ಭಾರತೀಯ ಜನತಾ ಪಕ್ಷ ತನ್ನ ತವರಾದ ಬರ್ಮಾರನಿಂದ ಟಿಕೆಟ್ ನೀಡಲು ನಿರಾಕರಿಸಿದ್ದಕ್ಕಾಗಿ ಕೋಪಗೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಪಕ್ಷದ ಹಿರಿಯ ನಾಯಕ ಜಸ್ವಂತ್ ಸಿಂಗ್ ಮನವೊಲಿಸಲು ಹೆಣಗಾಡುತ್ತಿರುವ ಬಿಜೆಪಿ ಅವರಿಗೆ ತಮ್ಮ ನಿರ್ಧಾರ ಬದಲಿಸಿ, ಬಿಜೆಪಿಯ ಜತೆ ಕೈಜೋಡಿಸಲು ಈಗಲೂ ಸಮಯವಿದೆ ಎಂದು ಹೇಳಿದೆ.
" ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹೊರಟಿರುವುದು ದೌರ್ಭಾಗ್ಯಪೂರ್ಣವಾದ ಸಂಗತಿಯಾಗಿದೆ. ಈಗಲೂ ಕಾಲ ಮಿಂಚಿ ಹೋಗಿಲ್ಲ. ಅವರು ಕ್ರೋಧವನ್ನು ತ್ಯಜಿಸಿ, ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡಲಿ" ಎಂದು ಹೇಳಿರುವ ಹಿರಿಯ ನಾಯಕ ವೆಂಕಯ್ಯ ನಾಯ್ಡು ತಾನು ಕೇಂದ್ರಿಯ ಚುನಾವಣಾ ಸಮಿತಿಯಲ್ಲಿ ಸಿಂಗ್ರಿಗೆ ಟಿಕೆಟ್ ನೀಡುವ ವಿಚಾರವನ್ನು ಎತ್ತಿ ಹಿಡಿದು ಅವರಿಗೆ ಅದೇ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ.
" ಆದರೆ ಆದಿನ ರಾಜ್ಯ ಘಟಕ ಬರ್ಮಾರ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಲು ತಯಾರಿರಲಿಲ್ಲ. ಆದ್ದರಿಂದ ಚುನಾವಣಾ ಸಮಿತಿ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯ ಘಟಕದ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ನಿರ್ಣಯಿಸಿತ್ತು. ಪಕ್ಷ ಯಾವುದಾದರೂ ನಿಲುವನ್ನು ಪ್ರಕಟಿಸಿದರೆ ನಾಯಕರು ಅದನ್ನು ಪಾಲಿಸಬೇಕು" ಎಂದು ಹೇಳಿದರು.
" ಸಿಂಗ್ ಬಗ್ಗೆ ಸಹಾನುಭೂತಿ ವ್ಯಕ್ತ ಪಡಿಸಿರುವ ನಾಯ್ಡು ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಸಚಿವಾಲಯದಲ್ಲಿ ಅನೇಕ ಬಾರಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ" ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.