ಪತಿ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಶಂಕೆಯಲ್ಲಿ ಪತ್ನಿಯೇ ಆತನ ಹತ್ಯೆಗೈದ ಕರಾಳ ಘಟನೆ ಹರಿದ್ವಾರದಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ದರೋಡೆಯ ಉದ್ದೇಶದಿಂದಾದ ಕೊಲೆ ಎಂದು ಬಿಂಬಿಸಲು ಆರೋಪಿ ರಿಚ್ಪಾಲ್, ಮೃತನ ಕುತ್ತಿಗೆಯಲ್ಲಿದ್ದ ಚೈನ್ ಮತ್ತು ಕೈಯ್ಯಲ್ಲಿದ್ದ ಉಂಗುರವನ್ನು ಎತ್ತಿಕೊಂಡು ತನ್ನ ಪತಿಯನ್ನು ಲೂಟಿ ಮಾಡಿ ಕೊಲೆಗೈಯ್ಯಲಾಗಿದೆ ಎಂದು ದೂರು ನೀಡಿದ್ದಾಳೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕೊಲೆ ರಹಸ್ಯವನ್ನು ಬಗೆ ಹರಿಸುವಲ್ಲಿ ಯಶಸ್ವಿಯಾಗಿದ್ದು, ಮೃತನ ಮೈಮೇಲಿದ್ದ ಬಂಗಾರವನ್ನು ಆರೋಪಿಯ ಅತ್ತಿಗೆಯ ಮನೆಯಿಂದ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ಸಮಯದಲ್ಲಿ ಪತಿ ಸುರೇಂದ್ರ ಪಾಲ್ ಸಿಂಗ್ (ಹರಿದ್ವಾರ್ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ)ನನ್ನು ಕೊಲೆಗೈದಿರುವುದನ್ನು ಆತನ ಪತ್ನಿ ಒಪ್ಪಿಕೊಂಡಿದ್ದಾಳೆ.
ತನ್ನ ಅತ್ತಿಗೆಯ ಸಹಾಯದಿಂದ ಆಕೆ ಗಂಡನನ್ನು ಕೊಲೆ ಮಾಡಿದ್ದು, ಕ್ರಿಕೆಟ್ ಬ್ಯಾಟ್ ಮತ್ತು ಸ್ಟಂಪ್ ಬಳಸಿ ಈ ಕೃತ್ಯವನ್ನೆಸಗಲಾಗಿದೆ. ತನ್ನ ಗಂಡ ವಿವಾಹೇತರ ಸಂಬಂಧವನ್ನು ಬೆಳೆಸಿಕೊಂಡಿದ್ದ. ಆತ ತನ್ನನ್ನು ಮತ್ತು ಮಕ್ಕಳನ್ನು ತ್ಯಜಿಸಿ ಬೇರೆ ಮಹಿಳೆಯ ಜತೆ ಸೆಟಲ್ ಆಗುತ್ತಾನೆಂಬ ಭಯದಿಂದ ಈ ಕೃತ್ಯವನ್ನೆಸಗಿರುವುದಾಗಿ ಆರೋಪಿ ಹೇಳಿದ್ದಾಳೆ.