ಯಾವತ್ತೋ ಸತ್ತುಹೋಗಿರುವ ಬಾಬರನೆಂಬೋ ಮುಸ್ಲಿಮ, ರಾಮ ಹುಟ್ಟಿದ ಅಯೋಧ್ಯೆಯಲ್ಲಿದ್ದ ದೇವಾಲಯವನ್ನು ಕೆಡವಿ ಮಸೀದಿ ಕಟ್ಟಿದ ಎಂಬ ಕಾರಣಕ್ಕೆ ಸದರೀ ಬಾಬರನ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಹೊರಟು, ಈಗ್ಗೆ ಹದಿನಾರು ವರ್ಷದ ಹಿಂದೆ ಅಲ್ಲಿದ್ದ ಪುರಾತನ ಮಸೀದಿಯನ್ನು ಕೆಡವಿರುವುದು, ಕಾಂದಹಾರ್ ವಿಮಾನ ಅಪಹರಣವಾದಾಗ, ಒತ್ತೆಯಾಳುಗಳಾಗಿದ್ದ ಪ್ರಯಾಣಿಕರ ಸುರಕ್ಷೆಯ ಹಿನ್ನೆಲೆಯಲ್ಲಿ ಅಪಹರಣಕಾರರ ಬೇಡಿಕೆಗೆ ತಲೆಬಾಗಿ ಸೆರೆಯಲ್ಲಿದ್ದ ಉಗ್ರ ಮಸೂದ್ನನ್ನು ಬಿಡುಗಡೆ ಮಾಡಿರುವುದು, ಸಂಸತ್ ಮೇಲೆ ದಾಳಿ ನಡೆಸಿರುವ ರೂವಾರಿ ಅಫ್ಜಲ್ ಗುರು ಎಂಬಾತನ ವಿರುದ್ಧ ಸರ್ವೋಚ್ಛ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಜಾರಿಗೆ ತರಲು ಆತ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ನೆಪ ಒಡ್ಡುತ್ತಿರುವುದು, ವಿಧ್ವಂಸಕ ಕಾರ್ಯಗಳನ್ನು ನಡೆಸಿರುವ ದುರುಳರ ಮಾನವಹಕ್ಕುಗಳ ಸಂರಕ್ಷಣೆಯ ಬಗ್ಗೆ ವ್ಯಕ್ತವಾಗುವ ಪ್ರತಿಭಟನೆಗಳು ಮತ್ತು ಒಟ್ಟಾರೆಯಾಗಿ ವೋಟ್ಬ್ಯಾಂಕ್ ರಾಜಕೀಯ - ಈ ಎಲ್ಲವುಗಳ ಫಲ ಎಂಬಂತೆ ಈ ವರ್ಷದ ನವೆಂಬರ್ 26ರಂದು ಮುಂಬೈಯಲ್ಲಿ ಹಿಂದೆಂದೂ ನಡೆಯದಿರುವಂತೆ ದಾಳಿ ನಡೆದು ಹೋಯಿತು.ಚೆನ್ನಾಗಿ ಅಭ್ಯಾಸ ನಡೆಸಿದ ಕ್ರೀಡಾಪಡುಗಳು ಆಟದ ಅಂಗಳಕ್ಕೆ ಇಳಿದಷ್ಟೇ ಸಲೀಸಾಗಿ ಮುಂಬೈಯನ್ನು ತಮ್ಮ ಆಡುಂಬೊಲವಾಗಿ ಮಾಡಿಕೊಂಡ ತರಬೇತುಗೊಂಡ ಬೆರಳೆಣಿಕೆಯ ಹತ್ತು ಮಂದಿ ಉಗ್ರರು ಸಲೀಸಾಗಿ ಎಲ್ಲೆಂದರಲ್ಲಿ ನುಗ್ಗಿ ಗುಂಡು, ಗ್ರೆನೇಡುಗಳನ್ನು ಹಾರಿಸಿದ ಪರಿ ಇಷ್ಟುದೊಡ್ಡ ರಾಷ್ಟ್ರದ ಭದ್ರತಾ ವ್ಯವಸ್ಥೆಯನ್ನು ಅಣಕಿಸಿ ಅಣಕಿಸಿ ನಕ್ಕಿತು. ದಾಳಿಕೋರರ ದೇಹಭಾಷೆಯು ಇಲ್ಲಿ ಏನೂಮಾಡಿದರೂ ದಕ್ಕಿಸಿಕೊಂಡೇವೂ ಎಂಬಂತಿತ್ತು. ಪ್ರತಿಯೊಂದು ವಿಚಾರವನ್ನು, ತಮ್ಮ ದಾಳಿಯ ಗುರಿಗಳನ್ನು ಚೆನ್ನಾಗಿ ಅಭ್ಯಸಿಸಿದ್ದ ಉಗ್ರ ಹುಡುಗರು ಅತ್ಯಂತ ಹರ್ಷದಿಂದ, ಲವಲವಿಕೆಯಿಂದ, ಆತ್ಮವಿಶ್ವಾಸದಿಂದ ಲೀಲಾಜಾಲವಾಗಿ ತಮ್ಮ ದುಷ್ಕೃತ್ಯವನ್ನು ನಡೆಸುತ್ತಿದ್ದರು ಎಂದು ಇವರ ದಾಳಿಯಿಂದ ಪಾರಾದವರು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಭದ್ರತಾ ಮತ್ತು ಬೇಹುಗಾರಿಕಾ ವ್ಯವಸ್ಥೆಯು ಈ ಉಗ್ರರ ಭಯೋತ್ಪಾದನಾ ಬದ್ಧತೆಯಿಂದ ಕಲಿಯಬೇಕಿರುವುದು ಬಹಳಷ್ಟಿದೆ ಎಂಬ ಸಂದೇಶ ರವಾನೆಯಾಗಿದೆ.ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಲು ಹಾಕಲು ಹೊರಟಿರುವ ನಮ್ಮ ರಾಜಕೀಯ ಪಕ್ಷಗಳು ಸಾರ್ವಜನಿಕರಿಂದ ಛೀ..ಥೂ ಎಂಬುದಾಗಿ ಉಗಿಸಿಕೊಂಡಿದ್ದಾರೆ. ಇದೀಗ ಜ್ಞಾನೋದಯವಾದಂತೆ ಸರಕಾರವೂ ಉಗ್ರರ ವಿರುದ್ಧ ಉಗ್ರ ಕ್ರಮಕೈಗೊಳ್ಳಲು ಮುಂದಾಗಿದೆ ಮತ್ತು ವಿರೋಧ ಪಕ್ಷಗಳೂ ಬೆಂಬಲ ಸೂಚಿಸಿವೆ. ಕಾನೂನು ಕಠಿಣಗೊಳಿಸಿದೆ, ರಾಷ್ಟ್ರೀಯ ತನಿಖಾ ಏಜೆನ್ಸಿ ಹುಟ್ಟು ಪಡೆದಿದೆ. ಪಾಕಿಸ್ತಾನದೊಂದಿಗಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ.ಈ ಎಲ್ಲ ಘಟನೆಗಳನ್ನು ಕಂಡ ಜನಸಾಮಾನ್ಯನಿಗೆ ಉಗ್ರವಾದ, ಭಯೋತ್ಪಾದನೆ ಅಥವಾ ಆತಂಕವಾದವೆಂಬ ಶಬ್ದ ಈಗ ಅತ್ಯುಗ್ರವಾಗಿ ಕೇಳಿ ಭಯ ಇಲ್ಲವೇ ಆತಂಕ ಹುಟ್ಟಿಸದೇ, ಅತ್ಯಂತ ಸಹಜ ಶಬ್ದ ಎಂಬಂತೆ ಕಿವಿಯ ತಮಟೆಗೆ ಅಪ್ಪಳಿಸುತ್ತದೆ. ಹಿಂದೂ ಭಯೋತ್ಪಾದನೆ ಮಾಲೆಗಾಂವ್ನಲ್ಲಿ ಸೆಪ್ಟೆಂಬರ್ 29ರಂದು ನಡೆಸಿರುವ ಬಾಂಬ್ ದಾಳಿಯ ಹಿಂದೆ ಹಿಂದೂ ಸಂಘಟನೆ ಅಭಿನವ್ ಭಾರತ್ ಎಂಬುದರ ಕೈವಾಡ ಇದೆ ಎಂಬುದಾಗಿ ತನಿಖೆಯಲ್ಲಿ ಪತ್ತೆಯಾಗಿರುವುದು ಭಯೋತ್ಪಾದನೆಯ ಪಟ್ಟಿಗೆ ಹಿಂದೂ ಭಯೋತ್ಪಾದನೆ ಎಂಬ ಹೆಸರು ಸೇರಿಕೊಂಡಿತು. ಸಾಧ್ವಿ ಪ್ರಜ್ಞಾ (ಪ್ರಗ್ಯಾ) ಸಿಂಗ್ ಠಾಕೂರ್ ಎಂಬಾಕೆಯ ದ್ವಿಚಕ್ರವಾಹನವನ್ನು ಬಳಸಿ ಸ್ಫೋಟ ನಡೆಸಲಾಗಿದೆ ಎಂದು ತಿಳಿದ ಮುಂಬೈ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇದರ ಎಳೆಯನ್ನು ಹಿಡಿದು ಸುಮಾರು ಹನ್ನೊಂದು ಜನರನ್ನು ಬಂಧಿಸಿದೆ. ಬಂಧಿತರಲ್ಲಿ ದಯಾನಂದ ಪಾಂಡೆ ಎಂಬ ಸ್ವಯಂ ಘೋಷಿತ ಸ್ವಾಮೀಜಿ, ಸೇವಾನಿರತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಅಭಿನವ ಭಾರತ್ನ ಇತರ ಕಾರ್ಯಕರ್ತರು ಸೇರಿದ್ದಾರೆ. ಸ್ಫೋಟಕ್ಕೆ ಬಳಸಿರುವ ಈ ದ್ವಿಚಕ್ರವಾಹನವನ್ನು ತಾನು ಮಾರಾಟ ಮಾಡಿದ್ದೇನೆ ಎಂಬುದು ಸಾಧ್ವಿ ಹೇಳಿಕೆ.
ಬೇರಾವ ಬಾಂಬ್ ಸ್ಫೋಟ ಪ್ರಕರಣಕ್ಕಿಂತ ಹೆಚ್ಚಿನ ಆಸಕ್ತಿಯಿಂದ, ಚುರುಕಿನಿಂದ ಪ್ರಕರಣದ ಹಿಂದೆ ಪೊಲೀಸರು ಮುರಕ್ಕೊಂಡು ಬಿದ್ದಿರುವುದು, ತನಿಖೆಯ ವೇಗ, ಮಾಧ್ಯಮಗಳಿಗೆ ಸೋರುತ್ತಿದ್ದ ವಿಚಾರಗಳು, ನ್ಯಾಯಾಲಯಗಳಲ್ಲಿ ನೀಡುತ್ತಿದ್ದ ಹೇಳಿಕೆಗಳು, ಈ ಪ್ರಕರಣದ ಆರೋಪಿಗಳ ಮಾನವಹಕ್ಕುಗಳ ಬಗ್ಗೆ ಯಾರೂ ವಹಿಸದ ಕಾಳಜಿ ಎಲ್ಲವುಗಳೂ ಪ್ರಕರಣವನ್ನು ಭೇದಿಸಿ ಆರೋಪಿಗಳಿಗೆ ಶಿಕ್ಷೆ ನೀಡುವ ಧಾವಂತದ ಹಿಂದೆ ಬೇರೇನೋ ಇದೆ ಎಂಬ ವಾಸನೆ ಹೊರಡುವಂತೆ ಮಾಡಿತ್ತು. ಪೋಟಾ ಕಾಯ್ದೆಯನ್ನು ವಿರೋಧಿಸುತ್ತಲೇ ಬಂದಿದ್ದ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವಿರುವ ಮಹಾರಾಷ್ಟ್ರದ ಪೋಲೀಸರು ಈ ಆರೋಪಿಗಳ ಮೇಲೆ ಪೋಟಾ ಕಾಯ್ದೆಯಂತಹ ಮೋಕೋ ಕಾನೂನನ್ನು ಹೇರಿದ್ದಾರೆ. ಈ ಮೂಲಕ ಬಿಜೆಪಿಗೆ 'ಹೆಂಗೆ?' ಎಂಬ ಲುಕ್ ಕೊಟ್ಟಿತು.
ಆದರೆ ಮುಂಬೈ ದಾಳಿಯು ರಾಷ್ಟ್ರವನ್ನೇ ನಡುಗಿಸಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದು, ಸದ್ಯಕ್ಕೀಗ ಮಾಲೆಗಾಂವ್ ಸ್ಫೋಟ ಪ್ರಕರಣ ಸುದ್ದಿಯಲ್ಲಿಲ್ಲ. ಈ ಪ್ರಕರಣದ ಬೆನ್ನುಬಿದ್ದು, ಎದ್ದುಬಿದ್ದು ವರದಿ ಮಾಡುತ್ತಿದ್ದ ಮಾಧ್ಯಮಗಳೂ ಈ ಪ್ರಕರಣವನ್ನು ಸದ್ಯದ ಮಟ್ಟಿಗೆ ಮರೆತಂತಿದೆ.
ಯಾರೇ ಆಗಲಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ಮೂಲಕ ಯಾವುದೇ ಸುಧಾರಣೆ ತರಲು ಸಾಧ್ಯವಿಲ್ಲ. ಉಗ್ರರು ಎಲ್ಲರೂ ಉಗ್ರರೇ. ಅವರು ಜಾತಿ, ಮತ, ಧರ್ಮಗಳನ್ನು ಮೀರಿದವರು. ಎಲ್ಲರ ವಿರುದ್ಧವೂ ಉಗ್ರ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅನಿವಾರ್ಯ ಮತ್ತು ಅವಶ್ಯಕ ಕೂಡ. ಕೆಲವರ ಮೇಲೆ ಮೃದು ಧೋರಣೆ ಮತ್ತು ಇನ್ನು ಕೆಲವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಈ ಕುರಿತು ಜನಸಾಮಾನ್ಯರು ಏನೆಂದು ಅರ್ಥೈಸಿಕೊಳ್ಳಬೇಕು?
ಉಗ್ರರಿಗೆ ಜೀವತೆತ್ತ ರಾಷ್ಟ್ರಯೋಧರು
ಮುಂಬೈದಾಳಿಕೋರರ ವಿರುದ್ಧ ಹೋರಾಡುವ ವೇಳೆಗೆ, ರಾಷ್ಟ್ರವು ಧೀರ ಯೋಧರನ್ನು ಕಳೆದು ಕೊಂಡಿದೆ. ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ, ಎನ್ಕೌಂಟರ್ ತಜ್ಞ ವಿಜಯ್ ಸಾಲಸ್ಕರ್, ಧೀರ ಪೊಲೀಸ್ ಅಧಿಕಾರಿ ಅಶೋಕ್ ಕಾಮ್ಟೆ, ಎನ್ಎಸ್ಜಿಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಗಜೇಂದ್ರ ಸಿಂಗ್ ಪೊಲೀಸ್ ಪೇದೆಗಳಾದ ಪ್ರಕಾಶ್ ಮೋರೆ, ಅಂಬಾದಾಸ್ ಪವಾರ್, ಎಂ,ಸಿ ಚೌಧರಿ, ಶಶಾಂಕ್ ಶಿಂಧೆ, ಬಾಪುಸಾಹೇಬ್ ದುರ್ಗುಡೆ, ಬಾಬಾಸಾಹೇಬ್ ಭೋಂಸ್ಲೆ, ಅರುಣ್ ಚಿಟ್ಟೆ, ಜಯಂತ್ ಪಾಟೀಲ್, ಯೋಗೇಶ್ ಪಾಟಿಲ್, ಅಂಬಾದಾಸ್ ಪವಾರ್, ವಿಜಯ್ ಖಾಂಡೇಕರ್, ರಾಹುಲ್ ಶಿಂಧೆ, ಮುಖೇಶ್ ಜಾಧವ್ ಇವರುಗಳು ಉಗ್ರರೊಂದಿಗೆ ಹೋರಾಡುವ ವೇಳೆ ವೀರಮರಣವನ್ನಪ್ಪಿದ್ದು, ಅಮೂಲ್ಯ ಜೀವ ಕಳೆದುಕೊಂಡಿದ್ದಾರೆ.
ಇದಲ್ಲದೆ, ದೆಹಲಿಯ ಜಾಮಿಯಾ ನಗರದಲ್ಲಿ ಅಗಡಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ಪೊಲೀಸಧಿಕಾರಿ ಮೋಹನ್ ಚಂದ್ರಾ ಶರ್ಮಾ ಎಂಬವರು ಸಾವನ್ನಪ್ಪಿದ್ದರು. ಇವರೆಲ್ಲರ ಸಾವು ನಿಜ ಅರ್ಥದಲ್ಲಿ ತುಂಬಲಾರದ ನಷ್ಟ.
ಅಣುಒಪ್ಪಂದ
ಅಣುಒಪ್ಪಂದ ಕಾರ್ಯಗತವಾಗಿರುವುದು 2008ರಲ್ಲಿ ಯುಪಿಎ ಸರ್ಕಾರ ತಲುಪಿದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದು. ಭಾರತ- ಅಮೆರಿಕ ಅಣು ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿಹಾಕಿದ್ದು ಭಾರತ ಅಮೆರಿಕದ ಸಹಾಯದೊಂದಿಗೆ ಅಣುಶಕ್ತಿ ಉತ್ಪಾದಿಸಲು ಶಕ್ತ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದಿರುವ ಭಾರತವು 30 ವರ್ಷಗಳ ಅಸ್ಪಶೃತೆಯಿಂದ ಹೊರಬಂದಿದೆ. ಐಎಇಎಯು ಅಣು ಒಪ್ಪಂದಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಭಾರತವು ಇತರ ಅಣುಶಕ್ತಿ ರಾಷ್ಟ್ರಗಳೊಂದಿಗೆ ಅಣು ವಹಿವಾಟು ನಡೆಸಬಹುದಾಗಿದೆ. ಆದರೆ ಈ ಒಪ್ಪಂದ ಆರೋಪ ವಿರೋಧಗಳಿಂದ ಮುಕ್ತವಾಗಿಲ್ಲ. ರಾಷ್ಟ್ರದ ಸಾರ್ವಭೌಮತೆಯನ್ನು ಯುಪಿಎ ಸರ್ಕಾರ ಅಮೆರಿಕದ ಮುಂದೆ ಒತ್ತೆ ಇರಿಸಿತು ಎಂಬ ಆರೋಪವನ್ನು ಮನಮೋಹನ್ ಸಿಂಗ್ ಎದುರಿಸುತ್ತಿದೆ.
ಬಿಹಾರ, ಅಸ್ಸಾಂ ಪ್ರವಾಹ
ಕೋಸಿ ನದಿಗೆ ನೇಪಾಳದಲ್ಲಿ ಕಟ್ಟಿದ ಅಣೆಕಟ್ಟೆಯ ಸ್ವಲ್ಪ ದೂರದಲ್ಲಿರುವ ಕಟ್ಟೆ ಒಡೆದು ಹರಿದ ನೀರು ಬಿಹಾರದ ಎಂಟು ಜಿಲ್ಲೆಗಳನ್ನು ಕೊಚ್ಚಿಕೊಂಡೇ ಹೋಯಿತು. ಲಕ್ಷಾಂತರ ಮಂದಿ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂತೆಯೇ ಅಸ್ಸಾಮಿನಲ್ಲಿ ಉಕ್ಕಿಹರಿದ ಪ್ರವಾಹವೂ ಸಾಕಷ್ಟು ವಿಪತ್ತನ್ನು ತಂದಿರಿಸಿದೆ. ಎಲ್ಲವನ್ನೂ ಕಳಕೊಂಡವರು ಸರ್ಕಾರಿ ಶಿಬಿರಗಳಲ್ಲಿ ಅನಿವಾರ್ಯವಾಗಿ ತಂಗಿದ್ದು, ಹೊಸಬೆಳಕಿಗಾಗಿ ಎದುರು ನೋಡುತ್ತಿದ್ದಾರೆ.
ಇತರ
ಕಳೆದ ವರ್ಷ ಸರಣಿ ಕೊಲೆಗಳಿಂದಾಗಿ ಸುದ್ದಿಯಲ್ಲಿದ್ದ ಉತ್ತರ ಪ್ರದೇಶದ ನೋಯ್ಡಾ ಈ ವರ್ಷವೂ ಸುದ್ದಿಯಲ್ಲಿತ್ತು. ಹದಿನಾಲ್ಕು ವರ್ಷದ ಬಾಲಕಿ ಅರುಷಿ ತಲ್ವಾರ್ ಮತ್ತು ಆಕೆಯ ಮನೆಗೆಲಸ ಮಾಡಿಕೊಂಡಿದ್ದ ಹೇಮಂತ್ ಎಂಬಾತನ ಸಾವು ರಾಷ್ಟ್ರಾದ್ಯಂತ ಸಂಚಲನ ಮೂಡಿಸಿತ್ತು. ಈ ಪ್ರಕರಣ ಹಲವು ತಿರುವುಗಳನ್ನು ಪಡೆದಿದ್ದು, ರಂಗುರಂಗಿನ ಕಥೆಗಳು ಬಿತ್ತರವಾಗಿದ್ದವು. ಇವುಗಳನ್ನು ಯಾವುದು ನಿಜ, ಯಾವುದು ಸುಳ್ಳು ಎಂಬುದು ಸತ್ತವರಿಗಷ್ಟೇ ಗೊತ್ತು. ಸಾವನ್ನಪ್ಪಿರುವ ಹುಡುಗಿ ಅರುಷಿ ತಲ್ವಾರ್ಳ ತಂದೆ ರಾಕೇಶ್ ತಲ್ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿ ಸುಮಾರು ಒಂದುವರೆ ತಿಂಗಳು ಜೈಲಿನಲ್ಲಿದ್ದರು. ಜೂನ್ ಒಂದರಂದು ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದೆಯಾದರೂ, ಕೊಲೆಗಾರನ್ಯಾರು ಎಂಬುದನ್ನು ಇನ್ನೂ ಭೇದಿಸಲಾಗಿಲ್ಲ. ಮತ್ತು ಈ ಸಂಬಂಧ ಬಂಧನಕ್ಕೀಡಾವರೆಲ್ಲ ಜಾಮೀನು ಪಡೆಯುವಲ್ಲಿ ಸಫಲರಾಗಿದ್ದಾರೆ.
ಚಂದ್ರಯಾನ ಎಂಬ ಯಶಸ್ಸಿನ ಕಾವ್ಯ
2008ರ ಅಕ್ಟೋಬರ್ 22ರ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದು. ಆ ದಿನ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಒಂದು ನವ ಇತಿಹಾಸ ಬರೆಯಿತು. ಖಂಡಿತ, ಇದರ ಹಿಂದೆ ನಮ್ಮ ವಿಜ್ಞಾನಿಗಳ ಕನಸಿದೆ, ವರ್ಷಗಳಕಾಲದ ಶ್ರಮವಿದೆ. ಇದೆಲ್ಲವೂ ಸಾಕಾರಗೊಂಡ ಆ ಅನಿರ್ವಚನೀಯ ಆನಂದದ ಕ್ಷಣದಲ್ಲಿ ವಿಜ್ಞಾನಿಗಳ ಹರ್ಷ ಮುಗಿಲು ಮುಟ್ಟಿತ್ತು, ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ದೇಶೀ ತಂತ್ರಜ್ಞಾನದ ಮಾನವ ರಹಿತ ಈ ಚಂದ್ರಯಾನ ಉಪಗ್ರಹದ ತನ್ನ ಯಾನ ಆರಂಭಿಸಿದಾಗ ಸಹಸ್ರ ಸಹಸ್ರ ಕಣ್ಣುಗಳು ಕುತೂಹಲದಿಂದ ವೀಕ್ಷಿಸಿದವು.
1,380 ಕೆಜಿ ತೂಕದ ಚಂದ್ರಯಾನವು 11 ಪೇಲೋಡ್ಗಳನ್ನು ಹೊತ್ತೊಯ್ದಿದೆ. ಉಪಗ್ರಹ ಉಡಾವಣೆಯ ಬಳಿಕದ ಎರಡು ವಾರಗಳ ಸರಣಿ ಪ್ರಕ್ರಿಯೆಯ ಬಳಿಕ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ತಲುಪಿದ್ದು ಚಂದ್ರನ ಮೇಲ್ಮೈಗಿಂತ 100 ಕಿಲೋಮೀಟರ್ ಮೇಲ್ಗಡೆಗೆ ತಲುಪಿ ಕಾರ್ಯಾಚರಣೆ ಆರಂಭಿಸಿದೆ.
ಚಂದ್ರಯಾನವು ಒಯ್ದಿರುವ 11 ಪೇಲೋಡ್ಗಳಲ್ಲಿ ಐದನ್ನು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಲಾಗಿದ್ದರೆ, ಮೂರನ್ನು ಯೂರೋಪ್ ಬಾಹ್ಯಾಕಾಶ ಏಜೆನ್ಸಿ ಹಾಗೂ ಒಂದು ಬಲ್ಗೇರಿಯಾ ಮತ್ತು ಎರಡು ಅಮೆರಿಕದಲ್ಲಿ ವೃದ್ಧಿಯಾಗಿದೆ. ಇವುಗಳು ಸುಮಾರು ಎರಡು ವರ್ಷಗಳ ಕಾಲ ಚಂದ್ರನ ಮೈಲೈಯ ಸಮಗ್ರ ವಿಚಾರಗಳ ಮಾಹಿತಿ ಸಂಗ್ರಹಿಸಲಿವೆ.
ಇನ್ನುಳಿದಂತೆ
* ವರ್ಷದ ಆದಿಯಲ್ಲಿ ಬೆಳಕಿಗೆ ಬಂದ ಕಿಡ್ನಿ ಹಗರಣದ ರೂವಾರಿ ಡಾ| ಅಮಿತ್ ನೇಪಾಳದಲ್ಲಿ ಬಂಧನ
* ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರಾಕೇಶ್ ಶರ್ಮಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ.
* ಓಬಿಸಿ ಮೀಸಲಾತಿಗೆ ಅಸ್ತು.
* ನಟ ಸಂಜಯ್ ದತ್ ಮೂರನೇ ವಿವಾಹ ಮತ್ತು ಅದಕ್ಕೆ ಕಾನೂನು ತೊಡಕು.
* ಜೋಧಪುರ ಚಾಮುಂಡ ದೇವಾಲಯದಲ್ಲಿ ಕಾಲ್ತುಳಿತದಿಂದಾಗಿ 224 ಮಂದಿ ಸಾವು
* ತನ್ನ ಮಗನಿಗೆ ಟಿಕೆಟ್ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ಎಐಸಿಸಿ ಕಾರ್ಯದರ್ಶಿಯಾಗಿದ್ದ ಮಾರ್ಗರೆಟ್ ಆಳ್ವ ರಾಜೀನಾಮೆ, ಸರಣಿ ಸರಣಿ ದಾಳಿಗಳಿಂದಾಗಿ ರಾಜೀನಾಮೆ ನೀಡಬೇಕಾಗಿ ಬಂದ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್, ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಹಾಗೂ ಮತ್ತಿತರ ಪ್ರಕರಣಗಳು ಮಾಧ್ಯಮಗಳ ಹೆಡ್ಲೈನ್ ಹಿಟ್ ಮಾಡಿದ್ದವು.
ಒಟ್ಟಿನಲ್ಲಿ 2008 ಸಿಹಿ ಕಹಿಗಳ ಮಿಶ್ರಣ. ಮುಂಬೈ ದಾಳಿ, ಬಿಹಾರದಲ್ಲಿ ಉಕ್ಕಿ ಹರಿದ ಪ್ರವಾಹ ಮುಂತಾದವುಗಳು ಈ ವರ್ಷ ನಮಗೆ ಮರೆಯಾಗಲಾರದ ಪಾಠಗಳನ್ನು ಕಲಿಸಿದೆ. 2009 ಎಲ್ಲರಿಗೂ ಶಾಂತಿಯ, ಸೌಹಾರ್ದದ, ಅಭ್ಯುದಯದ ಆರೋಗ್ಯಕರ ವರ್ಷವಾಗಲಿ ಎಂಬ ಹಾರೈಕೆಯೊಂದಿಗೆ,
ನಮಸ್ಕಾರ.