ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ಮಧ್ಯೆ ಬಿಕ್ಕಟ್ಟು ಆಳವಾಗುತ್ತಾ ಸಾಗಿದೆ.ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧ. ಕಾಂಗ್ರೆಸ್ ಬೆಂಬಲ ಅಗತ್ಯವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಸಿಂಗೂರ್ ಮತ್ತು ನಂದಿಗ್ರಾಮ ವಿಷಯಗಳಲ್ಲಿ ನಾನು ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. ನಮಗೆ ಕಾಂಗ್ರೆಸ್ ಬೆಂಬಲ ಅಗತ್ಯವಿಲ್ಲ. ಕಾಂಗ್ರೆಸ್ ಸದಾ ಕಾಲ ಹೇಳಿದ್ದನ್ನೆ ಹೇಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನ ಲೋಕಪಾಲ ಕುರಿತಂತೆ ಮಾತನಾಡಿದ ಮಮತಾ, ಲೋಕಪಾಲನಲ್ಲಿ ಲೋಕಾಯುಕ್ತವನ್ನು ಒತ್ತಾಯಪೂರ್ವಕವಾಗಿ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಯಿತು. ಒಂದು ವೇಳೆ ಸಿಪಿಐ(ಎಂ) ಜೊತೆಯಾಗಿ ಕಾರ್ಯನಿರ್ವಹಿಸಬಹುದು ಎಂದು ಭಾವಿಸಿದಲ್ಲಿ, ತೃಣಮೂಲ ಪಕ್ಷದ ಮೈತ್ರಿಯನ್ನು ತೊರೆಯಬಹುದು ಎಂದು ತಿಳಿಸಿದ್ದಾರೆ.
ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಯುಪಿಎ ಸರಕಾರ, ಪೆಟ್ರೋಲ್ ದರವನ್ನು ನಿರಂತರವಾಗಿ ಏರಿಕೆ ಘೋಷಿಸುತ್ತಿದೆ. ದರ ಏರಿಕೆಗಳಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದಿರಾ ಭವನಕ್ಕೆ ಕ್ರಾಂತಿಕಾರಿ ಬಂಗಾಳಿ ಕವಿ ಕಾಜಿ ನಜ್ರುಲ್ ಇಸ್ಲಾಮ್ ಹೆಸರನ್ನು ಪುನರ್ನಾಮಕರಣ ಮಾಡುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಸ್ತಾವನೆ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.