ಯೋಗಿ ತಂದೆ ಟಿ.ಪಿ. ಸಿದ್ದರಾಜು ನಿರ್ಮಿಸಿರುವ ಸಿದ್ಲಿಂಗು ಬಹುನಿರೀಕ್ಷೆ ಮೂಡಿಸಿರುವ ಚಿತ್ರ. ಇದಕ್ಕೆ ಕಾರಣ, ಯೋಗಿ ಮತ್ತು ರಮ್ಯಾ ಜತೆಯಾಗಿ ನಟಿಸಿರುವುದು. ಜತೆಗೆ ಈ ಚಿತ್ರದ ಸಂಭಾಷಣೆಗಳು ಭಾರೀ ಸದ್ದು ಮಾಡಿರುವುದು.
ರಮ್ಯಾ ಟೀಚರ್ ಅವತಾರದಲ್ಲಿ, ಅದರಲ್ಲೂ ಮೊತ್ತ ಮೊದಲ ಬಾರಿಗೆ ಗ್ಲಾಮರ್ ರಹಿತ ಪಾತ್ರವೊಂದರಲ್ಲಿ ಕಾಣಿಸಿರುವುದು ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅವರ ಬಾಯಿಯಿಂದಲೂ ಡಬ್ಬಲ್ ಮೀನಿಂಗ್ ಮಾತುಗಳು ಬಂದಿರುವುದು ಇನ್ನೊಂದು ಅಚ್ಚರಿ. ಇದಕ್ಕೆ ಸಮರ್ಥ ಕಾರಣಗಳಿವೆ ಅನ್ನೋ ನಿರ್ದೇಶಕ ವಿಜಯ ಪ್ರಸಾದ್ ತಾಕತ್ತು ಏನು ಅನ್ನೋದು ಕೂಡ ಈ ವಾರ ಬಯಲಾಗಲಿದೆ.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವಿಜಯ ಪ್ರಸಾದ್ ಚೊಚ್ಚಲ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಜ್ಞಾನಮೂರ್ತಿ ಛಾಯಾಗ್ರಹಣವಿದೆ. ತಾರಾಬಳಗದಲ್ಲಿ ಸುಮನ್ ರಂಗನಾಥ್, ಅಚ್ಚುತರಾವ್, ಗಿರಿಜಾ ಲೋಕೇಶ್, ರಂಗಾಯಣ ರಘು, ಶರಣ್ ಮುಂತಾದವರಿದ್ದಾರೆ.
ಇನ್ನು ತಾಜ್ಮಹಲ್, ಪ್ರೇಮ್ ಕಹಾನಿ, ಮೈಲಾರಿ ಖ್ಯಾತಿಯ ಆರ್. ಚಂದ್ರು ನಿರ್ದೇಶನದ ಚಿತ್ರ ಕೋ ಕೋ. ಶ್ರೀನಗರ ಕಿಟ್ಟಿಗೆ ಇಲ್ಲಿ ಮೊದಲ ಬಾರಿ ನಾಯಕಿಯಾಗಿರುವವರು ಮಲಯಾಳಿ ಕುಟ್ಟಿ ಪ್ರಿಯಾಮಣಿ.
SUJENDRA
ಈ ಹಿಂದಿನ ಚಿತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿರುವ ಚಂದ್ರು ಈ ಬಾರಿ ಯಾವ ಮ್ಯಾಜಿಕ್ ಮಾಡಿದ್ದಾರೆ ಅನ್ನೋ ಕುತೂಹಲಕ್ಕೆ ಕಥೆಯ ಯಾವುದೇ ಎಳೆ ಸಿಕ್ಕಿಲ್ಲ. ಚಿತ್ರತಂಡದ ಇತರರು ಹೇಳುವ ಪ್ರಕಾರ ಇದೊಂದು ಹಾಸ್ಯ ಚಿತ್ರ. ಅದೇನೇ ಆಗಿದ್ದರೂ, ಈ ಚಿತ್ರ ಒಂದಷ್ಟು ಕುತೂಹಲ ಕೆರಳಿಸಿರುವುದಂತೂ ಹೌದು.
ಆರ್. ಚಂದ್ರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದರೆ, ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಮಣ ಗೋಪಾಲ ಮಟ್ಟುಗಳನ್ನು ಹಾಕಿರುವುದು ವಿಶೇಷ. ಅನುಪ್ರಭಾಕರ್, ಶ್ರೀಹರಿ, ಹರ್ಷಿಕಾ ಪೂಣಚ್ಚ, ರವಿಕಾಳೆ, ರಂಗಾಯಣ ರಘು, ಸುರೇಶ್ ಮಂಗಳೂರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.