ಉತ್ತರ ಕಾಶ್ಮಿರದ ಉರಿ ಪಟ್ಟಣದ ಸೇನಾ ಕಚೇರಿಯ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಕ್ರಿಯೆ ನೀಡಿದ ಬಾಕ್ಸರ್ ವಿಜೇಂದರ್ ಸಿಂಗ್, ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದು, ಒಂದು ವೇಳೆ ಪಾಕಿಸ್ತಾನಿಯರು ಯುದ್ಧವನ್ನು ಆಯ್ಕೆ ಮಾಡಿಕೊಂಡಲ್ಲಿ ನಾವು ಯುದ್ಧಕ್ಕೆ ಸಿದ್ದ ಎಂದು ಘೋಷಿಸಿದ್ದಾರೆ.
ಉತ್ತರ ಕಾಶ್ಮಿರದ ಉರಿ ಪಟ್ಟಣದ ಬಳಿಯಿರುವ ಸೇನಾ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 17 ಯೋಧರು ಮತ್ತು ನಾಲ್ವರು ಉಗ್ರರು ಹತರಾಗಿದ್ದಾರೆ.
ಉರಿ ಪಟ್ಟಣದಲ್ಲಿರುವ ಸೇನಾ ಮುಖ್ಯ ಕಚೇರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ ಸೇನಾ ಕಚೇರಿಯೊಳಗೆ ಮೂವರು ಉಗ್ರರು ಇರಬಹುದು ಎಂದು ಶಂಕಿಸಲಾಗಿದ್ದು ಗುಂಡಿನ ಕಾಳಗ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕಳೆದ 2014ರ ಡಿಸೆಂಬರ್ 5 ರಂದು ಉರಿಪಟ್ಟಣದಲ್ಲಿರುವ ಸೇನಾ ಕಚೇರಿಯ ಮೇಲೆ ದಾಳಿ ನಡೆಸಿ ಅಟ್ಟಹಾಸವನ್ನು ಮೆರೆದಿದ್ದ ಉಗ್ರರನ್ನು ಸೇನಾಪಡೆಗಳು ಹತ್ಯೆಗೈದಿದ್ದವು.
ಪಾಕಿಸ್ತಾನದ ಸಲಾಮಾಬಾದ್ ನಾಲ್ಲಾ ಪ್ರದೇಶದ ಮೂಲಕ ಉರಿ ಪಟ್ಟಣವನ್ನು ಉಗ್ರರು ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದ್ದು, ಸಂಪೂರ್ಣ ಪ್ರದೇಶವನ್ನು ಸೇನಾಪಡೆಗಳು ಸುತ್ತುವರಿದಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ