ಆಪ್ ನಾಯಕ ತೆರೆದ ವಾಹನದಲ್ಲಿ ಕುಳಿತು ಪ್ರಚಾರ ನಡೆಸುತ್ತಿದ್ದರು. ಅವರು ತಮ್ಮ ಬೆಂಬಲಿಗರೊಬ್ಬರ ಜತೆ ಕೈ ಮಿಲಾಯಿಸುತ್ತಿದ್ದ ವೇಳೆ ಅಚಾನಕ್ ಆಗಿ ದಾಳಿ ನಡೆಸಿದ ವ್ಯಕ್ತಿಯೊಬ್ಬ ಅವರ ಬೆನ್ನಿಗೆ ಗುದ್ದಿ, ಕಪಾಳ ಮೋಕ್ಷ ಮಾಡಲು ಯತ್ನಿಸಿದ್ದಾನೆ. ಕೂಡಲೇ ಆತನನ್ನು ಹಿಡಿದುಕೊಂಡ ಆಪ್ ಕಾರ್ಯಕರ್ತರು ಚೆನ್ನಾಗಿ ಥಳಿಸಿ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್ "ಘಟನೆಯ ಹಿಂದೆ ಬಿಜೆಪಿಯ ಕೈವಾಡವಿದೆ" ಎಂದು ಆರೋಪಿಸಿದ್ದಾರೆ.
" ಕೆಲವರು ಪ್ರಧಾನಮಂತ್ರಿ ಆಗುವುದಕ್ಕಾಗಿ ಏನನ್ನು ಬೇಕಾದರೂ ಮಾಡಲು ತಯಾರಾಗುತ್ತಾರೆ. ನಮ್ಮ ಧರ್ಮ ನಮಗೆ ಅಹಿಂಸೆಯ ಬಗ್ಗೆ ಹೇಳುತ್ತದೆ. ನಮ್ಮನ್ನು ಕೊಂದರೂ ಸಹ ನಾವು ಯಾರ ಮೇಲೆ ಕೈ ಎತ್ತುವುದಿಲ್ಲ" ಎಂದು ಅವರು ಹೇಳಿದ್ದಾರೆ.
" ಯಾವುದೇ ತರಹದ ಹಿಂಸೆಯಲ್ಲಿ ಸಾಮೀಲಾಗಬೇಡಿ, ಶಾಂತಿಯನ್ನು ಕಾಪಾಡಿ" ಎಂದು ಅವರು ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿದರು.
ಇದಕ್ಕೂ ಮೊದಲು ಕೂಡ ಕೇಜ್ರಿವಾಲ್ ಮೇಲೆ ಅನೇಕ ಬಾರಿ ದಾಳಿ ನಡೆದಿತ್ತು. ಮಾರ್ಚ್ 28 ರಂದು ಹರಿಯಾಣಾದಲ್ಲಿ ಅವರ ಮೇಲೆ ದಾಳಿ ಮಾಡಿದ್ದ ವ್ಯಕ್ತಿಯೊಬ್ಬ ತಾನು ಅಣ್ಣಾ ಹಜಾರೆಯ ಸಮರ್ಥಕನೆಂದು ಹೇಳಿಕೊಂಡಿದ್ದ.