ಕೇಂದ್ರ ಹಣಕಾಸು ಸಚಿವ, ಕಾಂಗ್ರೆಸ್ ನ ಪ್ರಮುಖ ನೇತಾರ ಪಿ. ಚಿದಂಬರಮ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಅವರು ಸ್ಪರ್ಧಿಸುತ್ತಿದ್ದ ಶಿವಗಂಗಾ ಲೋಕಸಭಾ ಕ್ಷೇತ್ರದಿಂದ ಅವರ ಮಗ ಕಾರ್ತಿ ಕಣಕ್ಕಿಳಿಯಲಿದ್ದಾರೆ.
ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ ನಂತರ ಮಾತನಾಡಿದ ಕಾರ್ತಿ "ನನ್ನ ತಂದೆ ಒಂಬತ್ತು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಸಲ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಆದರೆ ಅವರು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತಿಲ್ಲ" ಎಂದು ಹೇಳಿದರು. ಕಾಂಗ್ರೆಸ್ ಗುರುವಾರ 50 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಸಚಿವ ಆಜಾದ್, ಮಣಿ ಶಂಕರ್ ಅಯ್ಯರ್, ದಿಗ್ವಿಜಯ್ ಸಿಂಗ್ ಸಹೋದರ ಲಕ್ಷ್ಮಣ್ ಮತ್ತು ಕಾರ್ತಿ ಹೆಸರಿದೆ.
ದಕ್ಷಿಣ ದೆಹಲಿಯಿಂದ ರಮೇಶಕುಮಾರ ಮತ್ತು ಪಶ್ಚಿಮ ದೆಹಲಿಯಿಂದ ಮಹಾಬಲ ಮಿಶ್ರಾಗೆ ಟಿಕೆಟ್ ಸಿಕ್ಕಿದೆ. ಅವರು ಅದೇ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ.ದೆಹಲಿಯ ಎಲ್ಲ 9 ಕ್ಷೇತ್ರಗಳಿಗೂ ಪಾರ್ಟಿ ಅಭ್ಯರ್ಥಿಯನ್ನು ಘೋಷಿಸಿದೆ.
ಕಾಂಗ್ರಸ್ ಮಹಾಸಚಿವ ದಿಗ್ವಿಜಯ್ ಸಿಂಗ್ ಸಹೋದರ ಲಕ್ಷಣ ಸಿಂಗ್ ಮಧ್ಯಪ್ರದೇಶದ ವಿದಿಶಾದಿಂದ ಆಖಾಡಕ್ಕಿಳಿಯಲಿದ್ದಾರೆ. ಅವರು ಬಿಜೆಪಿ ವರಿಷ್ಠೆ ಸುಶ್ಮಾ ಸ್ವರಾಜ್ ಅವರ ಪ್ರತಿದ್ವಂದ್ವಿಯಾಗಲಿದ್ದಾರೆ.
ಮಾಜಿ ಕೇಂದ್ರಸಚಿವ ಮಣಿಶಂಕರ್ ಅಯ್ಯರ್ ತಮ್ಮ ಪಾರಂಪರಿಕ ಕ್ಷೇತ್ರ ಮೈಯಲಾದುತುರಿಯಿಂದ ಸ್ಪರ್ಧಿಸಲಿದ್ದಾರೆ.
ಇಲ್ಲಿಯವರೆಗೆ ಕಾಂಗ್ರೆಸ್ 364 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.