ಶನಿ ಶಿಂಗ್ಣಾಪುರ್ ಮತ್ತು ಹಾಜಿ ಅಲಿ ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕೊಡಬೇಕು ಎಂದು ಪ್ರತಿಭಟನೆಗಳು ನಡೆದಿರುವ ಮಧ್ಯೆಯೇ, ಮಧ್ಯಪ್ರದೇಶದ ಗೃಹ ಸಚಿವ ಬಾಬುಲಾಲ್ ಗೌರ್ , ಮಹಿಳೆಯರು ಮನೆಯಲ್ಲಿ ದೇವರಿಗೆ ಕೈಮುಗಿದರೆ ಸಾಕು ದೇವಸ್ಥಾನಕ್ಕೆ ಹೋಗುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಶನಿ ಶಿಂಗ್ಣಾಪುರ್ ದೇವಸ್ಥಾನದ ಪ್ರವೇಶಕ್ಕೆ ಒತ್ತಾಯಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಕುರಿತಂತೆ ಸುದ್ದಿಗಾರರು ಸಚಿವ ಬಾಬುಲಾಲ್ ಗೌರ್ ಅವರಿಗೆ ಪ್ರತಿಕ್ರಿಯೆ ಕೇಳಿದಾಗ, ಮಹಿಳೆಯರು ಮನೆಯಲ್ಲಿ ದೇವರಿಗೆ ಕೈಮುಗಿದರೆ ಸಾಕು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಹಲವು ಜಿಲ್ಲೆಗಳಿಂದ ಬಂದ 1500 ಕ್ಕೂ ಹೆಚ್ಚು ಮಹಿಳೆಯರು ಶನಿ ಶಿಂಗ್ಣಾಪುರ್ ದೇವಸ್ಥಾನದೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ಹಲವು ಶತಮಾನಗಳಿಂದ ದೇವಾಲಯದೊಳಗೆ ಮಹಿಳೆಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಸೋನೈ ಎನ್ನುವ ಚಿಕ್ಕ ಗ್ರಾಮದಲ್ಲಿರುವ ದೇವಾಲಯಕ್ಕೆ ಲಕ್ಷಾಂತರ ಪ್ರವಾಸಿಗರು ದೇಶ ವಿದೇಶಗಳಿಂದ ಆಗಮಿಸುತ್ತಾರೆ.
ಶನಿ ಶಿಂಗ್ಣಾಪುರದಲ್ಲಿರುವ ರಾಷ್ಟ್ರೀಯ ಬ್ಯಾಂಕ್ಗಳು ಕೂಡಾ ತಮ್ಮ ಬಾಗಿಲುಗಳನ್ನು ಸದಾ ತೆರೆದಿಟ್ಟಿರುತ್ತವೆ.ಯಾವತ್ತೂ ಬಾಗಿಲುಗಳಿಗೆ ಬೀಗ ಹಾಕುವುದಿಲ್ಲ.