Select Your Language

Notifications

webdunia
webdunia
webdunia
webdunia

ದೀಪಾವಳಿ ಹಬ್ಬದ ಸದ್ದಿಲ್ಲ, ಬೆಳಕೇ ಇರುವುದು ಇಲ್ಲೆಲ್ಲ!

ದೀಪಾವಳಿ ಹಬ್ಬದ ಸದ್ದಿಲ್ಲ, ಬೆಳಕೇ ಇರುವುದು ಇಲ್ಲೆಲ್ಲ!
ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಮುಂತಾದವುಗಳು ಪಟಾಕಿ ಉದ್ಯಮದ ಮೇಲೂ ಗಾಢ ಪ್ರಭಾವ ಬೀರಿರುವುದರೊಂದಿಗೆ ಈ ಬಾರಿ ದೀಪಾವಳಿಯಲ್ಲಿ ಪಟಾಕಿಗಳು ಹೆಚ್ಚು ಸದ್ದು
ಮಾಡಲಾರವು. ಕಳೆದ ಬಾರಿಗೆ ಹೋಲಿಸಿದರೆ ಪಟಾಕಿಗಳ ಬೆಲೆ ಸುಮಾರು ಶೇ.35ರಷ್ಟು ಏರಿಕೆ ಕಂಡಿವೆ. ಆದರೂ, ವಿಶೇಷವಾಗಿ ತಮಿಳುನಾಡಿನಲ್ಲಿ ಶಬ್ದ ಮಾಲಿನ್ಯದ ಮೇಲೆ ತೀವ್ರ ನಿಯಂತ್ರಣ ಹೇರಲಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹಣವಿದ್ದವರ ಮೂಲಕವೂ ಪಟಾಕಿಗಳು ಹೆಚ್ಚು ಬೆಳಗುತ್ತವೆಯೇ ಹೊರತು ಶಬ್ದ ಮಾಡಲಾರವು.

ಈ ಕುರಿತು ಸುಪ್ರೀಂ ಕೋರ್ಟ್ ಆದೇಶವೇ ಇದೆ. ಪಟಾಕಿಗಳ ಸದ್ದು 125 ಡೆಸಿಬೆಲ್ ಪ್ರಮಾಣವನ್ನು ಮೀರಬಾರದು ಎನ್ನುತ್ತದೆ ಅದರ ಆದೇಶ. ಹೀಗಾಗಿ ಒಂದಷ್ಟು ಮೌನ, ಶಾಂತ ವಾತಾವರಣ ಬಯಸುವವರಿಗೆ ಈ ದೀಪಾವಳಿ ಮತ್ತಷ್ಟು ನೆಮ್ಮದಿ ನೀಡುತ್ತದೆ. ಪಟಾಕಿಗಳ ಹಾವಳಿ ತಡೆಯಲಾರದೆ, ಶಬ್ದ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ನ್ಯಾಯಾಲಯಗಳಿಗೆ ಮೊರೆ ಹೋದ ಉದಾಹರಣೆಗಳಿವೆ. ಆದರೆ ಈ ಬಾರಿ ಅದಕ್ಕೆ ಒಂದಷ್ಟು ಯಶಸ್ಸು ಸಿಕ್ಕಿದೆ.
PTI


ಹೆಚ್ಚಿನ ಪಟಾಕಿಗಳನ್ನು ಸುಮಾರು 40 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲೇ ಸಂಗ್ರಹಿಸಿಡಬೇಕಾಗುತ್ತದೆ. ಆದರೆ ಪಟಾಕಿಗಳ ಕಾರ್ಖಾನೆಗಳು ಸಾಕಷ್ಟಿರುವ ತಮಿಳುನಾಡಿನಲ್ಲಿ ಕಳೆದೊಂದು ವಾರದಿಂದ ತೀವ್ರ ಮಳೆಯಾಗುತ್ತಿರುವುದರಿಂದಾಗಿ ಪಟಾಕಿ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಚಿಲ್ಲರೆ ಮಾರಾಟಗಾರರಲ್ಲಿ ಇದು ಆತಂಕ ಮೂಡಿಸಿದ್ದೂ ಹೌದು.

ಆದರೆ, ಶಬ್ದದ ಅಭಾವವಿದ್ದರೇನಂತೆ, ಬಣ್ಣ ಬಣ್ಣದ ಬೆಳಕಂತೂ ಕಣ್ತುಂಬಾ ನೋಡಬಹುದಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಟಾಕಿ ತಯಾರಕರು ವರ್ಣಮಯವಾಗಿ ಆಗಸವನ್ನು ಅಲಂಕರಿಸಬಲ್ಲ ಸುಡುಮದ್ದುಗಳ ತಯಾರಿಕೆಗಳತ್ತ ಗಮನ ಹರಿಸಿದ್ದಾರೆ.

ಹೆಚ್ಚುಕಡಿಮೆ ಸದ್ದಿಲ್ಲದೆಯೇ ಈ ಸುಡುಮದ್ದುಗಳನ್ನು ಸುಡಬಹುದು. ಭಾರತದ ಸುಡುಮದ್ದು ರಾಜಧಾನಿ ಎಂದೇ ಪರಿಗಣಿಸಲ್ಪಟ್ಟಿರುವ ತಮಿಳುನಾಡಿನ ಶಿವಕಾಶಿ
ಯಲ್ಲಿ ಹೆಚ್ಚಿನ ಪಟಾಕಿ ಕಾರ್ಖಾನೆಗಳು ಕಾರ್ಯಾಚರಿಸುತ್ತಿವೆ. ಪ್ರತಿಯೊಂದು ಪಟಾಕಿಯಲ್ಲಿ ಸ್ಫೋಟಕ ರಾಸಾಯನಿಕ ಪದಾರ್ಥಗಳನ್ನು ಕಡಿಮೆ ತುಂಬಲಾಗುತ್ತಿದೆ. ಈ ಮೂಲಕ ಶಬ್ದದ ಪ್ರಮಾಣವು 125 ಡೆಸಿಬೆಲ್ ಮೀರದಂತೆ ಮತ್ತು ಅದಕ್ಕಿಂತ ಕೆಳಗೆ ಬಾರದಂತೆಯೂ ನೋಡಿಕೊಳ್ಳುತ್ತಿದ್ದಾರೆ ಪಟಾಕಿ ತಯಾರಕರು. ಸದ್ದು ಇಲ್ಲದಿದ್ದರೆ ಪಟಾಕಿ ಖರ್ಚಾಗುವುದಿಲ್ಲ ಎಂಬುದೇ ಇದಕ್ಕೆ ಪ್ರಧಾನ ಕಾರಣ. ಹೀಗಾಗಿ ಜನಪ್ರಿಯ ಪಟಾಕಿಗಳಾದ ಆಟಂ ಬಾಂಬ್‌ಗಳಿಗೆ ಬದಲಾಗಿ ಬಣ್ಣ ಬಣ್ಣದ ಸುರುಸುರು ಬತ್ತಿ (ನಕ್ಷತ್ರ ಕಡ್ಡಿ) ತಯಾರಿಕೆಯತ್ತ ತಯಾರಕರು ಗಮನ ಕೇಂದ್ರೀಕರಿಸಿದ್ದಾರೆ.

webdunia
PTI
ಮತ್ತೊಂದೆಡೆ ಪಟಾಕಿಗಳು ಸದ್ದು ಮಾಡದಿರುವುದಕ್ಕೆ ಬೆಲೆಯೂ ಪ್ರಮುಖ ಕಾರಣ. ತಮಿಳುನಾಡು ಸುಡುಮದ್ದು ತಯಾರಕರ ಸಂಘ (ಟಿಎಎನ್‌ಎಫ್ಎಂಎ) ಹೇಳಿಕೆಯ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಡುಮದ್ದಿನ ಬೆಲೆ ಶೇ.35ರಷ್ಟು ಹೆಚ್ಚಾಗಿದೆ. ಪೊಟಾಷಿಯಂ ಮತ್ತು ಬೇರಿಯಂ ನೈಟ್ರೇಟ್, ಸಲ್ಫರ್, ಕಬ್ಬಿಣದ ವೈರ್‌ಗಳು, ಅಲ್ಯುಮೀನಿಯಂ ಪೌಡರ್, ಮೆಗ್ನೀಷಿಯಂ, ಕಾಗದ, ಬೋರ್ಡಿನ ಬೆಲೆ ಮತ್ತು ಕಾರ್ಮಿಕರ ವೇತನದಲ್ಲಿಯೂ ಶೇ.30ರಷ್ಟು ಹೆಚ್ಚಳವಾಗಿದೆಯಂತೆ.

ಉತ್ಪಾದನಾ ವೆಚ್ಚ ಏರಿಕೆಯಿಂದಾಗಿ ಈ ಬಾರಿ ಹೊಸ ಪ್ರಮಾಣದಲ್ಲಿ ಸದ್ದು ಮಾಡುವ ಯಾವುದೇ ಪಟಾಕಿಗಳನ್ನು ಹೊಸದಾಗಿ ಹೊರತರುವುದು ಸಾಧ್ಯವಾಗಿಲ್ಲ ಎನ್ನುತ್ತಾರೆ ಶಿವಕಾಶಿಯ ಕಾಳೀಶ್ವರೀ ಫೈರ್‌ವರ್ಕ್ಸ್ ಕಂಪನಿಯ ವಕ್ತಾರರೊಬ್ಬರು.

ಇದರ ಬದಲು ರಷ್ಯಾ ಮತ್ತು ಅಮೆರಿಕದಂತಹ ರಾಷ್ಟ್ರಗಳ ದೊಡ್ಡ ನಾಯಕರ ಹೆಸರಿರುವ "ಕ್ಷಿಪಣಿ"ಗಳು ವಿಶಿಷ್ಟ ಸದ್ದು ಮತ್ತು ವರ್ಣಮಯ ಪರಿಣಾಮಗಳೊಂದಿಗೆ ಈ ಬಾರಿ ಆಗಸವನ್ನು ಅಲಂಕರಿಸಲಿವೆ ಎಂದು ಅವರು ಹೇಳಿದ್ದಾರೆ.

ಒಂದೆಡೆ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಮತ್ತು ಅಕ್ರಮ ಪಟಾಕಿ ಕಾರ್ಖಾನೆಗಳ ವಿರುದ್ಧ ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದಾಗಿಯೂ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಪಟಾಕಿ ಕಾರ್ಖಾನೆಯ ಮಾಲೀಕರ ಒಟ್ಟು ಅಭಿಪ್ರಾಯ.

ಪೊಲೀಸರೇನು ಹೇಳುತ್ತಿದ್ದಾರೆ?
ಶಿವಕಾಶಿಯಲ್ಲಿ ಸುಮಾರು 450ರಷ್ಟು ಪಟಾಕಿ ಕಾರ್ಖಾನೆಗಳು ಪರವಾನಗಿಯೊಂದಿಗೆ ಸಕ್ರಮವಾಗಿಯೇ ಕಾರ್ಯಾಚರಿಸುತ್ತಿವೆ. ಆದರೆ ಅದಕ್ಕಿಂತ ದುಪ್ಪಟ್ಟು ಕಾರ್ಖಾನೆಗಳು ಕೂಡ ಪಟಾಕಿ ತಯಾರಿಸುತ್ತಿವೆ ಎಂಬುದು ತಿಳಿದುಬಂದಾಗ, ನಾವು ಈ ಬಗ್ಗೆ ಕ್ರಮ ಕೈಗೊಳ್ಳಲೇಬೇಕಾಯಿತು ಎನ್ನುತ್ತಾರೆ ತಮಿಳುನಾಡು ದಕ್ಷಿಣ ಐಜಿಪಿ ಸಂಜೀವ್ ಕುಮಾರ್.
webdunia
PTI

ಕೆಲವು ಉತ್ಪನ್ನಗಳು ತಯಾರಕರಿಗೆ ಮಾತ್ರವೇ ಅಲ್ಲ, ಬಳಕೆದಾರರಿಗೂ ಅಪಾಯಕಾರಿ ಎಂದು ಕಂಡುಬಂದಿದ್ದರಿಂದ ನಾವು ಕ್ರಮ ಕೈಗೊಳ್ಳಬೇಕಾಯಿತು. ಮತ್ತು ಹಲವಾರು ಟ್ರಕ್‌ಲೋಡು ರಾಸಾಯನಿಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಯಿತು ಹಾಗೂ ಹಲವು ಕಾರ್ಖಾನೆಗಳಿಗೆ ಬೀಗ ಜಡಿಯಬೇಕಾಯಿತು ಎಂದವರು ಹೇಳಿದ್ದಾರೆ.

ಸುಡುಮದ್ದು ಉದ್ಯಮವು ಸುಮಾರು 10 ಶತಕೋಟಿ ರೂಪಾಯಿ ವಿಶಾಲ ವ್ಯಾಪ್ತಿ ಹೊಂದಿದ್ದು, ವಾರ್ಷಿಕವಾಗಿ ಶೇ.10ರ ಅಭಿವೃದ್ಧಿಯಾಗುತ್ತಿದೆ. ಇದೀಗ ಅವುಗಳಿಗೆ ಕಡಿವಾಣ ಹಾಕಿದ್ದು, ಸುರಕ್ಷಿತವಾಗಿ ಯಾರು ಪಟಾಕಿ ಕಾರ್ಖಾನೆ ಮುನ್ನಡೆಸುತ್ತಿದ್ದಾರೋ ಅವರಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಅಲ್ಲದೆ, ಬಾಲ ಕಾರ್ಮಿಕರನ್ನು ದುಡಿಸುವ ಪಟಾಕಿ ಕಾರ್ಖಾನೆಗಳ ಮೇಲೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕುಮಾರ್ ವಿವರಿಸುತ್ತಾರೆ.

ಒಟ್ಟಿನಲ್ಲಿ, ದೀಪಾವಳಿಯು ಬೆಳಕಿನ ಹಬ್ಬವೇ ಹೊರತು ಕಿವಿಗಡಚಿಕ್ಕುವ ಸದ್ದಿನ ಹಬ್ಬವಲ್ಲ ಎಂಬುದು ಶಬ್ದಮಾಲಿನ್ಯ ತಡೆ ಪ್ರಯತ್ನದ ಮೂಲಕ ನಿಜವಾಗುತ್ತಿದೆ.

Share this Story:

Follow Webdunia kannada