ಹಿಂದೂಗಳ ವಿಚಾರಕ್ಕೆ ಬಂದರೆ ಹೆತ್ತವರ ಅಂತ್ಯ ಕ್ರಿಯೆಯ ವಿಧಿ ವಿಧಾನಗಳಿಗೆ ಗಂಡು ಮಕ್ಕಳು ಅಗತ್ಯ. ಬದುಕಿದ್ದಾಗಕ್ಕಿಂತ, ಸತ್ತನಂತರದ ಲೆಕ್ಕಾಚಾರ ಗಂಡುಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ನಾನು ಅನುಭವಿಸಿದ ಈ ಜೀವನ ಯಾತನೆ ನನ್ನ ಮಗಳಿಗೆ ಬೇಡವೆಂಬ ನೆಲೆಯಲ್ಲೂ ಹೆಣ್ಣು ಮಗು ಬೇಡ ಎನ್ನುವ ಅಮ್ಮಂದಿರೂ ಇದ್ದಾರೆ.
ಬರಿಯ ಹಿಂದೂಗಳು ಮಾತ್ರವಲ್ಲ, ಸಿಕ್, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಲ್ಲೂ ಹೆಣ್ಣು ಭ್ರೂಣ ಹತ್ಯೆ ಸಾಂಕ್ರಾಮಿಕವಾಗಿದೆ. ಅಯ್ಯೋ, ಹೆಣ್ಣು ಮಕ್ಕಳನ್ನು ಸಾಕಿ, ಸಲಹಿ ಬೆಳಸಿ ಮದುವೆ ಮಾಡಿ ಕೊಡುವುದೆಂದರೆ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡಂತೆ, ಗಂಡು ಮಕ್ಕಳಾದರೆ ಹೆಗಾದರೂ ಬದುಕಿಕೊಳ್ಳುತ್ತಾವೆ ಎಂಬ ಧೋರಣೆಗಳು. ಅತ್ಯಾಚಾರದಂತಹ ಅನಾಚಾರಗಳ ಭಯಾನಕ ಭೀತಿಗಳೂ ಇದಕ್ಕೆ ಕಾರಣ. ದಿನೇ ದಿನೇ ಹೆಚ್ಚುತ್ತಿರುವ ಮದುವೆವರಗಳ ರೇಟೂ ಸಹ ಹೆಣ್ಣು ಹೆತ್ತವರನ್ನು ಹೈರಾಣಾಗಿಸುತ್ತದೆ. ಇದೆಲ್ಲ ರಗಳೆಯೇ ಬೇಡವೆಂದು ಸುಶಿಕ್ಷಿತ ಹೆತ್ತವರೂ ಗಂಡುಮಕ್ಕಳನ್ನು ಬಯಸುತ್ತಿರುವುದು ವಿಪರ್ಯಾಸ.
ಅಂತೆಯೇ ಬಡ ಮತ್ತು ಅನಕ್ಷರಸ್ಥ ಕುಟುಂಬಗಳಲ್ಲೂ ವರದಕ್ಷಿಣೆ ಮತ್ತು ವರನ ಮನೆಯವರ ಮುಗಿಯದ ಬೇಡಿಕೆ, ನಿರಂತರ ಹಿಂಸೆಗಳಿಗೆ ಬೆದರಿ ಹಾಗೂ ಇತರ ಕಂದಾಚಾರದ ಮೂಢನಂಬಿಕೆಗಳು, ಪೂರ್ವಗ್ರಹಗಳಿಂದಾಗಿ ಹೆಣ್ಣು ಮಕ್ಕಳು ಅನಪೇಕ್ಷಿತರಾಗುತ್ತಿದ್ದಾರೆ.
ವಿಶ್ವಸಂಸ್ಥೆ ಮತ್ತು ಭಾರತೀಯ ಅಧ್ಯಯನಗಳು ಕಂಡುಕೊಂಡಂತೆ ಶ್ರೀಮಂತ ಮತ್ತು ಸುಶಿಕ್ಷಿತ ಕುಟುಂಬಗಳಲ್ಲಿ ಇಂದು ಹೆಣ್ಣು ಭ್ರೂಣ ಹತ್ಯೆ ಸಹಜ ಪ್ರಕ್ರಿಯಾಗುತ್ತಿದೆ. ಒಂದು ಅಧ್ಯಯನ ನಕಾಶೆಯ ಪ್ರಕಾರ ಈ ಕೃತ್ಯ ಎಸಗುವವರಲ್ಲಿ ವಿಶ್ವವಿದ್ಯಾನಿಲಯಗಳ ಪದವಿ ಪಡೆದವರ ಸಂಖ್ಯೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ಉತ್ತಮ ವಿದ್ಯಾಭ್ಯಾಸ ಪಡೆದವರದ್ದಾದರೆ ಕೆಳಮಟ್ಟದ ಶಿಕ್ಷಣ ಪಡೆದವರಲ್ಲಿ ತುಲನಾತ್ಮಕವಾಗಿ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುವವರ ಸಂಖ್ಯೆ ಕಡಿಮೆ.
ಹೆಣ್ಣು ಭ್ರೂಣ ಹತ್ಯೆ ಮತ್ತು ಸ್ತ್ರಿ ಪುರುಷರ ನಡುವಿನ ಅಂತರದ ಪರಿಣಾಮ ಈಗಾಗಲೇ ವ್ಯಕ್ತವಾಗುತ್ತಿದೆ. ಮದುವೆ ಹೆಣ್ಣುಗಳ ಅಲಭ್ಯತೆ ತಲೆದೋರಿದೆ. ಬಡರಾಷ್ಟ್ರಗಳಾದ ಬಾಂಗ್ಲ, ನೇಪಾಳ ಅಥವಾ ನಾಗರೀಕತೆಯಡೆಗೆ ಮುಖಮಾಡದ ಭಾರತೀಯ ಆದಿವಾಸಿ ಪಂಗಡಗಳ ಹೆಣ್ಣುಮಕ್ಕಳ ಮಾರಾಟ ನಡೆಯುತ್ತಿದೆ. ಈ ಮಾರಾಟ ವಸ್ತುಗಳ ಬೆಲೆಯಾದರೂ ಎಷ್ಟೆಂದು ಕೇಳಿದಿರಾ, ಬರಿಯ 200 ಡಾಲರ್ಗಳು. ಹರ್ಯಾಣದಲ್ಲಿ ಒಂದೊಳ್ಳೆಯ ಗೂಳಿಯ ಬೆಲೆ 1000 ಡಾಲರ್ಗಳು! ಇದೀಗಾಗಲೇ 55 ಮಿಲಿಯ ಸ್ತ್ರಿಯರು ಕಾಣೆಯಾಗಿದ್ದಾರೆ. ಹಾಗಾಗಿ ಈ ಅಪಾಯಕರ ಪರಿಸ್ಥಿತಿಯಿಂದ ಪಾರಾಗುವುದು ಕಠಿಣ. ಸಮಾಜದಲ್ಲಿ ಇಂದಿಗೂ ಮಹಿಳೆ ದ್ವಿತೀಯ ದರ್ಜೆಯವಳಾಗೇ ಇದ್ದರೂ, ಮಹಿಳೆ ವಿನಾಶದತ್ತ ಸರಿಯುತ್ತಿದ್ದಾಳೆ.
ಸರಕಾರಕ್ಕೆ ಈ ಗಂಭೀರ ಸ್ಥಿತಿಯ ಮನವರಿಕೆಯಾಗಿದೆ. ಮಹಿಳಾಶಕ್ತಿಯ ಕುರಿತು ಆರೋಗ್ಯ ಸಚಿವಾಲಯದ ಜಾಹಿರಾತುಗಳು ಮಾಧ್ಯಮಗಳಲ್ಲಿ ಆಗೀಗ ಕಾಣಬರುತ್ತಿವೆ. ಈ ಸಲುವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೆಣ್ಣುಭ್ರೂಣ ಹತ್ಯೆ ವಿರೋಧಿಸಿ ಜಾಥಾ ಹಮ್ಮಿಕೊಂಡಿದ್ದೂ ಇದೆ. ಸರಕಾರ ಎಚ್ಚರಿಕೆ ನೀಡುತ್ತಲೂ ಇದೆ.
ಹೆಣ್ಣು ಭ್ರೂಣಹತ್ಯೆಗೆ ತಡೆ ಬಿದ್ದರೆ ಮಾತ್ರ ಸಾಕಾಗುವುದಿಲ್ಲ. ಎಲ್ಲಾ ವಿಧದ ಲಿಂಗತಾರತಮ್ಯ ಕೊನೆಗೊಳ್ಳಬೇಕು. ಎಷ್ಟೆಂದರೂ ಹೆಣ್ಣೆಂಬ ತುಚ್ಛ ಮನೋಭಾವ ಎಲ್ಲಿಯವರೆಗೆ ತೊಲಗುವುದಿಲ್ಲವೊ, ಅಲ್ಲಿಯ ತನಕ ಆಕೆಯ ಸ್ಥಿತಿ ಗಂಡಾಂತರದ್ದೇ. ದೈಹಿಕ ಭಿನ್ನತೆಗಳನ್ನು ಬಿಟ್ಟರೆ ಎಲ್ಲರೂ ಮಾನವರೇ ಎಂಬ ಮನೋಭಾವ ಪುರುಷ, ಮಹಿಳೆಯರೆನ್ನದೆ ಎಲ್ಲರಲ್ಲಿ ಎಂದಿಗೆ ಹುಟ್ಟಿಕೊಳ್ಳುತ್ತದೊ ಅಂದು ಈ ಸಮಸ್ಯೆಯ ಪರಿಹಾರ ಆರಂಭವಾದಂತೆ.
ಹಿಂದೂ, ಕ್ರಿಶ್ಚಿಯನ್, ಮುಸ್ಲಿಮ್, ಸಿಕ್,ಪಾರ್ಸಿ ಅಥವಾ ಜೈನ್ ಯಾವ ಪಂಗಡದವಳೇ ಆಗಿರಲಿ, ಮಹಿಳೆಯರಿಗೆ ಎಲ್ಲೆಡೆ ದ್ವಿತೀಯ ದರ್ಜೆಯ ಸ್ಥಾನಮಾನ, ವರದಕ್ಷಿಣೆ ಬೇಡಿಕೆ ಶಿಕ್ಷಾರ್ಹ ಅಪರಾಧ ಎಂದೆಲ್ಲ ದೇಶದ ಕಾನೂನೂ ಏನೇ ಹೇಳಲಿ, ವಾರ್ಷಿಕ 25,000 ವರದಕ್ಷಿಣೆ ಸಾವುಗಳು ಸಂಭವಿಸುತ್ತಿವೆ. ಬಾಲ ವಿಧವೆಯರು ಅತ್ಯಂತ ಹೇಯಕರ ಬದುಕು ಸಾಗಿಸುತ್ತಿರುವ ದೃಷ್ಟಾಂತಗಳು ಇಂದಿಗೂ ಇವೆ ಮತ್ತು ಅವರು ಮರು ಮದುವೆಯ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.
ಕೆಳವರ್ಗದ ಹೆಣ್ಣು ಮಕ್ಕಳಿಗೆ ಈಗ ಶಿಕ್ಷಣದ ಅವಕಾಶ ಲಭಿಸುತ್ತಿದ್ದರೂ ಅವರ ಮೇಲೆ ಮನೆಗೆಲಸದ ಹೊರೆ ಇರುತ್ತದೆ. ಹಾಗಾಗಿ ವಿದ್ಯೆ ಅರ್ಧಕ್ಕೆ ನೈವೇದ್ಯವಾಗುವ ಉದಾಹರಣೆಗಳೇ ಜಾಸ್ತಿ. ಎಲ್ಲ ಧರ್ಮಗಳಲ್ಲೂ ಧರ್ಮಾತೀತ ಎಂಬಂತೆ ಮಗಹುಟ್ಟಿದರೆ ಸಂಭ್ರಮ, ಮಗಳು ಹುಟ್ಟಿದರೆ ದುಃಖ!
ಎಲ್ಲಿ ಮಗ ಮತ್ತು ಮಗಳಿಗೆ ಸಮಾನ ಆದ್ಯತೆ ಇಲ್ಲವೋ, ಎಲ್ಲಿಯ ತನಕ ಮಹಿಳೆಗೆ ಸುರಕ್ಷಿತ ಬದುಕು ಲಭಿಸುವುದಿಲ್ಲವೋ ಅಲ್ಲಿಯ ತನಕ ಆ ರಾಷ್ಟ್ರದಲ್ಲಿ ನೈತಿಕತೆ ನೆಲೆಗೊಳ್ಳುವುದಿಲ್ಲ. ಹುಟ್ಟಿನಿಂದ ಸಾವಿನ ತನಕ ಮಹಿಳೆಯರ ಹಕ್ಕು ಮತ್ತು ಘನತೆಯನ್ನು ಗೌರವಿಸುವಂತಹ ಕಾಲ ಬಂದಾಗ ಎಲ್ಲ ಸಮಸ್ಯೆಗಳು ತಂತಾನೇ ಕೊನೆಗೊಳ್ಳುತ್ತವೆ.