Select Your Language

Notifications

webdunia
webdunia
webdunia
webdunia

ಲೂಸ್ ಮಾದ ಯಾಕೆ?; ರಮ್ಯಾಗೆ ಫ್ಯಾನುಗಳ ತರಾಟೆ

ಲೂಸ್ ಮಾದ ಯಾಕೆ?; ರಮ್ಯಾಗೆ ಫ್ಯಾನುಗಳ ತರಾಟೆ
SUJENDRA
ಲೂಸ್ ಮಾದ ಯೋಗೀಶ್ ನಾಯಕನಾಗಿರುವ 'ಸಿದ್ಲಿಂಗು' ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಲಕ್ಕಿ ಸ್ಟಾರ್ ರಮ್ಯಾ ಹೇಳಿದ್ದು ಯಾಕೆ ಅನ್ನೋದು ಬಹಿರಂಗವಾಗಿದೆ. ಚಿತ್ರಕತೆ ಓದಿದ್ದ ರಮ್ಯಾಗೆ ಅದರಲ್ಲಿದ್ದ ಆಕ್ಷೇಪಾರ್ಹ ಪದಗಳು ಹಿಡಿಸಿರಲಿಲ್ಲ. ಹಾಗಾಗಿ ನಕಾರ ಸೂಚಿಸಿದ್ದರಂತೆ. ಇದನ್ನು ಸ್ವತಃ ರಮ್ಯಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ಸಿದ್ಲಿಂಗು' ಚಿತ್ರದಲ್ಲಿ ನಟಿಸುತ್ತೇನೆ ಅಂತ ಆರಂಭದಲ್ಲಿ ರಮ್ಯಾ ಹೇಳಿದ್ದರು. ಆದರೆ ಲಕ್ಕಿ ಸ್ಟಾರ್ ಕೆಲವೇ ದಿನಗಳಲ್ಲಿ ಉಲ್ಟಾ ಹೊಡೆದಿದ್ದರು. ನಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಿ ತನ್ನ ಫ್ಯಾನ್ ಕಮ್ ಹೀರೋ ಲೂಸ್ ಮಾದ ಯೋಗೀಶ್‌ಗೆ ನಿರಾಸೆ ಮಾಡಿದ್ದರು. ರಮ್ಯಾ ಹಾಗೆ ಮಾಡಿದ್ದು ಯಾಕೆ ಅನ್ನೋದು ಇದುವರೆಗೆ ಗುಟ್ಟಾಗಿಯೇ ಇತ್ತು.

ದುಬಾರಿ ಬೈಕ್ ಕೊಂಡಾಗಲೂ ರಮ್ಯಾರನ್ನೇ ಮೊದಲು ಕೂರಿಸಿ ಸುತ್ತು ಹೊಡೆಸಿದ್ದ ಯೋಗಿ, ಅವರ ಜತೆ ನಟಿಸುವುದು ನನ್ನ ಕನಸು ಎಂದಿದ್ದರು. ಅದಕ್ಕಾಗಿಯೇ ಹಲವು ನಿರ್ದೇಶಕರಿಗೆ ದುಂಬಾಲು ಬಿದ್ದಿದ್ದರು. ಕೊನೆಗೆ ಸಿಕ್ಕಿದ್ದು ವಿಜಯ್ ಕುಮಾರ್. 16 ವರ್ಷಗಳ ಕಾಲ ಕಿರುತೆರೆಯಲ್ಲಿ ಮಿಂಚಿದವರು. ಅವರದ್ದೇ ಕತೆಯಲ್ಲಿ ಯೋಗಿ-ರಮ್ಯಾ ನಟಿಸುವುದು ಓಕೆ ಆಗಿತ್ತು. ರಮ್ಯಾ ಕೂಡ ಒಪ್ಪಿಕೊಂಡಿದ್ದರು.

ಆದರೆ ಚಿತ್ರಕತೆ ನೋಡಿದ್ದ ರಮ್ಯಾ, ನೋ ಎಂದಿದ್ದರಂತೆ. ಚಿತ್ರಕತೆಯಲ್ಲಿ ಬಳಸಲಾಗಿದ್ದ ಭಾಷೆ ತನಗೆ ಹಿತವೆನಿಸಲಿಲ್ಲ. ಹಾಗಾಗಿ ಇನ್ನೊಮ್ಮೆ ಯೋಚಿಸಿದ್ದೆ. ನಂತರ ನಿರ್ದೇಶಕರು ಕೆಲವು ಬದಲಾವಣೆಗಳನ್ನು ಮಾಡಿದ ನಂತರ ಒಪ್ಪಿಕೊಂಡೆ. ಈಗ ಸಾಕಷ್ಟು ಬದಲಾವಣೆಯಾಗಿದೆ. ಆದರೂ ಚಿತ್ರದ ಪಾತ್ರಗಳು ಕೀಳು ಭಾಷೆಯಲ್ಲೇ ಸಂಭಾಷಣೆ ನಡೆಸುತ್ತವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ರಮ್ಯಾ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಆದರೂ ಕೆಲವು ಅಭಿಮಾನಿಗಳು ರಮ್ಯಾ ಈ ಚಿತ್ರದಲ್ಲಿ ನಟಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಲೂಸ್ ಮಾದನಿಗೆ ಹೀರೋಯಿನ್ ಆಗಿರುವುದು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಈಗ ನಟಿಸಿದ್ದೇನೋ ಆಯ್ತು, ಮುಂದೆ ಯಾವತ್ತೂ ಯೋಗಿ ಜತೆ ನಟಿಸಬೇಡಿ ಅಂತ ಫೇಸ್‌ಬುಕ್-ಟ್ವಿಟ್ಟರುಗಳಲ್ಲಿ ಅವಾಜ್ ಹಾಕಿದ್ದಾರೆ.

ನೀವು ಸಿನಿಮಾವೊಂದಕ್ಕೆ ಸಹಿ ಹಾಕುವಾಗ ಪಾತ್ರಗಳು, ಕಥೆ, ನಿರ್ದೇಶಕ, ನಿರ್ಮಾಪಕರನ್ನು ಮಾತ್ರ ನೋಡುವುದಲ್ಲ, ಆ ಚಿತ್ರದ ನಾಯಕ ಯಾರು ಅನ್ನೋದನ್ನು ಗಮನಿಸಬೇಕು. ದುನಿಯಾ ವಿಜಯ್, ಲೂಸ್ ಮಾದರಂತಹ ಹೀರೋಗಳಿಗೆ ನಾಯಕಿಯಾಗುವುದನ್ನು ನಮಗೆ ಕಲ್ಪನೆ ಮಾಡಿಕೊಳ್ಳುವುದೂ ಸಾಧ್ಯವಾಗುತ್ತಿಲ್ಲ. ಅವರಿಗಿಂತ ನಾವೇ ಮೇಲು ಎಂದೂ ಕಾಮೆಂಟ್ ಮಾಡಿದ್ದಾರೆ.

ಯೋಗಿ ಒಬ್ಬ ನಟ ಅನ್ನೋದನ್ನು ನೀವು ನಂಬ್ತೀರಾ ಅಂತ ಇನ್ನೊಬ್ಬ ಅಭಿಮಾನಿಯಿಂದ ಪ್ರಶ್ನೆ ಬಂದಿದೆ. ಶ್ರೇಷ್ಠ ನಟರ ಜತೆ ಅಭಿನಯಿಸಿದ ನೀವು, ಯಾವ್ಯಾವುದೋ ಕಾರಣಗಳಿಗಾಗಿ ಹೀರೋ ಆದವರ ಜತೆ ಯಾಕೆ ಕಾಣಿಸಿಕೊಳ್ತೀರಿ ಅಂತ ರಮ್ಯಾರನ್ನು ಪ್ರೀತಿಯಿಂದ ತರಾಟೆಗೆ ತೆಗೆದುಕೊಂಡವರೂ ಇದ್ದಾರೆ.

ಸಿದ್ಲಿಂಗು ಚಿತ್ರದಲ್ಲಿನ ರಮ್ಯಾ ಸಂಭಾಷಣೆಯೊಂದರ ಸ್ಯಾಂಪಲ್: ನಾವು ಇಲ್ಲಿ ಯಾಕೆ ಬಂದಿದ್ದೇವೆ ಅಂತ ಗೊತ್ತಾ? ನಮ್ಮ ಹತ್ರಾನೂ ಕಡ್ಲೆ ಕಾಯಿ ಬೀಜ ಇದೆ ಅಂತ ತೋರಿಸೋದಿಕ್ಕೆ..!

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada