Select Your Language

Notifications

webdunia
webdunia
webdunia
webdunia

ಕಿವೀಸ್ ವಿರುದ್ಧದ ಟೆಸ್ಟ್: ಇಂದು ಭಾರತ ತಂಡದ ಘೋಷಣೆ

ಕಿವೀಸ್ ವಿರುದ್ಧದ ಟೆಸ್ಟ್: ಇಂದು ಭಾರತ ತಂಡದ ಘೋಷಣೆ
ಮುಂಬೈ , ಸೋಮವಾರ, 12 ಸೆಪ್ಟಂಬರ್ 2016 (09:33 IST)
ಇದೇ ತಿಂಗಳ 22 ರಂದು ನ್ಯೂಜಿಲೆಂಡ್ ವಿರುದ್ಧ ಪ್ರಾರಂಭವಾಗಲಿರುವ 3 ಪಂದ್ಯಗಳ ಕ್ರಿಕೆಟ್ ಸರಣಿಗೆ ಬಿಸಿಸಿಐ  ಇಂದು ಭಾರತ ತಂಡವನ್ನು ಪ್ರಕಟಿಸಲಿದೆ.
ಆರಂಭಿಕ ಆಟಗಾರ ಗೌತಮ್ ಗಂಭೀರ್ ಐಪಿಎಲ್ 9ನೇ ಋತು ಮತ್ತು ದುಲೀಪ್ ಟ್ರೋಫಿಯಲ್ಲಿ ರನ್ ಹೊಳೆಯನ್ನು ಹರಿಸಿದ್ದು ಎರಡು ವರ್ಷಗಳ ಬಳಿಕ ತಂಡಕ್ಕೆ ಮರಳುವ ಸಾಧ್ಯತೆಗಳಿವೆ.
 
ಕಳೆದೊಂದು ವರ್ಷದಿಂದ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ರೋಹಿತ್ ಶರ್ಮಾ ಅವರನ್ನು ಕೈ ಬಿಡುವ ಸಾಧ್ಯತೆಗಳು ಸಹ ಇವೆ. ಅವರು ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ಅವರನ್ನು ಉಳಿಸಿಕೊಳ್ಳುವ ಇರಾದೆ ಕೊಹ್ಲಿಗಿದೆ. 
 
ಇನ್ನು, ದೇಶಿಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ತಂಡದ ಕದ ತಟ್ಟುತ್ತಿರುವ ಯುವ ಪ್ರತಿಭೆಗಳಾದ ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ ಪೈಕಿ ಯಾರು ಆಯ್ಕೆ ಸಮಿತಿ ಕೃಪಾ ಕಟಾಕ್ಷಕ್ಕೆ ಒಳಗಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
 
ದುಲೀಪ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಸ್ಪಿನ್ನರ್  ಕುಲದೀಪ್ ಯಾದವ್ ಹಾಗೂ ಅಮಿತ್ ಯಾದವ್ ಪೈಕಿ ಯಾರು ತಂಡಕ್ಕೆ ಬರುತ್ತಾರೆ ಎಂಬುದು ಸಹ ಕುತೂಹಲ ಕೆರಳಿಸಿದೆ.
 
ಮುಂಬೈನಲ್ಲಿರುವ ಬಿಸಿಸಿಐ ಕಚೇರಿಯಲ್ಲಿ ಸಭೆ ಸೇರಲಿರುವ ಆಯ್ಕೆ ಸಮಿತಿ ಮುಂಜಾನೆ 11 ಗಂಟೆ ಸುಮಾರಿಗೆ ತಂಡವನ್ನು ಘೋಷಿಸಲಿದೆ.
 
ಟೆಸ್ಟ್ ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 22 ರಂದು ಕಾನ್ಪುರದಲ್ಲಿ ನಡೆಯಲಿದ್ದು, ದ್ವಿತೀಯ ಪಂದ್ಯ ಕೋಲ್ಕತಾದಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 4 ಮತ್ತು ಕೊನೆಯ ಪಂದ್ಯ ಇಂದೋರ್‌ನಲ್ಲಿ ಅಕ್ಟೋಬರ್ 8 ರಿಂದ 12ರವರೆಗೆ ನಡೆಯಲಿದೆ. ಬಳಿಕ ಎರಡು ತಂಡಗಳು 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿವೆ. 
 
ನ್ಯೂಜಿಲೆಂಡ್ ಆಯ್ಕೆ ಸಮಿತಿ ಈಗಾಗಲೇ ತಮ್ಮ ತಂಡವನ್ನು ಪ್ರಕಟಿಸಿದೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ತಂಡವನ್ನೇ ಉಳಿಸಿಕೊಂಡಿರುವ ಸಮಿತಿ ಕೇವಲ ಮೂರು ಬದಲಾವಣೆಯನ್ನು ತಂದಿದೆ. ವೇಗಿ ಮ್ಯಾಟ್ ಹೆನ್ರಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಜೀತ್ ರಾವಲ್‌ಗೆ ಕೊಕ್ ನೀಡಲಾಗಿದೆ. ನೀಶಾಮ್ ಅವರನ್ನು ಮರಳಿ ಕರೆ ತರಲಾಗಿದೆ.
 
ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತಿರುವ ನ್ಯೂಜಿಲೆಂಡ್ ಸದ್ಯ ಐಸಿಸಿ ಶ್ರೇಯಾಂಕದಲ್ಲಿ 7 ನೇ ಸ್ಥಾನದಲ್ಲಿದ್ದು, ಭಾರತ 2 ನೇ ಸ್ಥಾನದಲ್ಲಿದೆ.
 
ನ್ಯೂಜಿಲೆಂಡ್ ತಂಡ ಇಂತಿದೆ: ಕೇನ್ ವಿಲಿಯಮ್ಸ್ ( ನಾಯಕ) , ಟ್ರೆಂಟ್ ಬ್ರಾಸ್‌ವೆಲ್, ಮಾರ್ಕ್ ಕ್ರೇಗ್, ಮಾರ್ಟಿನ್ ಗಪ್ಟಿಲ್, ಟಾಮ್ ಲಥಾಮನ್, ಜಿಮ್ಮಿ ನೀಶಾಮ್, ಹೆನ್ನಿ ನಿಕೋಲ್ಸ್, ಲೂಕ್ ರಾಂಚಿ, ಮಿಚೆಲ್  ಸ್ಯಾಂಟ್ನರ್ , ಐಸ್ ಲೋಧಿ,  ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಟ್ಲಿಂಗ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕೆ ಕ್ರಿಕೆಟಿಗ ಪ್ರವೀಣ್ ಕುಮಾರ್