ಮದುವೆ ಪ್ರಸ್ತಾಪ ತಳ್ಳಿ ಹಾಕಿದ 21 ವರ್ಷದ ಯುವತಿಯನ್ನು, ಆಕೆಯನ್ನು ಪ್ರೀತಿಸುತ್ತಿದ್ದ ಯುವಕ ಮನೆಯ ಬಾಲ್ಕನಿಯಿಂದ ದೂಡಿ ಹಾಕಿದ ಹೇಯ ಘಟನೆ ನವದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ನಡೆದಿದೆ.
ಬುಧವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದ್ದು ಆರೋಪಿಯನ್ನು 28 ವರ್ಷದ ಅಮಿತ್ ಎಂದು ಗುರುತಿಸಲಾಗಿದೆ.
ತನ್ನ ಸಹೋದರಿಯೊಂದಿಗೆ ಬಲವಂತವಾಗಿ ಯುವತಿಯ ಮನೆಗೆ ನುಗ್ಗಿದ ಅಮಿತ್ ಯುವತಿ ಮತ್ತು ಆಕೆಯ ಪರಿವಾರದವರೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾನೆ. ನನ್ನನ್ನು ಮದುವೆಯಾಗು ಎಂದು ಆಕೆಯನ್ನು ಒತ್ತಾಯಿಸಿದ ಆತ ಅವಳದನ್ನು ತಿರಸ್ಕರಿಸಿದಾಗ ಬಾಲ್ಕನಿಯಿಂದ ಆಕೆಯನ್ನು ತಳ್ಳಿದ್ದಾನೆ.
ತಕ್ಷಣ ಆಕೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದ್ದು ವೈದ್ಯರು ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ.
ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ನೆರೆಹೊರೆಯವರು ಯಶ ಕಂಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಫೇಸ್ಬುಕ್ ಮೂಲಕ ಪರಿಚಿತರಾಗಿದ್ದ ಅವರಿಬ್ಬರು ಪರಷ್ಪರ ಪ್ರೀತಿಸ ಹತ್ತಿದ್ದರು. ಆದರೆ ಅಮಿತ್ ನಿರುದ್ಯೋಗಿ ಎಂದು ತಿಳಿದ ಬಳಿಕ ಯುವತಿಯ ಪೋಷಕರು ಮದುವೆಗೆ ನಿರಾಕರಿಸಿದ್ದರು. ಆದರೂ ಅಮಿತ್ ಮದುವೆಗೆ ಒತ್ತಾಯಿಸುತ್ತಲೇ ಇದ್ದ ಎಂದು ತಿಳಿದು ಬಂದಿದೆ.
ಆದರೆ ತಾನು ಆಕೆಯನ್ನು ತಳ್ಳಿದ್ದನ್ನು ನಿರಾಕರಿಸಿರುವ ಅಮಿತ್, ಆಕೆ ನನ್ನಿಂದ 1 ಲಕ್ಷ ರೂಪಾಯಿ ತೆಗೆದುಕೊಂಡಿದ್ದಳು. ಹಣ ಕೊಡಲು ನಿರಾಕರಿಸಿದ ಆಕೆ ನನ್ನನ್ನು ಅಪರಾಧಿಯಾಗಿಸಲು ಬಾಲ್ಕನಿಯಿಂದ ಹಾರಿದ್ದಾಳೆ ಎಂದಿದ್ದಾನೆ.
ಆಸ್ಪತ್ರೆಗೆ ದಾಖಲಾಗಿರುವ ಪೀಡಿತೆಯ ಹೇಳಿಕೆ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ