ಮೋದಿ ಗೆಲುವು ದೇಶದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಹೊಂದಿರುವ ಪ್ರಿಯಾಂಕಾ ವಾರಣಾಸಿಯಲ್ಲಿ ಕಣಕ್ಕಿಳಿದು ಮೋದಿಗೆ ಸೋಲುಣಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಪ್ರಿಯಾಂಕಾರ ಪ್ರಸ್ತಾವದ ಕುರಿತು ಎಲ್ಲ ದಿಶೆಗಳಿಂದಲೂ ವಿಚಾರ ನಡೆಸಿದ ಕಾಂಗ್ರೆಸ್ ವರಿಷ್ಠರು ಕೊನೆಗೆ ಅವರಿಗೆ ಚುನಾವಣಾ ಕಣಕ್ಕಿಳಿಯುವುದು ಬೇಡ ಎಂಬ ಸಲಹೆಯನ್ನು ನೀಡಿದರು ಎಂದು ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ವರದಿಯಾಗಿದೆ.
ಆದರೆ ಈ ಸುದ್ದಿಯನ್ನು ನಿರಾಕರಿಸಿರುವ ಪ್ರಿಯಾಂಕಾ "ನನ್ನ ಪರಿವಾರ ನಾನು ಸ್ಪರ್ಧೆಗಿಳಿಯುವುದನ್ನು ತಡೆದಿಲ್ಲ. ನನ್ನ ಸಹೋದರ ಕೂಡ ಅನೇಕ ಬಾರಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದರು. ನಾನು ಚುನಾವಣೆಯನ್ನು ಎದುರಿಸಲು ಬಯಸಿದ್ದರೆ ನನ್ನ ಅಮ್ಮ, ಅಣ್ಣ ಮತ್ತು ಪತಿ ನಿರಾಕರಿಸುತ್ತಿರಲಿಲ್ಲ. ಸಂಪೂರ್ಣ ಪರಿವಾರ ನನ್ನನ್ನು ಬೆಂಬಲಿಸುತ್ತಿತ್ತು. ನನ್ನ ಗಮನ ಕೇವಲ ಅಮೇಠಿ ಮತ್ತು ರಾಯ್ಬರೇಲಿಯಲ್ಲಿದೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕೂಡ ಈ ಸುದ್ದಿಯನ್ನು ಖಂಡಿಸಿದ್ದು, ಪ್ರಿಯಾಂಕಾರವರನ್ನು ಕಣಕ್ಕಿಳಿಯದಂತೆ ಪಕ್ಷ ತಡೆದಿಲ್ಲ. ಚುನಾವಣೆಯನ್ನು ಸ್ಪರ್ಧಿಸುವ ನಿರ್ಣಯ ಅವರಿಗೆ ಬಿಟ್ಟಿದ್ದು ಎಂದು ಹೇಳಿದೆ.
ಸದ್ಯ ಪ್ರಿಯಾಂಕಾ ತನ್ನ ತಾಯಿ ಮತ್ತು ಸಹೋದರನಿಗಾಗಿ ಮತಯಾಚಿಸುವುದರಲ್ಲಿ ನಿರತರಾಗಿದ್ದಾರೆ.