2011; ಬೆಚ್ಚಿಬೀಳಿಸಿದ್ದ 'ಅನಂತ ಸಂಪತ್ತು'-ಶಬರಿಮಲೆ ದುರಂತ
, ಶನಿವಾರ, 31 ಡಿಸೆಂಬರ್ 2011 (12:45 IST)
2011
ರಲ್ಲಿ ದೊಡ್ಡ ಸುದ್ದಿ ಮಾಡಿದ್ದು ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಹೆಸರು ಪಡೆದಿದ್ದ ತಿರುಪತಿಯ ತಿಮ್ಮಪ್ಪನನ್ನೂ ಹಿಂದಿಕ್ಕಿದ ಕೇರಳದ ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಆರು ಕೋಠಿಗಳಲ್ಲಿ ಲಭ್ಯವಾಗಿರುವ ಸಂಪತ್ತಿನ ಪ್ರಮಾಣವು ಸುಮಾರು 1 ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಮೌಲ್ಯದ ಸಂಪತ್ತು!ದೇವಳದಲ್ಲಿರುವ ನಿಧಿಯ ಮೌಲ್ಯವು ಒಂದು ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗುತ್ತಿದ್ದು, ಇದು ಕೇರಳದ ಸಾಲದ ಪ್ರಮಾಣವಾದ 70,969 ಕೋಟಿಗಿಂತಲೂ ಹೆಚ್ಚು. ಈಗಾಗಲೇ ಆರು ಕೊಠಡಿಗಳನ್ನು ತೆರೆಯಲಾಗಿದ್ದು, ಇನ್ನೂ ಒಂದು ಕೊಠಡಿಯನ್ನು ತೆರೆಯುವ ವಿವಾದ ಸುಪ್ರೀಂಕೋರ್ಟ್ ಕಟಕಟೆಯಲ್ಲಿದ್ದು ಅದರ ಅಂತಿಮ ತೀರ್ಪು ಹೊರಬೀಳಲು ಬಾಕಿ ಇದೆ.ಅದರೊಳಗೆ ಪ್ರಾಚ್ಯ ವಸ್ತುಗಳ ವ್ಯಾಪ್ತಿಗೆ ಬರುವ ಅಮೂಲ್ಯ ಮುತ್ತು, ಆಭರಣ, ರತ್ನಗಳು ಇತ್ಯಾದಿ ದೊರಕಿರುವುದರಿಂದ, ಅವುಗಳ ನಿಖರವಾದ ಮೌಲ್ಯಗಳನ್ನು ಅಂದಾಜಿಸುವುದು ಕಷ್ಟ ಎಂದು ಇತಿಹಾಸ ತಜ್ಞ, ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಮಾಜಿ ಅಧ್ಯಕ್ಷ ಎಂ.ಜಿ.ಎಸ್.ನಾರಾಯಣನ್ ಅವರು ಹೇಳಿದ್ದರು. ಅಂದರೆ, ಒಟ್ಟು ಮೌಲ್ಯವು ಈಗ ಅಂದಾಜು ಹಾಕಿರುವ ಮೌಲ್ಯಕ್ಕಿಂತ ಎಷ್ಟೋ ಪಟ್ಟು ಹೆಚ್ಚೇ ಇರಬಹುದು.
ಇದುವರೆಗೆ ಸಿಕ್ಕಿದ ನಿಧಿಗಳಿಗೆ ಸಂಬಂಧಿ ಒಂದೇ ಕೊಠಡಿಯಲ್ಲಿ 1000 ಕಿಲೋ ಚಿನ್ನದ ನಾಣ್ಯಗಳು ದೊರೆತಿದ್ದು, ಇವು ಈಸ್ಟ್ ಇಂಡಿಯಾ ಕಂಪನಿ, ನೆಪೋಲಿಯನ್ ಕಾಲದ್ದಾಗಿದ್ದವು. ಬರ್ಮಾ ಮತ್ತು ಶ್ರೀಲಂಕಾದ ಒಂದು ಟನ್ನಷ್ಟು ಚಿನ್ನದ ತುಣುಕುಗಳು, ಚೀಲಗಟ್ಟಲೆ ವಜ್ರಗಳು, ಸರಪಳಿ ನೆಕ್ಲೇಸುಗಳು, ಚಿನ್ನದ ಹಗ್ಗ ಇತ್ಯಾದಿ ಅಪಾರ ಸಂಪತ್ತು ಪತ್ತೆಯಾಗಿತ್ತು. ಅಂತೆಯೇ ಮೂರುವರೆ ಅಡಿ ಎತ್ತರದ, ಮುತ್ತು ರತ್ನ, ಚಿನ್ನಗಳಿಂದ ಒಡಗೂಡಿದ ಮಹಾವಿಷ್ಣುವಿನ ವಿಗ್ರಹ, ದೇವರಿಗೆ ಹಾಕುವ 18 ಅಡಿ ಎತ್ತರದ, 35 ಕಿಲೋ ತೂಗುವ ಚಿನ್ನದ ಆಭರಣ, ತಲಾ ಒಂದೊಂದು ಕಿಲೋ ತೂಕದ ಚಿನ್ನದ ಮಾನವಾಕೃತಿಗಳು ಕೂಡ ಸಿಕ್ಕಿದ್ದವು. ಅಲ್ಲದೆ 1772ರ ಮುದ್ರೆಯುಳ್ಳ ನಾಣ್ಯಗಳೂ ಇದ್ದವು. ಅಂದು ಧರ್ಮ ರಾಜ ಎಂದೇ ಖ್ಯಾತಿವೆತ್ತಿದ್ದ, ತಿರುವಾಂಕೂರಿನ ಮಹಾರಾಜ ಕಾರ್ತಿಕ ತಿರುನಾಳ್ ರಾಮ ವರ್ಮನ ಕಾಲದ ನಾಣ್ಯಗಳಾಗಿತ್ತವು. ಇಲ್ಲಿ ದೊರೆತ ಸಂಪತ್ತು, ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತದೆ.ತಿರುವಾಂಕೂರು ಎಂಬುದು ಬಂದರು ನಗರಿಯಾಗಿ ಅಂದಿನ ಕಾಲದಲ್ಲಿ ವ್ಯಾಪಾರ ವಹಿವಾಟಿಗೆ ಪ್ರಸಿದ್ಧವಾಗಿತ್ತು. ಸಮುದ್ರ ಮಾರ್ಗದ ವ್ಯಾಪಾರದ ಮೂಲಕವೇ ಇಲ್ಲಿ ವಿದೇಶೀ ನಾಣ್ಯಗಳೆಲ್ಲ ಪತ್ತೆಯಾಗಿವೆ ಎಂದು ಭಾವಿಸಲಾಗಿದೆ.ನಿಧಿಯನ್ನು ನೋಡಲು ಯಾರಿಗೂ ಪ್ರವೇಶವಿರಲಿಲ್ಲ. ಮಾಧ್ಯಮಗಳಿಗೂ ನಿರ್ಬಂಧಗಳಿವೆ. ಎ ಬಿ ಸಿ ಡಿ ಇ ಎಫ್ಗಳೆಂಬ ಆರು ಕೊಠಡಿಗಳಲ್ಲಿ ಈ ಅಪಾರ ಸಂಪತ್ತು ಕಂಡು ಬಂದಿವೆ. ಎಲ್ಲ ದ್ವಾರಗಳನ್ನು ಮುಚ್ಚಲಾಗಿದ್ದು, ಎರಡು ಸಶಸ್ತ್ರ ಪಡೆಗಳ ಭದ್ರತೆ ಏರ್ಪಡಿಸಲಾಗಿದೆ. ಮೂರು ಹಂತದ ಭದ್ರತಾ ಕ್ರಮಗಳನ್ನು ರೂಪಿಸಲಾಗಿದ್ದು, ದೇವಸ್ಥಾನದ ಒಳಗೆ ಹೋಗುವವರನ್ನು ತೀವ್ರ ತಪಾಸಣೆಗೆ ಗುರಿಪಡಿಸಲಾಗುತ್ತಿದೆ.