ಏಷ್ಯನ್ ಗೇಮ್ಸ್ ಕುಸ್ತಿ ವಿಭಾಗದ ಅಂತಿಮ ಹಣಾಹಣಿಯಲ್ಲಿ ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ತಮ್ಮ ತಜಕೀಸ್ತಾನ್ ಎದುರಾಳಿ ಝಾಲಿಮ್ ಖಾನ್ ಯುಸುಪೋವ್ ಅವರನ್ನು ಸೋಲಿಸಿ ಚಿನ್ನದ ಪದಕ ಪಡೆದಿದ್ದರಿಂದ ಭಾರತ 28 ವರ್ಷಗಳ ನಂತರ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಂತಾಗಿದೆ.
ಕಳೆದ 1982ರಲ್ಲಿ ಭಾರತದ ಖ್ಯಾತ ಕುಸ್ತಿಪಟು ಸತ್ಪಾಲ್ ಸಿಂಗ್ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಒಲಿಂಪಿಕ್ ಹೊರತುಪಡಿಸಿ ಇತರ ಪಂದ್ಯಾವಳಿಗಳ ಗೆಲುವಿನ ಪದಕಗಳಿಗಿಂತ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದಿರುವುದು ವಿಶೇಷವಾಗಿದೆ ಮತ್ತು ಭಾರತದ ಕ್ರೀಡೆಗೆ ಸಂದ ದೊಡ್ಡ ಜಯವಾಗಿದೆ ಎಂದು ಕುಸ್ತಿ ಪಟು ಯೋಗೇಶ್ವರ್ ದತ್ ಸಂತಸ ವ್ಯಕ್ತಪಡಿಸಿದ್ದಾರೆ.
ಯೋಗೇಶ್ವರ್ ಚಿನ್ನದ ಪದಕ ಗೆದ್ದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಕೋಚ್ ಸತ್ಪಾಲ್ ಸಿಂಗ್, ಕಳೆದ 18 ವರ್ಷಗಳ ಹಿಂದೆ ಯೋಗೇಶ್ವರ್ ಮತ್ತು ಖ್ಯಾತ ಕುಸ್ತಿಪಟು ಒಲಿಂಪಿಕ್ ಕಂಚಿನ ಪದಕ ವಿಜೇತ ಸುಶೀಲ್ ಕುಮಾರ್ ಕುಸ್ತಿ ವಿದ್ಯೆಯನ್ನು ಕಲಿಯಲು ನನ್ನ ಬಳಿ ಬಂದಿದ್ದರು ಎಂದು ಸ್ಮರಿಸಿದರು.