1996ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್: ಕಾಂಬ್ಳಿ ಬಾಂಬ್
ನವದೆಹಲಿ , ಶುಕ್ರವಾರ, 18 ನವೆಂಬರ್ 2011 (12:13 IST)
1996
ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನಂತೂ ಯಾರು ಮರೆತಿರಲಿಕ್ಕಿಲ್ಲ. ಅಂದಿನ ದಿನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗಂತೂ ಕರಾಳ ದಿನವಾಗಿತ್ತು. ಶ್ರೀಲಂಕಾ ವಿರುದ್ಧದ ಕೊಲ್ಕತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯವನ್ನು ಸೋತಿದ್ದ ಭಾರತ ವಿಶ್ವಕಪ್ ಕೂಟದಿಂದ ನಿರ್ಗಮಿಸಿತ್ತು. ಪಂದ್ಯವನ್ನು ಭಾರತ ಕಳೆದುಕೊಳ್ಳುವುದು ಬಹುತೇಕ ಖಚಿತವೆನಿಸಿದಾಗ ಸ್ಟೇಡಿಯಂನಲ್ಲಿ ದಾಂಧಲೆ ಎಬ್ಬಿಸಿದ್ದ ಅಭಿಮಾನಿಗಳು ಬೆಂಕಿ ಹಚ್ಚಿಕೊಂಡಿದ್ದರ ಪರಿಣಾಮ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.ಇದರಿಂದಾಗಿ ಪಂದ್ಯ ಮುಂದುವರಿಸಲಾಗದ ಸ್ಥಿತಿ ಕಂಡುಬಂದಿದ್ದರ ಹಿನ್ನಲೆಯಲ್ಲಿ ಎದರಾಳಿ ಶ್ರೀಲಂಕಾ ತಂಡವನ್ನು ವಿಜೇತ ತಂಡವೆಂದು ಘೋಷಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ರೀಸಿನಲ್ಲಿದ್ದ ವಿನೋದ್ ಕಾಂಬ್ಳಿ ಕಣ್ಣಿರಿಡುತ್ತಾ ಪೆವಿಲಿಯನ್ಗೆ ಮರಳುತ್ತಿದ್ದ ದೃಶ್ಯ ಇನ್ನೂ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಆನಂತರ ಮಹತ್ವದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದ ಅರ್ಜುನ್ ರಣತುಂಗಾ ನೇತೃತ್ವದ ಶ್ರೀಲಂಕಾ ಪಡೆ ವಿಶ್ವಕಪನ್ನು ಚೊಚ್ಚಲ ಬಾರಿಗೆ ಎತ್ತಿಹಿಡಿದಿತ್ತು.
1996
ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡಿದಿದೆ ಎಂದು ಕಾಂಬ್ಳಿ ಶಂಕೆ ವ್ಯಕ್ತಪಡಿಸುವುದರೊಂದಿಗೆ ಬೂದಿ ಮುಚ್ಚಿದ ಕೆಂಡದಂತಿದ್ದ ಈ ಎಲ್ಲ ವಿಚಾರಗಳು ಮತ್ತೆ ಸಿಡಿದೆದ್ದಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಟಾಸ್ ಗೆದ್ದಲ್ಲಿ ಭಾರತ ಬ್ಯಾಟಿಂಗ್ ಆರಿಸಿಕೊಳ್ಳಲಿದೆ ಎಂಬುದನ್ನು ಸರ್ವಾನುಮತದಿಂದಲೇ ನಿರ್ಧರಿಸಲಾಗಿತ್ತು. ಹಾಗಿದ್ದರೂ ಅಂದಿನ ನಾಯಕ ಮೊಹಮ್ಮದ್ ಅಜರುದ್ದೀನ್ ಟಾಸ್ ಗೆದ್ದಿದ್ದರ ಹೊರತಾಗಿಯೂ ಫೀಲ್ಡಿಂಗ್ ಆರಿಸಿದ್ದರು. ಅಜರುದ್ದೀನ್ ಅವರ ಈ ನಿರ್ಧಾರವು ನನ್ನ ಶಂಕೆಗೆ ಕಾರಣವಾಗಿದೆ ಎಂದು ಕಾಂಬ್ಳಿ ಆಪಾದಿಸಿದ್ದಾರೆ.