ದೇಶದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತೆಲಂಗಾಣ ರಾಜ್ಯದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ರಾಜ್ಯದ ಹಿತಾಸಕ್ತಿಗಳ ಕುರಿತಂತೆ ದೇಶ ಮತ್ತು ವಿದೇಶಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಕೈಗಾರಿಕೆ ಮೂಲಸೌಕರ್ಯ ಕಂಪೆನಿಯ ವ್ಯವಸ್ಥಾಪಕ ನಿರ್ದೆಶಕ ಜಯೇಶ್ ರಾಜನ್ ತಿಳಿಸಿದ್ದಾರೆ.
ಕೈಗಾರಿಕೋದ್ಯಮಿಗಳ ಸಂವಾದ ಸಭೆಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸಾನಿಯಾ ಮಿರ್ಜಾಗೆ ನೇಮಕ ಪತ್ರ ದೊಂದಿಗೆ 1 ಕೋಟಿ ರೂಪಾಯಿಗಳ ಚೆಕ್ ನೀಡಿದರು.
ಸಾನಿಯಾ ಮಿರ್ಜಾ ಹೈದ್ರಾಬಾದ್ ಮೂಲದವಳಾಗಿದ್ದರಿಂದ ತೆಲಂಗಾಣ ರಾಜ್ಯವೇ ಹೆಮ್ಮೆಪಡುವಂತಾಗಿದೆ. ಅಂತಾರಾಷ್ಟ್ರೀಯ ಟೆನಿಸ್ ಶ್ರೇಯಾಂಕದಲ್ಲಿ ಸಾನಿಯಾ ಐದನೇ ಸ್ಥಾನ ಪಡೆದಿದ್ದು, ಮುಂಬರುವ ದಿನಗಳಲ್ಲಿ ಅಗ್ರ ಸ್ಥಾನ ಪಡೆಯಲಿ ಎನ್ನುವುದೇ ನಮ್ಮ ಬಯಕೆ ಎಂದು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ.
ಮುಖ್ಯಕಾರ್ಯದರ್ಶಿ ರಾಜೀವ್ ಶರ್ಮಾ, ವಿಶೇಷ ಮುಖ್ಯಕಾರ್ಯದರ್ಶಿ(ಕೈಗಾರಿಕೆ)ಕೆ.ಪ್ರದೀಪ್ ಚಂದ್ರಾ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.