ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಮುಚ್ಚುವುದಿಲ್ಲ ಎಂದು ಬಿಸಿಸಿಐನ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ.
ಎನ್ಸಿಎಯ ಒಟ್ಟು ಆಯವ್ಯಯ ಪ್ರತಿ ವರ್ಷ ಏರಿಕೆಯಾಗುತ್ತದೆ. ಈ ವರ್ಷ ಬಿಸಿಸಿಐ 16 ಕೋಟಿ ರೂಪಾಯಿ ಖರ್ಚು ಮಾಡಿದ್ದು ಹೊರೆಯಾಗಿ ಪರಿಣಮಿಸಿದೆ. ಅಲ್ಲದೇ, ಎನ್ಸಿಎ ವರ್ಷದ ನಾಲ್ಕು ತಿಂಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಈ ಕಾರಣದಿಂದ ಮೇ ತಿಂಗಳ ಕೊನೆಯಲ್ಲಿ ಎನ್ಸಿಎ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿ, ಆಟಗಾರರ ತರಬೇತಿ ಕೇಂದ್ರವನ್ನಾಗಿ ಪರಿವರ್ತಿಸಲು ಬಿಸಿಸಿಐ ನಿರ್ಧರಿಸಿದೆ. ಏಪ್ರಿಲ್ 12ರಂದು ಚೆನ್ನೈನಲ್ಲಿ ನಡೆದ ಎನ್ಸಿಎ ಸಮಿತಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮುಂದಿಡಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು.
ಈ ಸುದ್ದಿಯನ್ನು ಬಿಸಿಸಿಐನ ಮುಖ್ಯ ಆಡಳಿತಾಧಿಕಾರಿ ರತ್ನಾಕರ ಶೆಟ್ಟಿ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. "ಎನ್ಸಿಯನ್ನು ಮುಚ್ಚುವ ಕುರಿತಾದ ವರದಿ ಶುದ್ಧ ಸುಳ್ಳು. ಬೆಂಗಳೂರಿನಲ್ಲಿರುವ ಎನ್ಸಿಎ, ಚೆನ್ನೈ, ಮುಂಬೈ ಮತ್ತು ಮೊಹಾಲಿಯಲ್ಲಿರುವ ಪ್ರಾದೇಶಿಕ ಕಚೇರಿಗಳ ಕಾರ್ಯಗಳನ್ನು ನಿಗದಿಪಡಿಸುವ ಬಗ್ಗೆ ಬಿಸಿಸಿಐ ಚರ್ಚಿಸಿದೆಯೇ ಹೊರತು ಮುಚ್ಚುವ ಬಗ್ಗೆ ಅಲ್ಲ" ಎಂದಿದ್ದಾರೆ.