Select Your Language

Notifications

webdunia
webdunia
webdunia
webdunia

ದೇಶಾದ್ಯಂತ ಮೋದಿ ಅಲೆ ಇಲ್ಲವೇ ಇಲ್ಲ ಕೇವಲ ಬಿಜೆಪಿಯ ಭ್ರಮೆ: ಎಸ್‌.ಎಂ.ಕೃಷ್ಣ

ದೇಶಾದ್ಯಂತ ಮೋದಿ ಅಲೆ ಇಲ್ಲವೇ ಇಲ್ಲ ಕೇವಲ ಬಿಜೆಪಿಯ ಭ್ರಮೆ: ಎಸ್‌.ಎಂ.ಕೃಷ್ಣ
ಬೆಂಗಳೂರು , ಶುಕ್ರವಾರ, 21 ಮಾರ್ಚ್ 2014 (16:42 IST)
PTI
ದೇಶಾದ್ಯಂತ ಯಾವ ಭಾಗದಲ್ಲೂ ಮೋದಿ ಅಲೆ ಕಾಣುತ್ತಿಲ್ಲ. ಇದೊಂದು ಕೇವಲ ಉಹೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಲೇವಡಿ ಮಾಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಮೈಸೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಿ.ಜವರೇಗೌಡ ಅವರನ್ನು ಭೇಟಿಯಾಗಲು ಬಂದ ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ದೇಶದ ಹಲವಾರು ನಗರಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಯಾವುದೇ ನಗರದಲ್ಲೂ ಮೋದಿ ಅಲೆ ಕಾಣುತ್ತಿಲ್ಲ. ಜನತೆಯಲ್ಲಿ ಭ್ರಮೆ ಮೂಡಿಸುವುದೇ ಬಿಜೆಪಿ ಮುಖಂಡರ ದೈನಂದಿನ ಕಾರ್ಯವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಸತ್ಯಕ್ಕೆ ದೂರವಾಗಿವೆ ಎಂದರು.

ಈ ಹಿಂದೆ ನಡೆಸಿದ ಅನೇಕ ಸಮೀಕ್ಷೆಗಳು ಹುಸಿಯಾಗಿವೆ. ಈ ಬಾರಿಯೂ ಹುಸಿಯಾಗಲಿವೆ. ಚುನಾವಣಾ ಫಲಿತಾಂಶ ಬಂದ ನಂತರ ಸಮೀಕ್ಷೆಗಳ ಸತ್ಯಾಸತ್ಯತೆ ಹೊರಬರಲಿದೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗೆಣಿಸಲಾಗುತ್ತಿದೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಹೈಕಮಾಂಡ್ ಹಿರಿಯರು ಮತ್ತು ಕಿರಿಯ ಮುಖಂಡರ ನಡುವೆ ಸಮತೋಲನ ಕಾಪಾಡಿಕೊಂಡು ಬರುವ ಪ್ರಯತ್ನ ನಡೆಸಿದೆ. ಕೆಲವೊಂದು ತಪ್ಪುಗಳಾಗಿರಬಹುದು. ಆದರೆ ಉದ್ದೇಶಪೂರ್ವಕವಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಹಿರಿಯ ಮತ್ತು ಕಿರಿಯ ಮುಖಂಡರಲ್ಲಿ ಸಮಾನತೆ ಮೂಡಿಸಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದ್ದಾರೆ.

Share this Story:

Follow Webdunia kannada