ನಿನ್ನೆಯಷ್ಟೇ ಯುದ್ಧಸೇವಾ ಪದಕಕ್ಕೆ ಭಾಜನರಾಗಿದ್ದ 44 ರಾಷ್ಟ್ರೀಯ ರೈಫಲ್ಸ್ ತಂಡದ ಕಮಾಂಡಿಂಗ್ ಆಫೀಸರ್ ಕರ್ನಲ್ ಮುನೀಂದ್ರನಾಥ್ ರೈ ಅವರು ಉಗ್ರರೊಂದಿಗಿನ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರೊಂದಿಗಿನ ಹೋರಾಟದಲ್ಲಿ ಕರ್ನಲ್ ಮುನೀಂದ್ರನಾಥ್ ರೈ ಸೇರಿದಂತೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ ಘಟನೆಯಲ್ಲಿ ಸಂಜೀವ್ ಸಿಂಗ್ ಎಂಬ ಪೊಲೀಸ್ ಮುಖ್ಯ ಪೇದೆ ಸೇರಿದಂತೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರು ಕೂಡ ಸಾವನ್ನಪ್ಪಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.
ಪುಲ್ವಾಮ ಜಿಲ್ಲೆಯ ಮಿಂಡೋರಾ ಗ್ರಾಮದಲ್ಲಿನ ಟ್ರಾಲ್ ಏರಿಯಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿ ಪಡೆದ ಭಾರತೀಯ ಸೇನೆಯ ಯೋಧರು ಕೂಡಲೇ ಕಾರ್ಯಾಚರಣೆಗೆ ಇಳಿದರು. ಉಗ್ರ ಸಂಘಟನೆಯೊಂದಿಗೆ ಕೆಲ ಸ್ಥಳೀಯ ನಿವಾಸಿಗಳು ಸಂಪರ್ಕವಿರಿಸಿಕೊಂಡಿದ್ದು, ಅವರನ್ನು ಕಾಣಲೆಂದೇ ಉಗ್ರರು ಗ್ರಾಮಕ್ಕೆ ಆಗಮಿಸಿದ್ದರು. ಈ ವಿಚಾರ ತಿಳಿದ ಕರ್ನಲ್ ಮುನೀಂದ್ರನಾಥ್ ರೈ ಅವರ ನೇತೃತ್ವದ ತಂಡ ಕೂಡಲೇ ಕಾರ್ಯಾಚರಣೆಗೆ ಇಳಿಯಿತು.
ಉಗ್ರರೊಂದಿಗಿನ ತೀವ್ರ ಗುಂಡಿನ ಚಕಮಕಿಯಲ್ಲಿ ಕರ್ನಲ್ ಮುನೀಂದ್ರನಾಥ್ ರೈ ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಮೃತ ಉಗ್ರರನ್ನು ಆದಿಲ್ ಖಾನ್ ಮತ್ತು ಶಿರಾಜ್ದಾರ್ ಎಂದು ಗುರುತಿಸಲಾಗಿದೆ. ಈ ಪೈಕಿ ಆದಿಲ್ ಖಾನ್ ಎಂಬ ಉಗ್ರ ಇದೇ ಮಿಂಡೋರಾ ಗ್ರಾಮದವನೇ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ.
ವಿಪರ್ಯಾಸವೆಂದರೆ ಇಂದು ಹುತಾತ್ಮರಾದ ಕರ್ನಲ್ ಮುನೀಂದ್ರನಾಥ್ ರೈ ಅವರು ನಿನ್ನೆಯಷ್ಟೇ ಯುದ್ಧಸೇವಾ ಪದಕಕ್ಕೆ ಭಾಜನರಾಗಿದ್ದರು.