ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆ ಜಾರಿಯಾಗದಿರುವುದಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ವ್ಯವಸ್ಥಿತ ಸಂಚು ಕಾರಣವಾಗಿದೆ ಎಂದು ಅಣ್ಣಾ ತಂಡದ ಸದಸ್ಯ, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಆರೋಪಿಸಿದ್ದಾರೆ.
ಪ್ರಸ್ತುತ ಅಧಿವೇಶನದಲ್ಲಿ ಲೋಕಪಾಲ ಮಸೂದೆ ಜಾರಿ ಮಾಡುವುದು ರಾಜಕೀಯ ಪಕ್ಷಗಳಿಗೆ ಬೇಡವಾಗಿತ್ತು. ಪ್ರತಿಯೊಬ್ಬ ಸಂಸದರಿಗೂ ಕೂಡಾ ಮಸೂದೆ ಜಾರಿಗೊಳಿಸದಿರಲು ಷಡ್ಯಂತ್ರ ರೂಪಿಸಿದ್ದರು ಎಂದು ಕಿಡಿಕಾರಿದ್ದಾರೆ.
ಇದೀಗ ಕಾಂಗ್ರೆಸ್ ಸರಕಾರ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು.ಆದರೆ, ವಿಪಕ್ಷಗಳ ಅಸಹಕಾರದಿಂದ ಮಸೂದೆ ಜಾರಿಯಾಗಲಿಲ್ಲ ಎಂದು ಹೇಳಿಕೆ ನೀಡುತ್ತದೆ. ವಿಪಕ್ಷಗಳು, ದುರ್ಬಲ ಮಸೂದೆ ಮಂಡಿಸಿದ್ದರಿಂದ ನಾವು ಸಹಕಾರ ನೀಡಲಿಲ್ಲ ಎಂದು ಪ್ರತ್ಯಾರೋಪ ಮಾಡುವುದರಲ್ಲಿ ನಿರತವಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವೇಳೆ ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಜಾರಿ ಮಾಡಿದ್ದಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಸಶಕ್ತವಾಗುತ್ತಿತ್ತು. ಆದ್ದರಿಂದ ಲೋಕಪಾಲ ಮಸೂದೆ ಜಾರಿಗೊಳಿಸುವಂತೆ ಹೋರಾಟವನ್ನು ಆರಂಭಿಸಲಾಗಿತ್ತು. ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.
ಲೋಕಪಾಲ ಮಸೂದೆಯನ್ನು ಜನತೆ ಯಾವ ಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆಯ ಚುನಾವಣಾ ಫಲಿತಾಂಶ ಸಾಕ್ಷಿಯಾಗಲಿದೆ ಎಂದು ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.