ಮುಂಬರುವ 2012ರ ಲಂಡನ್ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಸೈನಾ ನೆಹ್ವಾಲ್, ಗಗನ್ ನಾರಂಗ್ ಮತ್ತು ಮೇರಿ ಕೋಮ್ ಚಿನ್ನದ ಪದಕ ಪಡೆಯುವ ಆಶಾಕಿರಣವಾಗಿದ್ದಾರೆ ಎಂದು ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಹೇಳಿದ್ದಾರೆ.
2016 ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಉತತ್ಮ ಫಲಿತಾಂಶವನ್ನು ಪಡೆಯಲು, ಇಂದಿನಿಂದಲೇ ರೂಪರೇಷೆಗಳನ್ನು ಸಿದ್ಧಪಡಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಪ್ರಸ್ತುತ ಸೈನಾ, ಗಗನ್ ಮತ್ತು ಮೇರಿ ಕೋಮ್ ಪ್ರತಿಭಾವಂತ ಕ್ರೀಡಾಪಟುಗಳಾಗಿರುವುದರಿಂದ ಚಿನ್ನದ ಪದಕ ಪಡೆಯುವ ನಿರೀಕ್ಷೆಗಳಿವೆ. ಮತ್ತಷ್ಟು ಯುವ, ಉದಯೋನ್ಮುಖ ಕ್ರೀಡಾಪಟುಗಳ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಕೇವಲ 2012ರ ಲಂಡನ್ ಒಲಿಂಪಿಕ್ಸ್ಗೆ ಯೋಚಿಸಿದರಷ್ಟೆ ಸಾಲದು. ಮುಂಬರುವ 2016ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಯೋಜನಾ ಸಿದ್ಧತೆಗಳನ್ನು ಆರಂಭಿಸಬೇಕಾಗುತ್ತದೆ ಎಂದರು.
ವಿಶ್ವನಾಥನ್ ಆನಂದ್, ಒಲಿಂಪಿಕ್ಸ್ಗಾಗಿ ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಮೇಲ್ವಿಚಾರಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಪ್ರಕಾಶ್ ಪಡುಕೋಣೆ ಮತ್ತು ಗೀತ್ ಸೇಠಿ ಸಂಚಾಲಕತ್ವದ ಎನ್ಜಿಒ ಸಂಸ್ಥೆಯಿಂದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಅನ್ವಯ 'ಪವರ್ ಯುವರ್ ಚಾಂಪಿಯನ್'ಗಾಗಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತಿದೆ.