ಹಾಗೆಂದು ಲೂಸ್ ಮಾದ ಯೋಗೀಶ್ ಏನಾದರೂ ಹೇಳಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರಾ ಅಂತ ನೋಡುತ್ತಿದ್ದೀರಾ? ಖಂಡಿತಕ್ಕೂ ಇಲ್ಲ. ಹೇಳಿರುವುದು ಬೇರೆ ಯಾರೂ ಅಲ್ಲ, ಸ್ವತಃ ರಾಘವೇಂದ್ರ ರಾಜ್ಕುಮಾರ್. 'ಹುಡುಗರು' ಚಿತ್ರ ಗೆದ್ದಿದ್ದರೆ, ಅದಕ್ಕೆ ಕಾರಣ ಪುನೀತ್ ರಾಜ್ಕುಮಾರ್ ಅಲ್ಲ, ಯೋಗೀಶ್ ಅಂತ ಅವರು ಹೇಳಿ ಅಚ್ಚರಿ ಹುಟ್ಟಿಸಿದ್ದಾರೆ!
ಯೋಗಿ ಮತ್ತು ರಮ್ಯಾ ತಾರಾಗಣದ 'ಸಿದ್ಲಿಂಗು' ಆಡಿಯೋ ಬಿಡುಗಡೆ ಸಮಾರಂಭಕ್ಕೆಂದು ಆಗಮಿಸಿದ್ದ ರಾಘಣ್ಣ, ಯೋಗಿಯನ್ನು ಅಪಾದಮಸ್ತಕ ಹೊಗಳಿದರು. ಯೋಗಿ ಒಬ್ಬ ಅದ್ಭುತ ನಟ ಎಂದು ಬಣ್ಣಿಸಿದರು.
ಅವರ ಪ್ರಕಾರ, ಪುನೀತ್ ರಾಜ್ಕುಮಾರ್, ಯೋಗೀಶ್, ಶ್ರೀನಗರ ಕಿಟ್ಟಿ, ರಾಧಿಕಾ ಪಂಡಿತ್ ಅಭಿನಯದ 'ಹುಡುಗರು' ಚಿತ್ರ ಜಯಭೇರಿ ಬಾರಿಸಲು ಪ್ರಮುಖ ಕಾರಣ, ಪವರ್ ಸ್ಟಾರ್ ಅಲ್ಲ. ಲೂಸ್ ಮಾದಿನಿಂದಾಗಿಯೇ ಇಷ್ಟೊಂದು ಹಿಟ್ಟಾಗಿದೆ.
ಮೂಲ ಚಿತ್ರ ತಮಿಳಿನ 'ನಾಡೋಡಿಗಳ್' ನೋಡಿದಾಗಲೇ, ಆ ಪಾತ್ರಕ್ಕೆ ಲೂಸ್ ಮಾದ ಸೂಕ್ತ ಎಂಬ ಯೋಚನೆ ಬಂದಿತ್ತು. ದುನಿಯಾ ಚಿತ್ರದಲ್ಲಿ ಯೋಗೀಶ್ ಮಾಡಿದ್ದ ಪಾತ್ರವನ್ನು ಪುನೀತ್ ಕೂಡ ಮೆಚ್ಚಿಕೊಂಡಿದ್ದ. ಹಾಗಾಗಿ ನಮ್ಮದೇ ಬ್ಯಾನರಿನ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಲಾಯಿತು. ನಮ್ಮ ಊಹೆ ಸುಳ್ಳಾಗಲಿಲ್ಲ. ಇಡೀ ಚಿತ್ರದಲ್ಲಿ ಅವರ ಪಾತ್ರ ವಿಶಿಷ್ಟವಾಗಿ ಮೂಡಿ ಬಂದಿದೆ. ಯೋಗಿ ಓರ್ವ ಅದ್ಭುತ ನಟ ಎಂದರು.
ಪುನೀತ್ ಭೀಮೇಶ್ವರದಲ್ಲಿ ಶೂಟಿಂಗ್ನಲ್ಲಿದ್ದರೆ, ಶಿವರಾಜ್ ಕುಮಾರ್ ಪ್ಯಾರಿಸ್ನಲ್ಲಿದ್ದಾರೆ. ಆದರೂ ಯೋಗಿಯ ಮೇಲಿನ ಅಭಿಮಾನದಿಂದ ತಾನು ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿದ್ದೇನೆ. ನನ್ನ ಸಹೋದರ ಪುನೀತ್ಗೆ ಯೋಗೀಶ್ ಜತೆ ಇನ್ನೂ ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಬಯಕೆಯಿದೆ. ಆತನೀಗ ಯೋಗೀ ಫ್ಯಾನ್ ಆಗಿ ಬಿಟ್ಟಿದ್ದಾನೆ. ಮುಂದೇನಾಗುತ್ತೋ ನೋಡೋಣ ಎಂದು ರಾಘವೇಂದ್ರ ರಾಜ್ಕುಮಾರ್ ಆಶಾವಾದ ಬಿತ್ತಿದರು.
ಈ ಸಂದರ್ಭದಲ್ಲಿ ಸಿದ್ಲಿಂಗು ನಾಯಕಿ ರಮ್ಯಾರನ್ನೂ ರಾಘಣ್ಣ ಬಿಡಲಿಲ್ಲ. ತಮ್ಮದೇ ಬ್ಯಾನರಿನಿಂದ ಬಣ್ಣದ ಲೋಕಕ್ಕೆ ಬಂದ ಲಕ್ಕಿ ಸ್ಟಾರ್ ಬಹುತೇಕ ಚಿತ್ರಗಳು ಹಿಟ್ಟಾಗುತ್ತಿವೆ. ಅದೇ ರೀತಿ ಸಿದ್ಲಿಂಗು ಕೂಡ ಹಿಟ್ಟಾಗಲಿ ಎಂದು ಹಾರೈಸಿದರು.