ನಾಯಕ ಅಥವಾ ನಾಯಕಿ ಕೊಂಚವೇ ಅಪಾಯಕಾರಿ ಸನ್ನಿವೇಶದಲ್ಲಿ ಪಾಲ್ಗೊಂಡರೂ ಅಥವಾ ಏನಾದರೂ ಸಣ್ಣಪುಟ್ಟ ಗೀರು ಗಾಯಗಳಾದರೂ ಬ್ರೇಕಿಂಗ್ ನ್ಯೂಸ್ ಮಾಡುವ ನಿರ್ಮಾಪಕ-ನಿರ್ದೇಶಕರಿಗೆ ಗಾಂಧಿನಗರದಲ್ಲಿ ಕೊರತೆಯಿಲ್ಲ. ಆದರೆ ಬಾಂಡ್ ಹುಡುಗಿ ಪ್ರಿಯಾಮಣಿ ಮಾತ್ರ ಸುದ್ದಿಯ ಗೋಜಿಗೆ ಹೋಗದೆ, ಬದುಕಿ ಬಂದಿರುವುದನ್ನಷ್ಟೇ ಖುಷಿಯಿಂದ ಹೇಳಿಕೊಂಡಿದ್ದಾರೆ.
ಆಗಿರುವುದಿಷ್ಟು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಾಯಕರಾಗಿರುವ, ದುನಿಯಾ ಸೂರಿ ನಿರ್ದೇಶನದ 'ಅಣ್ಣಾ ಬಾಂಡ್' ಚಿತ್ರದ ಶೂಟಿಂಗ್ಗಾಗಿ ಚಿತ್ರತಂಡ ಬೆಂಗಳೂರಿನಿಂದ ಮುತ್ತತ್ತಿ ಕಾಡಿನತ್ತ ಹೊರಟಿತ್ತು. ಈ ದಾರಿಯಲ್ಲಿ ಸಾಗುವಾಗ ಅಪಘಾತವೊಂದು ನಡೆದಿದೆ.
ಪ್ರಿಯಾಮಣಿ ಸೇರಿದಂತೆ ಡ್ರೈವಿಂಗ್ ಮಾಡುತ್ತಿದ್ದವರು ಮತ್ತು ಚಿತ್ರತಂಡ ಇದರಿಂದ ಸ್ವಲ್ಪದರಲ್ಲೇ ಎಸ್ಕೇಪ್ ಆಗಿತ್ತು. ಕಾರಿನ ಆಚೀಚೆ ಬದಿಗಳು ಮಾತ್ರ ಹಾನಿಗೊಂಡಿದ್ದವು. ಥಾಂಕ್ ಗಾಡ್, ಹೋದ ಜೀವ ಬಂದಂತಾಯಿತು ಎಂದಿದ್ದಾರೆ ಮಲಯಾಳಿ ಹುಡುಗಿ.
' ಜಾಕಿ' ಜಯಭೇರಿಯ ನಂತರ ಪುನೀತ್-ಸೂರಿ ಕಾಂಬಿನೇಷನ್ ಪುನರಾವರ್ತನೆಯಾಗುತ್ತಿರುವ ಚಿತ್ರವಿದು. ಇದೇ ಕಾರಣದಿಂದ ನಿರೀಕ್ಷೆಯೂ ಜೋರಾಗಿದೆ. ಪುನೀತ್ ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡಲಿರುವ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಕೂಡ ನಾಯಕಿ.
ಈ ನಡುವೆ ಪ್ರಿಯಾಮಣಿ ನಾಯಕಿಯಾಗಿರುವ ಸುದೀಪ್ 'ವಿಷ್ಣುವರ್ಧನ' ಚಿತ್ರ ಇದೇ ಗುರುವಾರ ಬಿಡುಗಡೆಯಾಗುತ್ತಿದೆ.