ದರ್ಶನ್ಗೆ ಬರ್ತ್ಡೇ ಸಂಭ್ರಮ; ಪೊಲೀಸರ ತಕರಾರು
ನಾಲ್ಕಾರು ಬಾರಿ ಪೊಲೀಸ್ ಠಾಣೆಗೆ ಅಲೆದಾಡಿದರೂ ಅನುಮತಿ ಸಿಕ್ಕಿರಲಿಲ್ಲ. ನೀವು ಮನೆ ಮುಂದೆ ಹುಟ್ಟುಹಬ್ಬ ಮಾಡಬೇಡಿ, ಎಲ್ಲಾದರೂ ಸಭಾಂಗಣದಲ್ಲೋ ಅಥವಾ ಮೈದಾನದಲ್ಲೋ ಮಾಡಿ ಎಂಬ ಹಾಸ್ಯಾಸ್ಪದ ಸಲಹೆ ಪೊಲೀಸರಿಂದ ಬಂದಿತ್ತು. ಅದೇನೇ ಆದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ 35ನೇ ಹುಟ್ಟುಹಬ್ಬವನ್ನು ಮನೆಯಲ್ಲೇ ಧಾಮ್ ಧೂಮ್ ಆಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದರು. ಅಷ್ಟು ಹೊತ್ತಿಗೆ ಪೊಲೀಸರೂ ಅನುಮತಿ ಕೊಟ್ಟಿದ್ದಾರೆ. ಸಾವಿರಾರು ಅಭಿಮಾನಿಗಳು ಮನೆಗೆ ಬಂದು ಹಾರೈಸಿದ್ದಾರೆ.ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯಲ್ಲಿ ಮಧ್ಯರಾತ್ರಿಯೇ ಹುಟ್ಟುಹಬ್ಬದ ಸಂಭ್ರಮ (ಫೆಬ್ರವರಿ 16) ಶುರುವಾಗಿತ್ತು. ಸಾವಿರಾರು ಅಭಿಮಾನಿಗಳು ಅವರ ಮನೆಯ ಸುತ್ತ ನೆರೆದಿದ್ದರು. ರಾತ್ರಿ 12.00 ಗಂಟೆ ಹೊತ್ತಿಗೆ ದರ್ಶನ್ ಕೇಕ್ ಕತ್ತರಿಸಿದರೆ, ಅಭಿಮಾನಿಗಳು ಹೊರಗಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.ರಾತ್ರಿ ಶುರುವಾದ ಅಭಿಮಾನಿಗಳ ಅಬ್ಬರ ಮಧ್ಯಾಹ್ನದವರೆಗೂ ಮುಂದುವರಿದಿದೆ. ಪಟಾಕಿ ಸಿಡಿಸುತ್ತಾ, ದರ್ಶನ್ ಪರ ಘೋಷಣೆಗಳನ್ನು ಕೂಗುತ್ತಾ, ಬ್ಯಾನರುಗಳನ್ನು ಹಿಡಿದು ಕುಣಿಯುತ್ತಾ ಅಭಿಮಾನಿಗಳು ತಮ್ಮ ಸಂತೋಷವನ್ನು ಹೊರ ಹಾಕುತ್ತಿದ್ದಾರೆ.ಅಭಿಮಾನಿಗಳಿಗೂ ದರ್ಶನ್ ನಿರಾಸೆ ಮಾಡಿಲ್ಲ. ತನಗೆ ಶುಭ ಹಾರೈಸಲೆಂದು ಬಂದ ಪ್ರತಿಯೊಬ್ಬ ಅಭಿಮಾನಿಯನ್ನೂ ನೇರವಾಗಿ ಭೇಟಿ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಹಸ್ತಲಾಘವ ಮಾಡಿ, ಪ್ರೀತಿಯಿಂದ ಕೆನ್ನೆ ತಟ್ಟುತ್ತಿದ್ದಾರೆ. ಕೆಲವು ಅಂಗವಿಕಲರೂ ದರ್ಶನ್ಗೆ ಶುಭ ಹಾರೈಸಲು ಬಂದಿದ್ದು ವಿಶೇಷವಾಗಿ ಗಮನ ಸೆಳೆಯಿತು.ಈ ಎಲ್ಲಾ ಅಭಿಮಾನಿಗಳಿಗೂ ದರ್ಶನ್ ಊಟದ ವ್ಯವಸ್ಥೆ ಮಾಡಿದ್ದಾರೆ. ನನಗಾಗಿ ಇಷ್ಟೊಂದು ಕಷ್ಟಪಡುವ ಅಭಿಮಾನಿಗಳಿಗೆ ಒಂದು ಹೊತ್ತಿನ ಊಟ ಕೊಡುವುದೇ ನನ್ನ ಖುಷಿ ಎಂದಿದ್ದಾರೆ ದರ್ಶನ್. ಅಲ್ಲದೆ ಈಗ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಕ್ಕೂ ಅಭಿಮಾನಿಗಳೇ ಕಾರಣ. ಐದಾರು ವರ್ಷಗಳ ಹಿಂದೆ ನನಗೆ ಹುಟ್ಟುಹಬ್ಬವೇ ಇರಲಿಲ್ಲ. ನನಗೇ ಗೊತ್ತಿರಲಿಲ್ಲ ಎಂದು ಹಳೆಯ ನೆನಪುಗಳನ್ನೂ ಇದೇ ಸಂದರ್ಭದಲ್ಲಿ ಹಂಚಿಕೊಂಡರು.
ಪತ್ನಿಯಿಂದ ಜಾಗ್ವಾರ್ ಕಾರ್ ಗಿಫ್ಟ್... 34
ನೇ ಹುಟ್ಟುಹಬ್ಬ ಆಚರಿಸಿದ ನಂತರ ದರ್ಶನ್ ವೈಯಕ್ತಿಕ ಜೀವನ ಮೂರಾಬಟ್ಟೆಯಾಗಿತ್ತು. ಪತ್ನಿ ವಿಜಯಲಕ್ಷ್ಮಿಯೇ ದರ್ಶನ್ ವಿರುದ್ಧ ದೂರು ನೀಡಿದ್ದರು. ಜೈಲಿಗೆ ಹೋಗಿ ಬಂದದ್ದೂ ಆಯ್ತು. ಈಗ ಅವರದ್ದು ಪುನರ್ಜನ್ಮ. ಹಳೆಯದೆಲ್ಲವನ್ನೂ ಮರೆತು ಹೊಸ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಇಬ್ಬರಿಗೂ ಸ್ವಲ್ಪ ಭಿನ್ನ ಅನುಭವ.ಅದು ಸರಿಯೆಂಬಂತೆ ದರ್ಶನ್ಗೆ ಪತ್ನಿ ವಿಜಯಲಕ್ಷ್ಮಿ ದುಬಾರಿ ಕಾರು ಉಡುಗೊರೆ ನೀಡಿದ್ದಾರೆ. ನೀಲಿ ಬಣ್ಣದ ಹೊಚ್ಚ ಹೊಸ ಜಾಗ್ವಾರ್ ಕಾರನ್ನು ಖರೀದಿಸಿರುವ ಪತ್ನಿ, ಅದನ್ನೀಗ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರೀತಿಯಿಂದ ಪತಿಗೆ ನೀಡಿದ್ದಾರೆ.ಯಾರ ಮನೆಯಲ್ಲಿಲ್ಲ ಸಮಸ್ಯೆ? ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ದರ್ಶನ್ ಎತ್ತಿರುವ ಪ್ರಶ್ನೆಯಿದು. ನನ್ನ ಸಂಸಾರದಲ್ಲೂ ಸಮಸ್ಯೆ ಇತ್ತು. ಅದೀಗ ಪರಿಹಾರವಾಗಿದೆ. ಯಾರ ಮನೆಯಲ್ಲಿ ಸಮಸ್ಯೆ ಇಲ್ಲ? ನೀವೂ ಮದುವೆಯಾದರೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ಪತ್ರಕರ್ತರನ್ನೇ ಬೆಚ್ಚಿ ಬೀಳಿಸಿದರು.ಈಗ ನಾನು ಪತ್ನಿ ವಿಜಯಲಕ್ಷ್ಮಿ ಜತೆ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ಹಳೆಯದೆಲ್ಲವನ್ನೂ ಮರೆತಿದ್ದೇನೆ. ಸಂಸಾರ ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತವೆ. ನನ್ನ ಜೀವನದಲ್ಲೂ ಅದೇ ನಡೆಯಿತು. ಆದರೆ ಮಾಧ್ಯಮಗಳಿಂದಾಗಿ ಅತಿರೇಕಕ್ಕೆ ಹೋಯಿತು. ಎಂದರು.