Select Your Language

Notifications

webdunia
webdunia
webdunia
webdunia

'ಬಚ್ಚನ್'ಗೆ ದೀಪಾ ಸನ್ನಿಧಿ ಬೇಡವೆಂದರೇ ಸುದೀಪ್?

'ಬಚ್ಚನ್'ಗೆ ದೀಪಾ ಸನ್ನಿಧಿ ಬೇಡವೆಂದರೇ ಸುದೀಪ್?
SUJENDRA
'ಬಚ್ಚನ್' ಚಿತ್ರಕ್ಕೆ ಪ್ರಮುಖ ನಾಯಕಿಯ ಆಯ್ಕೆಯಲ್ಲಿ ಗೊಂದಲಗಳಿದ್ದರೂ, ದೀಪಾ ಸನ್ನಿಧಿ ಕುರಿತು ನಿರ್ದೇಶಕ ಶಶಾಂಕ್ ಸ್ಪಷ್ಟವಾಗಿದ್ದರು. ಆಕೆಯೂ ನಮ್ಮ ಚಿತ್ರದಲ್ಲೊಬ್ಬಳು ನಾಯಕಿ ಎಂದು ಆರಂಭದಲ್ಲಿಯೇ ಹೇಳಿದ್ದರು. ಇಷ್ಟಾದರೂ ಕೊನೆಯ ಕ್ಷಣದಲ್ಲಿ ದೀಪಾಗೆ ಕೊಕ್ ಕೊಡಲಾಗಿದೆ. ಇದರ ಹಿಂದೆ ನಾಯಕ ಕಿಚ್ಚ ಸುದೀಪ್ ನೆರಳಿದೆಯೇ?

ಹಾಗಂತ ಗಾಂಧಿನಗರದ ಮಂದಿ ಬೆರಳು ತೋರಿಸಿ ಟಾರ್ಗೆಟ್ ಮಾಡುತ್ತಿದ್ದಾರೆ. ಈ ಹಿಂದೆ 'ಜರಾಸಂಧ' ಚಿತ್ರದಲ್ಲೂ ಇದೇ ರೀತಿ ಆಗಿತ್ತು. ನಾಯಕ ದುನಿಯಾ ವಿಜಯ್ ಹೇಳಿದಂತೆ ಕೇಳಿ, ಐಂದ್ರಿತಾ ರೇಯನ್ನು ಪ್ರೊಜೆಕ್ಟ್‌ನಿಂದ ಶಶಾಂಕ್ ಹೊರ ದಬ್ಬಿದ್ದರು. ಈ ಬಾರಿಯೂ ಸುದೀಪ್‌ರಿಂದಾಗಿ ದೀಪಾ ಸನ್ನಿಧಿ ಔಟ್ ಆಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಗಾಳಿಸುದ್ದಿಗಳ ಪ್ರಕಾರ, ದೀಪಾ ಜತೆ ಸುದೀಪ್‌ಗೆ ನಟಿಸುವುದು ಇಷ್ಟವಿರಲಿಲ್ಲ. ಹಾಗಾಗಿ ನಾಯಕಿಯ ಬದಲಾವಣೆ ಮಾಡಬೇಕೆಂದು ಶಶಾಂಕ್ ಮೇಲೆ ಒತ್ತಡ ತಂದಿದ್ದರು. ಹಾಗಾಗಿಯೇ ಕಥೆ-ಪಾತ್ರದ ನೆಪ ಹೇಳಿ ಮೂವರು ನಾಯಕಿಯರಲ್ಲಿ (ಭಾವನಾ, ಪಾರುಲ್ ಯಾದವ್ ಉಳಿದ ಇಬ್ಬರು) ದೀಪಾ ಸ್ಥಾನಕ್ಕೆ ತೆಲುಗು ನಟಿಯೊಬ್ಬಳನ್ನು ಕರೆ ತರಲು ನಿರ್ದೇಶಕರು ಮುಂದಾದರು.

ಹಾಗಾದರೆ ದೀಪಾ ಜತೆ ಜತೆ ನಟಿಸಲು ಒಲ್ಲೆ ಎಂದು ಸುದೀಪ್ ಹೇಳಲು ಕಾರಣವೇನು? ಈ ಹಿಂದೆ ಆಕೆಯ ಜತೆ ಒಮ್ಮೆಯೂ ನಟಿಸಿಯೇ ಇಲ್ಲ. ಹೀಗಿದ್ದರೂ ಸುದೀಪ್ ಯಾಕೆ ಬೇಡವೆಂದರು? ಆಕೆಯ ನಟನೆಯ ಬಗ್ಗೆ ಏನಾದರೂ ಕಂಪ್ಲೇಂಟು ಇದೆಯೇ? ಸುದೀಪ್ ಬಗ್ಗೆ ದೀಪಾ ಕೆಟ್ಟದಾಗಿ ಮಾತನಾಡಿದ್ದಾರೆಯೇ? ಸದ್ಯಕ್ಕೆ ಇವ್ಯಾವುದಕ್ಕೂ ಉತ್ತರವೂ ಇಲ್ಲ, ಖಚಿತವೂ ಅಲ್ಲ. ಮುಂದೆ ಯಾವತ್ತಾದರೂ ಇದರ ಹೂರಣ ಖಂಡಿತಾ ಬಯಲಿಗೆ ಬರಬಹುದು.

ಐಂದ್ರಿತಾ ರೇ ಪ್ರಸಂಗ ನಡೆದಾಗಲೂ ಕಾರಣ ಗೊತ್ತಾಗಿರಲಿಲ್ಲ. ನಂತರ ಗಾಸಿಪ್ ಕಾಲಂಗಳಲ್ಲಿ ಬಂದಿದ್ದೇನೆಂದರೆ, ಐಂದ್ರಿತಾ ರೇ ಕುಡಿದ ಮತ್ತಿನಲ್ಲಿ ದುನಿಯಾ ವಿಜಯ್ ಬಗ್ಗೆ ಏನೋ ಕೆಟ್ಟದಾಗಿ ಮಾತನಾಡಿದ್ದರು. ಹಾಗಾಗಿ ಆಕೆಯನ್ನು ವಿಜಿ 'ಜರಾಸಂಧ'ದಿಂದ ಹೊರ ದಬ್ಬಿಸಿದರು. ನಂತರವೂ ಅಷ್ಟೇ, ವಿಜಿ ಜತೆ ಯಾವ ಚಿತ್ರದಲ್ಲೂ ಆಕೆ ನಾಯಕಿಯಾಗಿಲ್ಲ. ನಾಯಕಿಯಾಗಲು ವಿಜಿ ಬಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಬಿಡಿ, ಇಂತಹ ಸುದ್ದಿಗಳಿಗೆ ರೆಕ್ಕೆ ಪುಕ್ಕ ಹುಟ್ಟಿಕೊಳ್ಳೋದು ಕಷ್ಟವೇನಲ್ಲ. ಹಾಗಾಗಿ ಪೂರ್ತಿ ನಂಬುವುದು ಕಷ್ಟ. ಏನಂತೀರಾ?

Share this Story:

Follow Webdunia kannada