ಕಾಮನ್ವೆಲ್ತ್ ಕ್ರೀಡಾಗ್ರಾಮದ ಕಾಮಗಾರಿಗಳ ಕುರಿತಂತೆ ಪರಿಷ್ಕರಣ ಸಭೆ ನಡೆಸಿದ ಪ್ರಧಾನಿ ಡಾ.ಮನಮೋಹನ್ ಸಿಂಗ್, ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ಮುಕ್ತಾಯಗೊಳಿಸುವಂತೆ ಸಂಬಧಿತ ಸಚಿವರಿಗೆ ಆದೇಶಿಸಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಪ್ರಧಾನಿ ಮನಮೋಹನ್ ಸಿಂಗ್, ನಗರಾಭಿವೃದ್ಧಿ ಸಚಿವ ಎಸ್.ಜೈಪಾಲ್ ರೆಡ್ಡಿ, ಕ್ರೀಡಾ ಸಚಿವ ಎಂ.ಎಸ್.ಗಿಲ್, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ದೆಹಲಿ ರಾಜ್ಯಪಾಲ ತೇಜಿಂದರ್ ಖನ್ನಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಮತ್ತು ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಅವರೊಂದಿಗೆ ನಡೆಸಿದ ಸುಮಾರು ಎರಡು ಗಂಟೆಗಳ ಸಭೆಯಲ್ಲಿ,ವೇಗವಾಗಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಕಾಮನ್ವೆಲ್ತ್ ಆಯೋಜಕ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಸಭೆಯಲ್ಲಿ ಉಪಸ್ಥಿತರಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸರಕಾರಿ ಮೂಲಗಳ ಪ್ರಕಾರ, ಅಕ್ಟೋಬರ್ 3-14ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಪಂದ್ಯಾವಳಿಗಾಗಿ ಭರದ ಸಿದ್ಧತೆ ನಡೆಸುವಂತೆ ನಿರ್ದೇಶಿಸಿದ್ದಾರೆ.ಶುಕ್ರವಾರದವರೆಗೆ ಕ್ರೀಡಾಗ್ರಾಮ ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ಸಚಿವರುಗಳು ಪ್ರದಾನಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.