ಬಿಜೆಪಿ ನಾಯಕ, ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಲವ್ ಜಿಹಾದ್ ಬಗ್ಗೆ ನಿಮಗೆ ತಿಳಿಯದಿರಲು ಹೇಗೆ ಸಾಧ್ಯ ಎಂದು ಪತ್ರ ಮುಖೇನ ಪ್ರಶ್ನಿಸಿದ್ದಾರೆ.
ಲವ್ ಜಿಹಾದ್ ವಿರುದ್ಧ ಕೆಲವು ಬಿಜೆಪಿ ನಾಯಕರು ಮತ್ತು ವಿಶ್ವ ಹಿಂದು ಪರಿಷದ್ನಂತಹ ಹಿಂದು ಪರ ಸಂಘಟನೆಗಳು ಅಭಿಯಾನ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಕಳೆದ ವಾರ ರಾಜನಾಥ್ ಸಿಂಗ್ ಅವರನ್ನು ವರದಿಗಾರರು ಪ್ರಶ್ನಿಸಿದಾಗ ಲವ್ ಜಿಹಾದ್ ಅಂದರೇನು? ನಾನದರರ್ಥ ತಿಳಿದುಕೊಳ್ಳ ಬಯಸುತ್ತೇನೆ ಎಂದು ಸಿಂಗ್ ಹೇಳಿದ್ದರು.
ಇದನ್ನು ಪ್ರಶ್ನಿಸಿ ಗೃಹ ಸಚಿವರಿಗೆ ಪತ್ರ ಬರೆದಿರುವ ದಿಗ್ವಿಜಯ್ ಲವ್ ಜಿಹಾದ್ ಎಂದರೇನು ಎಂಬುದರ ಬಗ್ಗೆ ನಿಮಗೆ ತಿಳಿದಿಲ್ಲವೇ? ನಿಮ್ಮ ತವರು ರಾಜ್ಯ ಉತ್ತರಪ್ರದೇಶದಲ್ಲಿ ಬಿಜೆಪಿ, ವಿಶ್ವ ಹಿಂದು ಪರಿಷತ್ ಮತ್ತು ಆರ್ಎಸ್ ಎಸ್ ನಾಯಕರು ಬಳಸುತ್ತಿರುವ ಲವ್ ಜಿಹಾದ್ ಪರಿಭಾಷೆ ಕುರಿತು ನಿಮಗೆ ಅರಿವಿಲ್ಲ ಎಂಬುದನ್ನು ನಾನು ನಂಬುವುದಿಲ್ಲ ಎಂದಿದ್ದಾರೆ.
ಬಹುಶ: ನೀವು ಇತ್ತೀಚಿಗೆ ಪಾಂಚಜನ್ಯ ಮತ್ತು ಆರ್ಗನೈಸರ್ ( ಆರ್ಎಸ್ ಎಸ್ ಮುಖವಾಣಿಗಳು)ಗಳನ್ನು ಓದುತ್ತಿಲ್ಲ ಎನಿಸುತ್ತದೆ. ಅವುಗಳ ಮುಖಪುಟ ಲೇಖನಗಳು ಲವ್ ಜಿಹಾದ್ ಕುರಿತಾಗಿವೆ ಎಂದು ದಿಗ್ವಿಜಯ್ ಪತ್ರಮುಖೇನ ರಾಜನಾಥ್ ಅವರಿಗೆ ವ್ಯಂಗ್ಯವಾಡಿದ್ದಾರೆ.