Select Your Language

Notifications

webdunia
webdunia
webdunia
webdunia

ಸಾಹಿತಿಗಳಿಗೂ ಆರೋಗ್ಯ ವಿಮೆ ಜಾರಿಗೆ ತನ್ನಿ:ಜಿ.ವಿ.ಮನವಿ

ಸಾಹಿತಿಗಳಿಗೂ ಆರೋಗ್ಯ ವಿಮೆ ಜಾರಿಗೆ ತನ್ನಿ:ಜಿ.ವಿ.ಮನವಿ
ಬೆಂಗಳೂರು , ಶುಕ್ರವಾರ, 4 ಫೆಬ್ರವರಿ 2011 (17:44 IST)
WD
ಸಾಹಿತಿಗಳ ಆರೋಗ್ಯ ರಕ್ಷಣೆಗೆ 'ಯಶಸ್ವಿನಿ' ಮಾದರಿಯಲ್ಲಿ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತರಬೇಕು ಎಂದು 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸರಕಾರವನ್ನು ಒತ್ತಾಯಿಸಿದರು.

ಈ ಬಗ್ಗೆ ಸಾಹಿತ್ಯ ಪರಿಷತ್ತು ಸರಕಾರದ ಮೇಲೆ ಒತ್ತಡ ತರಬೇಕು ಎಂದು ಸಲಹೆ ನೀಡಿದರು. ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ನಮ್ಮ ಸರಕಾರ ರೈತರ ಒಳಿತಿಗಾಗಿ ಯಶಸ್ವಿನಿ ಎಂಬ ಆರೋಗ್ಯ ವಿಮೆ ಯೋಜನೆಯನ್ನು ಸ್ಥಾಪಿಸಿದೆ. ಇದರಿಂದ ಲಕ್ಷಾಂತರ ರೈತರ ಕುಟುಂಬಗಳಿಗೆ ಸಹಾಯವಾಗುತ್ತಿದೆ ಎಂದರು.

ಅನೇಕ ಸಾಹಿತಿಗಳಿಗೂ, ಅವರ ಕುಟುಂಬಕ್ಕೂ ಈ ರೀತಿಯ ಆರೋಗ್ಯ ವಿಮೆಯ ಅವಶ್ಯಕತೆ ಇದೆ. ಅಂಥವರಿಗೆ ಯಶಸ್ವಿನಿ ರೀತಿಯ ಆರೋಗ್ಯ ವಿಮೆಯ ಯೋಜನೆಯನ್ನು ಜಾರಿಗೊಳಿಸಿದರೆ ಈ ವರ್ಗಕ್ಕೆ ತುಂಬ ಉಪಕಾರವಾಗುತ್ತದೆ ಎಂದು ಹೇಳಿದರು.

ಅರ್ಹ ಶಿಕ್ಷಕರ ಕೊರತೆ: ನಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆಗೆ ಅರ್ಹರಾದ ಶಿಕ್ಷಕರು ದೊರಕುತ್ತಿಲ್ಲ. ಸರಕಾರ ಈಗಲಾದರೂ ನಮ್ಮಲ್ಲಿರುವ ಶಿಕ್ಷಕರಲ್ಲಿ ಅರ್ಹರಾದವರನ್ನು ಆರಿಸಿ, ಕನ್ನಡ ಬೋಧನೆಯಲ್ಲಿ ಸರಿಯಾದ ಮಾರ್ಗವನ್ನು ಕಲಿಸುವ ಶಿಬಿರಗಳನ್ನು ನಡೆಸಿ ಪ್ರತಿವರ್ಷವೂ ಒಂದು ಸಾವಿರ ಶಿಕ್ಷಕರನ್ನು ಸಿದ್ದಗೊಳಿಸಬೇಕು ಎಂದು ಕರೆ ನೀಡಿದರು.

ಇದು ನಡೆಯದಿದ್ದರೆ, ಕನ್ನಡದ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರೀತಿ ಉಂಟಾಗುವುದಿಲ್ಲ. ಪ್ರೀತಿಯನ್ನು ಉಂಟು ಮಾಡುವ ಶಿಕ್ಷಕರ ಸಂಖ್ಯೆ ಬೆಳೆಯಬೇಕು. ಕನ್ನಡವನ್ನು ಐಚ್ಛಿಕವಾಗಿ ಆಳವಾಗಿ ಅಭ್ಯಾಸ ಮಾಡಿದವರೇ ಕನ್ನಡ ಶಿಕ್ಷಕರಾಗಬೇಕು, ನಮ್ಮ ನಾಡಿನ ಶಿಕ್ಷಣ ಇಲಾಖೆಗೆ ಈ ಬಗ್ಗೆ ಎಚ್ಚರಿಕೆಯನ್ನು ಕ್ಷೇತ್ರದ ಶಾಸಕರು ನೀಡಬೇಕು ಎಂದು ಸಲಹೆ ನೀಡಿದರು.

Share this Story:

Follow Webdunia kannada