Select Your Language

Notifications

webdunia
webdunia
webdunia
webdunia

ಭಟ್ಟರ ಪೊಡಕ್ಷನ್ನು, 'ಪ್ಯಾರ‍್ಗೆ ಆಗ್ಬಿಟ್ಟೈತೆ' ಪವನ್ ಡೈರೆಕ್ಷನ್ನು!

ಭಟ್ಟರ ಪೊಡಕ್ಷನ್ನು, 'ಪ್ಯಾರ‍್ಗೆ ಆಗ್ಬಿಟ್ಟೈತೆ' ಪವನ್ ಡೈರೆಕ್ಷನ್ನು!
SUJENDRA
ಕನ್ನಡ ಚಿತ್ರರಂಗದಲ್ಲಿ ಯೋಗರಾಜ್ ಭಟ್ ಶಿಷ್ಯರ ಪಟಾಲಂ ದಿನೇದಿನೇ ದೊಡ್ಡದಾಗುತ್ತಿದೆ. ಅವರು ಯಶಸ್ವಿಯೂ ಆಗುತ್ತಿದ್ದಾರೆ. ಆ ಸಾಲಿಗೆ ಇನ್ನೊಂದು ಸೇರ್ಪಡೆ ಪವನ್ ಒಡೆಯರ್. ಶಿಷ್ಯ ಗೆದ್ದಿರುವುದನ್ನು ನೋಡಿರುವ ಭಟ್ಟರೀಗ, ಅದೇ ಪವನ್ ನಿರ್ದೇಶನದ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ.

ಭಟ್ಟರ ಶಿಷ್ಯ ಪವನ್ ಎಂದಾಗ ಗೊಂದಲ ಸಹಜ. ಯಾಕೆಂದರೆ ಪವನ್ ಎಂಬ ಇಬ್ಬರು ಶಿಷ್ಯರಿದ್ದಾರೆ. ಒಬ್ಬರು 'ಲೈಫು ಇಷ್ಟೇನೆ' ಪವನ್. ಅವರ ಪೂರ್ತಿ ಹೆಸರು ಪವನ್ ಕುಮಾರ್. ಆ ಚಿತ್ರಕ್ಕೂ ಹಣ ಹಾಕಿದ್ದು ಯೋಗರಾಜ್ ಭಟ್. ಈಗ ಇನ್ನೊಬ್ಬ ಶಿಷ್ಯ ಪವನ್ ಗೆದ್ದಿದ್ದಾರೆ. ಇವರ ಹೆಸರು ಪವನ್ ಒಡೆಯರ್.

ಗೆದ್ದಿರುವ ಚಿತ್ರ ಯಾವುದೆಂದು ಎಲ್ಲರಿಗೂ ಗೊತ್ತೇ ಇರುತ್ತದೆ. ಅದು ಕೋಮಲ್ ಕುಮಾರ್ ನಾಯಕನಾಗಿದ್ದ 'ಗೋವಿಂದಾಯ ನಮಃ'. ಈ ಚಿತ್ರದ 'ಪ್ಯಾರ‍್ಗೆ ಆಗ್ಬಿಟ್ಟೈತೆ' ಹಾಡಂತೂ ಎಬ್ಬಿಸಿದ ಕೋಲಾಹಲ ಅಷ್ಟಿಷ್ಟಲ್ಲ ಬಿಡಿ. ಮೊನ್ನೆ ಈ ಚಿತ್ರದ ಸಂತೋಷಕೂಟಕ್ಕೆ ಯೋಗರಾಜ್ ಭಟ್ ಬಂದಿದ್ದರು. ಆಗಲೇ ಬಯಲಾಗಿದ್ದು, ಪವನ್ ನಿರ್ದೇಶನದ ಚಿತ್ರವನ್ನು ಭಟ್ರು ನಿರ್ಮಿಸುತ್ತಿದ್ದಾರೆ ಅನ್ನೋದು.

ಆದರೂ ಈ ಬಗ್ಗೆ ಹೆಚ್ಚೇನೂ ಗೊತ್ತಾಗಿಲ್ಲ. ಸದ್ಯ ಕಥೆ ಬರೆಯುತ್ತಿರುವ ಪವನ್, ಒಂದು ಹಂತಕ್ಕೆ ಬಂದ ಮೇಲೆ ವಿವರ ಕೊಡೋದಾಗಿ ಹೇಳಿ ಸುಮ್ಮನಾಗಿದ್ದಾರೆ.

ಭಟ್ರು ಬರೀ ನಿರ್ಮಾಣ ಮಾತ್ರ ಮಾಡ್ತಾರಾ? ಹೌದಂತೆ. ಪವನ್ ಸಹಾಯ ಕೇಳಿದ್ರೆ ಹಾಡುಗಳಿಗೆ ಸಾಹಿತ್ಯ ಬರೀತಾರಂತೆ. ಇಲ್ಲಾಂದ್ರೆ ಅದೂ ಇಲ್ಲ. ಎಲ್ಲವೂ ಶಿಷ್ಯನ ಕೈಯಲ್ಲಿದೆ ಎಂದು ನಿರಾಳರಾಗಿದ್ದಾರಂತೆ. ಹಾಗಂತ ಭಟ್ರ ಕ್ಯಾಂಪಿನ ಮೂಲಗಳು ಗುಸುಗುಸು ಎಂದು ದೊಡ್ಡ ಸದ್ದು ಬರದಂತೆ ಗುಟ್ಟು ಹೇಳಿವೆ.

ಇತ್ತ ಪವನ್ 'ಗೋವಿಂದಾಯ ನಮಃ' 25 ದಿನ ಪೂರೈಸಿದ ಖುಷಿಯಲ್ಲಿದ್ದಾರೆ. ಖಂಡಿತಾ ಮುಂದೆ 50, ನಂತರ ಸೆಂಚುರಿ ಬಾರಿಸುವುದು ಖಚಿತ ಎನ್ನುತ್ತಾರೆ ನಿರ್ಮಾಪಕ ಕೆ.ಎ. ಸುರೇಶ್. ಈ ಸಂಭ್ರಮವನ್ನು ಹಂಚಿಕೊಳ್ಳಲು ಯೋಗರಾಜ್ ಭಟ್ ಜತೆ ನಿರ್ದೇಶಕ ಪ್ರೇಮ್, ನಟ ಪ್ರೇಮ್, ಚಿರಂಜೀವಿ ಸರ್ಜಾ, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದವರೂ ಬಂದಿದ್ದರು.

Share this Story:

Follow Webdunia kannada