ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶ್ರೀರಾಮುಲು ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ವಿವಾದ ಇದೀಗ ಹೈಕಮಾಂಡ್ನಲ್ಲೂ ಬಿರುಗಾಳಿ ಬೀಸಿದೆ.
ಇಂದು ನಡೆದ ಬಿಜೆಪಿಯ ಸಂಸದೀಯ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡ ಅರುಣ್ ಜೇಟ್ಲಿ ವಿರುದ್ಧವೇ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಗುಡುಗಿದ್ದಾರೆ
ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಜೈಲು ಪಾಲಾದ ಜನಾರ್ದನ ರೆಡ್ಡಿಗೆ ಸಚಿವ ಸ್ಥಾನ ಕೊಡಬೇಡಿ ಎಂದು ಹೇಳಿದ್ದೆ. ಆದರೆ, ನನ್ನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಸಚಿವ ಸ್ಥಾನ ನೀಡಿದಿರಿ. ಆದರೆ, ಅವರಿಂದ ಪಕ್ಷದ ಘನತೆಗೆ ಕುತ್ತು ಬಂದಿದೆ.ಇದೀಗ ಬಿಎಸ್ಆರ್ ಪಕ್ಷದ ಮುಖ್ಯಸ್ಥ ಶ್ರೀರಾಮುಲು ಅವರನ್ನು ಬಿಜೆಪಿಗೆ ಯಾಕೆ ಸೇರಿಸಿಕೊಳ್ಳುತ್ತಿದ್ದೀರಿ ಎಂದು ಕಿಡಿಕಾರಿದರು.
ಶ್ರೀರಾಮುಲು ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವುದರಿಂದ ಪಕ್ಷದ ವರ್ಚಸ್ಸನ್ನು ಕುಂದಿಸುತ್ತದೆ. ಯಾವುದೇ ಕಾರಣಕ್ಕೂ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ಸುಷ್ಮಾ ಸ್ವರಾಜ್ ಸಂಸದೀಯ ಸಭೆಯಲ್ಲಿ ಹೇಳಿದ್ದಾರೆ.
ಶ್ರೀರಾಮುಲು ಅವರನ್ನು ಬಿಜೆಪಿ ತೆಕ್ಕೆಗೆ ಸೇರಿಸಿಕೊಳ್ಳುವ ಬಗ್ಗೆ ಅರುಣ್ ಜೇಟ್ಲಿ ಪ್ರಸ್ತಾಪಿಸಿದಾಗ ಸುಷ್ಮಾ ಸ್ವರಾಜ್ ಪ್ರಬಲವಾಗಿ ವಿರೋಧಿಸಿದರು ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.