಿನ್ನಮತ ಶಮನಕ್ಕೆ ಪರಿಹಾರ ಕಂಡುಕೊಳ್ಳಲು ದೆಹಲಿಗೆ ತೆರಳಲು ರಾಜ್ಯ ಬಿಜೆಪಿ ನಿರ್ಧರಿಸಿದೆ.
ಸಂಪುಟ ವಿಸ್ತರಣೆ ಸೇರಿದಂತೆ ರಾಜ್ಯ ರಾಜಕಾರಣದ ಬೆಳವಣಿಗೆ ಬಗ್ಗೆ ವರಿಷ್ಠರ ಜತೆ ಮಾತನಾಡಲು ಡಿಸೆಂಬರ್ 27ರಂದು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು, ರಾಷ್ಟ್ರೀಯ ನಾಯಕರಿಂದಲೇ ನಾಯಕತ್ವದ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿ ವಿವಾದಕ್ಕೆ ಅಂತ್ಯಹಾಡಲು ತೀರ್ಮಾನಿಸಿದ್ದಾರೆ.