ಕಡುಬಡತನದಿಂದಲೇ ಹುಟ್ಟಿ ಬದುಕಿದ ಅವರು ನಿವೃತ್ತಿಯ ನಂತರ ಮೈಸೂರು ಸಂಸ್ಥಾನದಲ್ಲಿ ದಿವಾನ ಹುದ್ದೆಯನ್ನು ಅಲಂಕರಿಸಿದ್ದರು. ಅದೊಮ್ಮೆ, ಸಂಬಳ ಹೆಚ್ಚು ಮಾಡುವುದಕ್ಕೆ ಮೈಸೂರು ಮಹಾರಾಜರು ನಿರ್ಧರಿಸಿದಾಗ, ವಿನಾಕಾರಣ ಸಂಬಳ ಹೆಚ್ಚಿಸುವುದು ಸರಿಯಲ್ಲ ಎಂದು ನಯವಾಗಿ ನಿರಾಕರಿಸಿ ಗರಿಮೆ ಮೆರೆದವರು.
ಕಡು ಬಡತನದಲ್ಲಿಯೇ ಹುಟ್ಟಿ ಬೆಳೆದು, ದೇಶದ ಮೇರು ವ್ಯಕ್ತಿಯಾಗಿ ಬೆಳೆದ, ಬೆಳಗಿದ ಮತ್ತು ಜನರ ಬಾಳು ಬೆಳಗಿಸಿದ ಅವರು, ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ಅವರದು ಬೆಲೆ ಕಟ್ಟಲಾಗದ ಸಾಧನೆ ಮತ್ತು ಅವರ ದೂರಗಾಮಿ ಯೋಜನೆಗಳು ಇಂದಿಗೂ ಸಕಾಲಿಕವಾಗಿರುವುದು, ಅವರ ಯೋಜನೆ-ಯೋಚನೆಗಳು ಸಮಯದ ಪ್ರವಾಹದಲ್ಲಿ ಎಷ್ಟೊಂದು ದೂರ ತಲುಪಿದೆ ಎಂಬುದಕ್ಕೆ ನಿದರ್ಶನ.
1928 ರಲ್ಲಿ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅವರು, ಅದು ಕಾಲಾನಂತರದಲ್ಲಿ ಅವಸಾನದಂಚಿಗೆ ತಲುಪಿದ್ದಾಗ ತಾವೇ ಆಡಳಿತದ ಉಸ್ತುವಾರಿ ವಹಿಸಿ ಪುನಶ್ಚೇತನಗೊಳಿಸಿದ್ದರು. ಅಂತೆಯೇ ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರಿನಲ್ಲಿ ಗಂಧದೆಣ್ಣೆ ಕಾರ್ಖಾನೆ, ಸಾಬೂನು, ಕಾಗದ ಕಾರ್ಖಾನೆ, ಚರ್ಮ ಹದ ಮಾಡುವ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಸ್ವಾತಂತ್ರ್ಯ ಪೂರ್ವದಿಂದಲೇ ಭಾರತದಲ್ಲಿ ಕೈಗಾರಿಕೆ, ನೀರಾವರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂತೆಯೇ ಮೋಟಾರು ಉದ್ಯಮದಲ್ಲಿಯೂ ಕೈಯಾಡಿಸಿದವರು. ಇದಲ್ಲದೆ ಬ್ಯಾಂಕಿಂಗ್ ವಲಯದಲ್ಲಿಯೂ ತಮ್ಮ ಛಾಪು ಒತ್ತಿದ ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಂಸ್ಥಾಪಕರು ಕೂಡ. ಚೇಂಬರ್ ಆಫ್ ಕಾಮರ್ಸ್ ರಚನೆಯೂ ಅವರ ಸಾಧನೆಯ ಹಿರಿಮೆಯ ತುರಾಯಿಗೆ ಮತ್ತೊಂದು ಗರಿ. ಯೆಮೆನ್ನಲ್ಲಿ ಅಣೆಕಟ್ಟೆ ಸ್ಥಾಪಿಸಿದ್ದು ಅವರ ಕೀರ್ತಿ ವಿದೇಶದಲ್ಲಿಯೂ ಪಸರಿಸಿದ್ದಕ್ಕೆ ಒಂದು ಉದಾಹರಣೆ.
ಸ್ವಾತಂತ್ರ್ಯ ಹೊಸ್ತಿಲಲ್ಲಿರುವಾಗಲೇ ದೇಶದ ಸರ್ವಾಂಗೀಣ ಪ್ರಗತಿ ಬಗ್ಗೆ ಕನಸು ಕಂಡಿದ್ದ ಅವರು, ದೇಶದ ಅಭಿವೃದ್ಧಿ, ಕೈಗಾರಿಕೆ ಸ್ಥಾಪನೆ ಕುರಿತಾಗಿ ಮಹಾತ್ಮ ಗಾಂಧೀಜಿ ಜೊತೆ ಆಗಾಗ್ಗೆ ಚರ್ಚೆ ನಡೆಸುತ್ತಿದ್ದ, ಪತ್ರ ವ್ಯವಹಾರಗಳನ್ನೂ ನಡೆಸುತ್ತಿದ್ದ ಸರ್ ಎಂ.ವಿ.,
ಬಡ ಕುಟುಂಬದಲ್ಲೇ ಹುಟ್ಟಿ ಬೆಳೆದ ಅವರಲ್ಲಿ ಅದೆಂಥಾ ಪ್ರತಿಭೆಯಿತ್ತು! ಅದಕ್ಕಾಗಿಯೇ ಅವರ ಮೆದುಳನ್ನು ಇಂದಿಗೂ ಮ್ಯೂಸಿಯಂ (ವಸ್ತು ಸಂಗ್ರಹಾಲಯ) ನಲ್ಲಿ ಇರಿಸಲಾಗಿದ್ದು, ಅದನ್ನು ಅಧ್ಯಯನ ಮಾಡುವ ಕುರಿತಾಗಿ ಸಂಶೋಧಕರು ಯೋಚಿಸಿದ್ದರು!
ಯಾರಾದರೂ ಒಳ್ಳೆಯ ಸಲಹೆ, ಉಪಾಯ, ಯೋಜನೆಗಳನ್ನು ರೂಪಿಸಿದರೆ, "ಆಹಾ! ನಿನ್ನದು ವಿಶ್ವೇಶ್ವರಯ್ಯವರ ಮೆದುಳು" ಅಂತ ಹೇಳುವಷ್ಟರ ಮಟ್ಟಿಗೆ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಅವರ ಹೆಸರು ದೇಶದ ಚರಿತ್ರೆಯಲ್ಲಿ ಚಿರಸ್ಥಾಯಿ. ಅಂತಹಾ ಶಾಶ್ವತ ಚೇತನಕ್ಕೆ ವೆಬ್ದುನಿಯಾ ಬಳಗದಿಂದ ಸಾಸಿರ ಸಾಸಿರ ಪ್ರಣಾಮಗಳು.
( ಚಿತ್ರ: ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ಸಮಾಧಿ. ಚಿತ್ರ ಕೃಪೆ: ಪ್ರಕಾಶ್ ಸುಬ್ಬರಾವ್)