ಚಿಂಗಾರಿ ಟೇಕನ್... 2008 ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್ ಚಿತ್ರ 'ಟೇಕನ್' ರಿಮೇಕ್ ಚಿಂಗಾರಿ. ಇದನ್ನು ದರ್ಶನ್ ನೇರಾನೇರವಾಗಿ ಒಪ್ಪಿಕೊಂಡರು. ಜತೆಗೆ ಇದರ ಹಿಂದಿರುವ ಸ್ವಾರಸ್ಯಕರ ಸಂಗತಿಯನ್ನೂ ಬಿಚ್ಚಿಟ್ಟರು.
ಆರಂಭದಲ್ಲಿ ಹರ್ಷ ಕಥೆ ಹೇಳಿದಾಗ ಹಿಂದೆ ಮುಂದೆ ನೋಡದೆ ಓಕೆ ಅಂತ ಹೇಳಿದ್ದೆ. ಆದರೆ ನನ್ನ ಸಹೋದರ ದಿನಕರ್ ತೂಗುದೀಪ್ HBO ಚಾನೆಲ್ನಲ್ಲಿ ಬರುತ್ತಿದ್ದ 'ಟೇಕನ್' ಸಿನಿಮಾ ನೋಡಿ, ನನ್ನ ಗಮನಕ್ಕೆ ತಂದ. ನನಗೆ ಹರ್ಷ ಹೇಳಿದ ಕಥೆಯೇ ಇದು ಅನ್ನೋದು ಆಗ ನನಗೆ ಮನದಟ್ಟಾಯಿತು.
ಆ ಸಂದರ್ಭದಲ್ಲಿ ನಾನು 'ಬಾಸ್' ಚಿತ್ರೀಕರಣದಲ್ಲಿದ್ದೆ. ನಂತರ ಹರ್ಷರನ್ನು ಕರೆಸಿಕೊಂಡೆ. ಅವರ ಬೆನ್ನು ತಟ್ಟಿದೆ. ಆಗ ಅಚ್ಚರಿಗೊಳ್ಳುವ ಸರದಿ ನಿರ್ದೇಶಕ ಹರ್ಷದ್ದಾಗಿತ್ತು ಎಂದು ದರ್ಶನ್ ವಿವರಣೆ ನೀಡಿದರು.
ಸಾರಥಿ ಲಯನ್ ಕಿಂಗ್... 2011 ರಲ್ಲಿ ದರ್ಶನ್ ಸಿನಿ ಜೀವನವನ್ನೇ ಬದಲಿಸಿದ 'ಸಾರಥಿ' ಹಾಲಿವುಡ್ನ 'ಲಯನ್ ಕಿಂಗ್' ರಿಮೇಕ್. ಹೌದು, 1994ರಲ್ಲಿ ಬಿಡುಗಡೆಯಾಗಿದ್ದ 'ಲಯನ್ ಕಿಂಗ್' ಆನಿಮೇಟೆಡ್ ಸೂಪರ್ ಹಿಟ್ ಸಿನಿಮಾವನ್ನೇ ಕನ್ನಡೀಕರಣಗೊಳಿಸಲಾಗಿತ್ತು. ಅಲ್ಲಿದ್ದ ಪ್ರಾಣಿಗಳ ಕಥೆಯನ್ನು ಇಲ್ಲಿ ಬದಲಿಸಲಾಗಿತ್ತು. ಇದನ್ನೂ ದರ್ಶನ್ ಒಪ್ಪಿಕೊಂಡರು. ಮೂಲ ಚಿತ್ರ ಯಾವುದೇ ಇರಲಿ, ಅದನ್ನು ಕನ್ನಡಕ್ಕೆ ಒಪ್ಪುವಂತೆ ಬದಲಿಸಲಾಗಿದೆ ಎಂದರು.