ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮೆಮನ್ಗೆ ರಾಜಕೀಯ ಬೆಂಬಲವಿಲ್ಲವಾದ್ದರಿಂದ ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಯಾಕೂಬ್ ಮೆಮನ್ ಮುಂಬೈ ಸ್ಫೋಟದಲ್ಲಿ ಭಾಗಿಯಾಗಿದ್ದಾನೆ. ಆದರೆ, ಗಲ್ಲು ಶಿಕ್ಷೆಗೆ ಆತ ಅರ್ಹನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂದಿನ ಪ್ರಧಾನಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ಯಾಕೂಬ್ ಮೆಮನ್ಗೆ ಗಲ್ಲು ಶಿಕ್ಷೆ ನೀಡಲು ಕಾರಣವಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಆರೋಪಿಗಳಿಗೆ ರಾಜಕೀಯ ಬೆಂಬಲವಿರುವುದರಿಂದ ಅವರಿಗೆ ಗಲ್ಲು ಶಿಕ್ಷೆಯಾಗಿಲ್ಲ. ಆದರೆ ಮೆಮನ್ಗೆ ಯಾವುದೇ ರೀತಿಯ ರಾಜಕೀಯ ಬೆಂಬಲವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳು ಮಮನ್ಗೆ ಗಲ್ಲು ಶಿಕ್ಷೆ ನೀಡಿರುವುದು ತುಂಬಾ ನಿರಾಸೆ ತಂದಿದೆ. ಒಂದು ವೇಳೆ ಗಲ್ಲು ಶಿಕ್ಷೆಗೆ ಗುರಿಪಡಿಸಿದಲ್ಲಿ ಮುಂಬೈ ಸ್ಫೋಟದಲ್ಲಿ ಮುಗ್ದ ಬಲಿಪಶುವಾದ ಜೀವಗಳಿಗೆ ನ್ಯಾಯ ದೊರೆಯುತ್ತದೆ ಎಂದಾದಲ್ಲಿ ಬಾಬ್ರಿ ಮಸೀದ್ ಧ್ವಂಸಗೊಳಿಸಿದ ಆರೋಪಿಗಳಿಗೂ ಕೂಡಾ ಮರಣದಂಡನೆಯಾಗಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
1993ರಲ್ಲಿ ನಡೆದ ಮುಂಬೈ ಸ್ಫೋಟದಲ್ಲಿ ಸುಮಾರು 900 ಮುಸ್ಲಿಮರು, ಹಿಂದುಗಳು ಜೀವವನ್ನು ಕಳೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೇವಲ ಮೂವರನ್ನು ಅರೋಪಿಗಳಾಗಿ ಘೋಷಿಸಲಾಗಿದೆ.ಹೀಗಾದಲ್ಲಿ ಯಾವ ರೀತಿ ನ್ಯಾಯ ದೊರೆಯಲು ಸಾಧ್ಯ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.