ಮುಂಬೈ ಉಗ್ರರ ದಾಳಿಯ ನಂತರ ಮೊದಲ ಬಾರಿಗೆ ಏಳು ಮಂದಿ ಬಾಕ್ಸರ್ಗಳ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದು ಕರಾಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಮಗೆ ಸುರಕ್ಷತೆಯ ಬಗ್ಗೆ ಕಳವಳವಿಲ್ಲ, ಬಾಕ್ಸಿಂಗ್ನತ್ತ ಮಾತ್ರ ಗಮನಹರಿಸಿದ್ದೇವೆ.ಸುರಕ್ಷತೆಯನ್ನು ನೀಡುವುದು ಅತಿಥೇಯ ರಾಷ್ಟ್ರದ ಹೊಣೆಗಾರಿಕೆಯಾಗಿದೆ ಎಂದು ಭಾರತೀಯ ಕೋಚ್ ಶಿವ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಜಯ್ ಸಿಂಗ್ (51ಕೆಜಿ) ನರೇಶ್ ಸಿಂಗ್ (91ಕೆಜಿ)ಮತ್ತು ಪರ್ನೋಜ್ ಸಿಂಗ್(81ಕೆಜಿ) ಭಾರತೀಯ ಬಾಕ್ಸರ್ಗಳಾಗಿದ್ದು, ಕ್ಯಾಮರೂನ್ ,ಮಂಗೋಲಿಯಾ, ಕೀನ್ಯಾ, ಅಫ್ಘಾನಿಸ್ತಾನ, ತೈಪೆ, ಮೈನ್ಮಾರ್ ಮತ್ತು ಚೀನಾ ದೇಶದ ಬಾಕ್ಸರ್ಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಪಾಕಿಸ್ತಾನ ಬಾಕ್ಸಿಂಗ್ ಫೆಡರೇಶನ್ ಮುಖ್ಯಸ್ಥ ದೋಡಾ ಖಾನ್ ಮಾತನಾಡಿ, ಸ್ಫರ್ಧಾ ಕ್ರೀಡಾಂಗಣ ಹಾಗೂ ಬಾಕ್ಸಿಂಗ್ ಕ್ರೀಡಾಪಟುಗಳು ಉಳಿದುಕೊಂಡಿರುವ ಹೋಟೆಲ್ಗಳಲ್ಲಿ ಕ್ರೀಡಾಪಟುಗಳ ಸುರಕ್ಷತೆಗಾಗಿ 5 ಸಾವಿರ ಭಧ್ರತಾ ಪಡೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ದೀರ್ಘಾವಧಿಯ ನಂತರ ಅಂತಾರಾಷ್ಟ್ರೀಯ ಕ್ರೀಡಾ ಪಂದ್ಯಾವಳಿಯ ಆತಿಥ್ಯವಹಿಸಿದ್ದು, ತೊಂದರೆಯಿಲ್ಲದ ಹಾಗೂ ಯಶಸ್ವಿಯಾಗಿ ನಡೆಸುವುದರಿಂದ ಪಾಕಿಸ್ತಾನಕ್ಕೆ ಮತ್ತಷ್ಟು ತಂಡಗಳು ಇತರ ಪಂದ್ಯಾವಳಿಗಾಗಿ ಆಗಮಿಸುತ್ತವೆ ಎನ್ನುವ ಅರಿವು ಸರಕಾರಕ್ಕಿದೆ ಎಂದು ಸಿಂಧ ಕ್ರೀಡಾ ಸಚಿವ ಮುಹಮ್ಮದ್ ಅಲಿ ಶಾ ಹೇಳಿದ್ದಾರೆ.